ಮೋದಿ ಅವರ ಡಿಗ್ರಿ ಸರ್ಟಿಫಿಕೇಟ್ ಎಷ್ಟು ನಕಲಿಯೋ ಅಷ್ಟೇ ಡಿಪಿಆರ್ ಅನುಮತಿ ಪತ್ರವೂ ನಕಲಿ: ಬಿ.ಕೆ. ಹರಿಪ್ರಸಾದ್
ಹುಬ್ಬಳ್ಳಿ, ಜನವರಿ 3: ಬಿಜೆಪಿ ಸರ್ಕಾರದಲ್ಲಿ ನಾವು ನಿರೀಕ್ಷೆ ಮಾಡುವಂತಹದ್ದು ಏನೂ ಇಲ್ಲ. ಸುಳ್ಳಿನ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಈ ಕುರಿತು ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಜಲ-ಜನ ಆಂದೋಲನದಲ್ಲಿ ಮಾತನಾಡಿದ ಅವರು, ಅವರು ಹೊರಡಿಸಿರುವ ಡಿಪಿಆರ್ ನಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಹೆಚ್.ಕೆ ಪಾಟೀಲ್ ಅವರು ಹೇಳಿದ್ದಾರೆ. ಮೋದಿ ಅವರ ಡಿಗ್ರಿ ಸರ್ಟಿಫಿಕೇಟ್ ಎಷ್ಟು ನಕಲಿಯೋ ಅಷ್ಟೇ ಡಿಪಿಆರ್ ಅನುಮತಿ ಪತ್ರವೂ ನಕಲಿಯಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬಂದು 9 ವರ್ಷ ಆಗಿದೆ. ಡಬಲ್ ಇಂಜಿನ್, ತ್ರಿಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಅವರು ಯಾವತ್ತಾದರೂ ಸರ್ವಪಕ್ಷ ಸಭೆ ಮಾಡಿದ್ದಾರಾ? ಪ್ರಧಾನಮಂತ್ರಿಗಳೇ ನೀವು ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲಿ ದೇಶಕ್ಕೆ ಪ್ರಧಾನಿ. ನೀವು ಸಮಸ್ಯೆ ಬಗೆಹರಿಸಬೇಕು. ನೀವು ಸಮಸ್ಯೆ ಬಗೆಹರಿಸಲು ಸಭೆ ಮಾಡಿಲ್ಲ. ಅವರು ಪಾಳು ಬಿದ್ದಿರುವ ಮಸೀದಿ, ಮಂದಿರ ಮಾತ್ರ ಹುಡುಕುತ್ತಾರೆ. ಜನರಿಗೆ ಸ್ಪಂದಿಸುವ ಕಾರ್ಯಕ್ರಮ ಮಾಡಿಲ್ಲ. ಅವ್ರು ಮನ್ ಕಿ ಬಾತ್ ನಲ್ಲಿ ಎಷ್ಟು ಬಾರಿ ರೈತರು, ಕಾರ್ಮಿಕರು, ಮಹಿಳೆಯರ ಸುರಕ್ಷತೆ, ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ನೀಡುವ ವಿಚಾರ ಎಷ್ಟು ಬಾರಿ ಮಾತನಾಡಿದ್ದಾರೆ? ಈ ಹೋರಾಟ ಈ ಭಾಗದ ಜಿಲ್ಲೆಗಳ ಒಣ ಪ್ರದೇಶದಲ್ಲಿ ನೀರಿಗಾಗಿ ಆಹಾಕಾರ ಇದ್ದ ಸಂದರ್ಭದಲ್ಲಿ ಈ ಯೋಜನೆಗೆ ಮುಂದಾಗಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರಬೇಕಾದರೆ ಬಿಜೆಪಿಯನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದರು.

