ಲಕ್ಷ್ಮಣ ಸವದಿ ದೆಹಲಿ ಭೇಟಿ ಬಗ್ಗೆ ಚರ್ಚೆ; ಸ್ಪಷ್ಟನೆ ಕೊಟ್ಟ ಡಿಸಿಎಂ
ಬೆಂಗಳೂರು, ಜುಲೈ 29 : ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಭೇಟಿ ಬಗ್ಗೆ ಕರ್ನಾಟಕದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. "ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು" ಎಂದು ಲಕ್ಷ್ಮಣ ಸವದಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
Recommended Video
ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿ ದೆಹಲಿ ಭೇಟಿ ಹಲವು ಕುತೂಹಲಗಳನ್ನು ಹುಟ್ಟುಹಾಕಿತ್ತು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ? ಎಂಬ ವರದಿಗಳು ಮಾಧ್ಯಮಗಳಲ್ಲಿ ಬಂದಿದ್ದವು. ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಣ ಸವದಿ ಅಭಿಮಾನಿಗಳು ಹಾಕಿದ್ದ ಒಂದು ಪೋಸ್ಟ್ ವೈರಲ್ ಆಗಿತ್ತು.
ದೆಹಲಿ ಭೇಟಿ ಬಗ್ಗೆ ಲಕ್ಷ್ಮಣ ಸವದಿ ಫೇಸ್ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. "ಪ್ರೀತಿಯ ಹಿತೈಷಿಗಳಲ್ಲಿ ಹಾಗೂ ಮಾಧ್ಯಮ ಮಿತ್ರರಲ್ಲಿ ಮನವಿ" ಎಂದು ತಮ್ಮ ಭೇಟಿ ಬಗ್ಗೆ ವಿವರವನ್ನು ನೀಡಿದ್ದಾರೆ. 'ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ ಸವದಿ' ಎಂಬ ಫೇಸ್ಬುಕ್ ಪೋಸ್ಟ್ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.
"ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯವಾದ ಪ್ರಚಾರ ಬೇಡ. ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವ ನಿರ್ಧಾರಿತವಾಗಿದ್ದ ಕಾರ್ಯಕ್ರಮ. ಅದರ ಬಗ್ಗೆ ಕಲ್ಪಿತ ವರದಿ ದಯವಿಟ್ಟು ಬೇಡ ನನ್ನ ಕ್ಷೇತ್ರದ ಹಿತೈಷಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟು ಆಧಾರ ರಹಿತ ಪೋಸ್ಟ್ ಗಳನ್ನು ಮಾಡದಿರಿ" ಎಂದು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

ನಾವೆಲ್ಲರೂ ಪಕ್ಷಕ್ಕೆ ನಿಷ್ಠರು
"ಕ್ಷೇತ್ರದ ಜನತೆ ಪೋಸ್ಟ್ಗಳನ್ನು ಹಾಕಿದ್ದಾರೆ ಎನ್ನುತ್ತಾ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಮನವಿ ಮಾಡುತ್ತಿದ್ದೇನೆ. ಕೋವಿಡ್ ಸಮಸ್ಯೆಯನ್ನು ಎದುರಿಸಿ ಒಂದು ವರ್ಷ ಉತ್ತಮ ಆಡಳಿತ ನೀಡಿರುವ ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು" ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ನಮ್ಮ ಗಮನ ಆರೋಗ್ಯದ ಕಡೆ
"ರಾಜಕೀಯ ವಿಪ್ಲವಗಳ ಬಗ್ಗೆ ಮಾಧ್ಯಮಗಳು ಅಪ್ರಬುದ್ಧ ವಿಶ್ಲೇಷಣೆಯಲ್ಲಿ ತೊಡಗುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿಕರ. ನಮ್ಮ ಲಕ್ಷ್ಯ ಆರೋಗ್ಯ ಕ್ರಾಂತಿಯ ಕಡೆಗೆ ಇರಬೇಕಾದ ಹೊತ್ತಿದು. ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಬಹುಬೇಗ ಒದಗಿರುವ ಮಹಾಮಾರಿಯ ಸಂಕಟದಿಂದ ಹೊರಬರಬೇಕಾಗಿರುವ ಸಮಯ. ಮಾಧ್ಯಮ ಮಿತ್ರರ ಆದ್ಯತೆಯು ಅದೇ ಆಗಿರಲಿ ಎಂಬ ಆಶಯ" ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ನಿತಿನ್ ಗಡ್ಕರಿ ಭೇಟಿ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ್ದ ಲಕ್ಷ್ಮಣ ಸವದಿ, "ನಿರ್ಭಯಾ ಯೋಜನೆಯ ಅನ್ವಯ ಬಿಎಂಟಿಸಿ ಬಸ್ಗಳಲ್ಲಿ , ಮಹಿಳೆಯರ ಸುರಕ್ಷತೆಗಾಗಿ ಮೊಬೈಲ್ ಆ್ಯಪ್ ಹಾಗೂ ಕಣ್ಗಾವಲು ಅಳವಡಿಕೆ ಯೋಜನೆಗೆ 3 ತಿಂಗಳ ವಿಸ್ತರಣೆ ನೀಡುವಂತೆ" ಮನವಿ ಮಾಡಿದ್ದಾರೆ.

ಪ್ರಕಾಶ್ ಜಾವೇಡ್ಕರ್ ಭೇಟಿ
ಲಕ್ಷ್ಮಣ ಸವದಿ ಕೇಂದ್ರ ಪರಿಸರ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಭೇಟಿ ಮಾಡಿದ್ದಾರೆ. "ಬೆಂಗಳೂರು ನಗರದಲ್ಲಿ ಸಂಚರಿಸಲಿರುವ 300 ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರದ ಅವಧಿ ವಿಸ್ತರಿಸಬೇಕು. ಕೋವಿಡ್ ಲಾಕ್ ಡೌನ್ ಕಾರಣ ಕೆಲವು ತಿಂಗಳುಗಳ ಕಾಲ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರ ವಿಳಂಬವಾಗಲಿದೆ" ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಡಿ. ವಿ. ಸದಾನಂದ ಗೌಡ ಭೇಟಿ
ಲಕ್ಷ್ಮಣ ಸವದಿ ದೆಹಲಿಯಲ್ಲಿ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿರುವ ಡಿ. ವಿ. ಸದಾನಂದ ಗೌಡರನ್ನು ಭೇಟಿ ಮಾಡಿದ್ದಾರೆ. ಸಾರಿಗೆ ಇಲಾಖೆಗೆ ಸಂಬಂಧಪಟ್ಟ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.












Click it and Unblock the Notifications