ಚರಿತ್ರೆಯೋ ದ್ರೋಹದ ಮೇಲೆ ನಿಂತಿದೆ: ಬಿಜೆಪಿ ವಿರುದ್ಧ ಸುರ್ಜೆವಾಲ ಕಿಡಿ
ಈ ವೇಳೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಮಹದಾಯಿ ಜಲಾಂದೋಲನದ ಅನಿವಾರ್ಯತೆ ಯಾಕೆ ಬಂತು? ದೆಹಲಿ ಹಾಗೂ ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಕೂತಿರುವವರು ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ. ಇವರ ಚರಿತ್ರೆಯೋ ದ್ರೋಹದ ಮೇಲೆ ನಿಂತಿದೆ. ಕುಡಿಯುವ ನೀರಾಗಲಿ, ಕೃಷಿಗೆ ಬೇಕಾದ ನೀರಾಗಲಿ ಅದನ್ನು ಈ ಭಾಗದ ಜನರಿಗೆ ಸಿಗದಂತೆ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇವರು ಯೋಜನೆಗೆ ಅಡ್ಡಿ ಮಾಡಿ ಸುಳ್ಳಿನ ಉತ್ಸವ ಮಾಡುತ್ತಾರೆ. ದೆಹಲಿಯಲ್ಲಿ 8 ವರ್ಷಗಳಿಂದ, ರಾಜ್ಯದಲ್ಲಿ 3 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಇವರು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವರೇ? ಎಂದರು.
ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದು, 2010ರಲ್ಲಿ ಮಹದಾಯಿ ನ್ಯಾಯಾಧಿಕರಣ ಮಾಡಲಾಯಿತು. 2002ರಲ್ಲಿ ವಾಜಪೇಯಿ ಅವರ ಸರ್ಕಾರ ಈ ಯೋಜನೆಗೆ ಅಡ್ಡಿಪಡಿಸಿ ದ್ರೋಹಬಗೆದಿದ್ದರು. ಇದೇ ದೋಖೆಬಾಜಿಗಳು 8 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದರೂ ಈ ಯೋಜನೆಯನ್ನು ಪೂರ್ಣಗೊಳಿಸುವುದಿರಲಿ, ಆರಂಭವನ್ನೇ ಮಾಡಿಲ್ಲ. ಬೊಮ್ಮಾಯಿ ಅವರು ಬಿಜೆಪಿ ನಾಯಕರು, ಪ್ರಹ್ಲಾದ್ ಜೋಷಿ ಅವರು ಉತ್ತರ ನೀಡುತ್ತಾರಾ? ಇವರು ಸುಳ್ಳು ಟ್ವೀಟ್ ಮಾಡುತ್ತಾರೆಯೇ ಹೊರತು ಜನರಿಗೆ ಉತ್ತರ ನೀಡುವುದಿಲ್ಲ. ಇದುವರೆಗೂ ಈ ಸರ್ಕಾರ ಅರಣ್ಯ, ಪರಿಸರ ಇಲಾಖೆಯ ಅನುಮತಿ ಪತ್ರ ಪಡೆದಿಲ್ಲ. ಯಾಕೆ? ಇಂದು ಬಿಜೆಪಿ ಸರ್ಕಾರ ಉತ್ತರಿಸಬೇಕು. ಬಿಜೆಪಿ ಸರ್ಕಾರ ಅಂತಿಮ ಗಳಿಗೆ ಬಂದಿದೆ.

ಬಿಜೆಪಿಯವರು ಈ ಯೋಜನೆಗೆ ಅನುಮತಿ ನೀಡಿ, ಅಱಣ್ಯ, ಪರಿಸರ ಇಲಾಖೆ ಅನುಮತಿ ಪಡೆದು ಈ ಯೋಜನೆ ಪೂರ್ಣಗೊಳ್ಲುವುದು ಯಾವಾಗ ಎಂದು ಬೊಮ್ಮಾಯಿ ಅವರು ಉತ್ತರ ನೀಡುವರೇ? ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಕೂಡ ಒಂದು ಪ್ರಮುಖ ಭಾಗವಾಗಿದೆ, ಇನ್ನು ಸಂರಕ್ಷಣಾ ಯೋಜನೆಯೂ ಆಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಈವರೆಗೂ ಅರ್ಜಿ ಸಲ್ಲಿಸಿಲ್ಲ ಯಾಕೆ? ಸತ್ಯ ಏನೆಂದರೆ ಇವರು ದ್ರೋಹಬಗೆಯುತ್ತಾರೆ. ಇವರಿಂದ ಮಹದಾಯಿ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ನಾವು ಹೊಸ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇವೆ. ಆ ಸಂಕಲ್ಪ ಏನೆಂದರೆ ಕಾಂಗ್ರೆಸ್ ಮುಂದಿನ ಸರ್ಕಾರ ಮೊದಲ ಸಂಪುಟದಲ್ಲಿ 500 ಕೋಟಿ ಅನುದಾನ ನೀಡಿ ಯೋಜನೆಗೆ ಚಾಲನೆ ನೀಡಲಾಗುವುದು. ಒಟ್ಟು 3 ಸಾವಿರ ಕೋಟಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ.
ಈ ಭಾಗದಲ್ಲಿ 5-7 ದಿನ ನೀರು ಸಿಗುವುದಿಲ್ಲ. ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ 24 ಗಂಟೆಗಳ ನೀರು ಹರಿಸುವ ಭರವಸೆ ಬಿಜೆಪಿ ನೀಡಿದ್ದು, ಆದನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿಲ್ಲ. ಇದು ಸಾಧ್ಯವಾಗುವುದಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ. ಹುಬ್ಬಳ್ಳಿ ಧಾರವಾಡದಿಂದ ಸರ್ಕಾರ ಬದಲಾವಣೆ ಮಾಡುವ ಸಂಕಲ್ಪ ಮಾಡೋಣ. ಇಂದು ನಾವು ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿರುವ ನಲ್ಲಿಗಳಲ್ಲಿ ಮಹದಾಯಿ ನೀರು ಬಾರದಿದ್ದರೆ ಬಿಜೆಪಿ ಸರ್ಕಾರ ಓಡಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿ. ಕುಡಿಯುವ ನೀರು, ವಿದ್ಯುತ್, ಕೃಷಿಗೆ ನೀರು ನೀಡುವ ಕೆಲಸವನ್ನು ನಾವು ಮಾಡುತ್ತೇವೆ.












Click it and Unblock the Notifications