ಜಾಧವ್ ವಿರುದ್ಧ ಭೂ ಹಗರಣ ಆರೋಪ, ನಾಯಕರು ಹೇಳುವುದೇನು?
ಬೆಂಗಳೂರು, ಆಗಸ್ಟ್ 25 : ಭೂ ಹಗರಣದ ಆರೋಪ ಎದುರಿಸುತ್ತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಭೂ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಅರವಿಂದ ಜಾಧವ್ ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಕೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಗುರುವಾರ ಸಿದ್ದರಾಮಯ್ಯ ಅವರಿಗೆ ವರದಿ ನೀಡುವ ಸಾಧ್ಯತೆ ಇದೆ.[ಜಾಧವ್ ಅವರ ವಿರುದ್ಧ ಭೂ ಹಗರಣ ಆರೋಪ?]
ಭೂ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ ಜಾಧವ್ ಅವರ ವಿರುದ್ಧ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಎಸಿಬಿ ಬುಧವಾರದಿಂದಲೇ ತನಿಖೆಯನ್ನು ಆರಂಭಿಸಿದೆ. ಅರವಿಂದ್ ಜಾಧವ್ ಅವರು ಎಲ್ಲವೂ ಕಾನೂನು ಪ್ರಕಾರವಾಗಿಯೇ ಇದೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.[ಜಾಧವ್ ವಿರುದ್ಧದ ಭೂ ಹಗರಣ, ಎಸಿಬಿ ತನಿಖೆ ಆರಂಭ]
'ತಮ್ಮ ತಾಯಿ ಭೂಮಿ ಖರೀದಿಸುವಾಗ ತಾವು ಕರ್ನಾಟಕ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. 1977-78ರಲ್ಲಿ ಸರ್ಕಾರದಿಂದ ಬೇರೆಯವವರಿಗೆ ಮಂಜೂರಾಗಿದ್ದ ಭೂಮಿಯನ್ನು ತಮ್ಮ ತಾಯಿ ಖರೀದಿಸಿದ್ದಾರೆ. ಮಂಜೂರಾತಿ ಮತ್ತು ಕ್ರಯಪತ್ರದ ಬಗ್ಗೆ ಯಾವುದೇ ಆಕ್ಷೇಪಣೆಯೂ ಸಲ್ಲಿಕೆಯಾಗಿಲ್ಲ. ಭೂ ಖರೀದಿ, ಪೋಡಿ, ಆರ್ಟಿಸಿ ಪಡೆಯುವಲ್ಲಿ ಯಾವುದೇ ಅಕ್ರಮ ನಡೆದಿಲ್ಲ' ಎಂದು ಜಾಧವ್ ಸ್ಪಷ್ಟಪಡಿಸಿದ್ದಾರೆ....[ಜಾಧವ್ ವಿವಾದ: ವರದಿ ಕೇಳಿದ ಸಿದ್ದರಾಮಯ್ಯ]
'ವರದಿ ನೀಡಲು ಸೂಚನೆ ನೀಡಿದ್ದೇನೆ'
'ಅರವಿಂದ ಜಾಧವ್ ಅವರ ವಿರುದ್ಧದ ಭೂ ಹಗರಣದ ಆರೋಪದ ಬಗ್ಗೆ ವರದಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
'ಭೇಟಿಯಾಗಲು ಸೂಚನೆ ನೀಡಿದ್ದೇನೆ'
ಜಾಧವ್ ಅವರ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, 'ಸಂಪೂರ್ಣ ಮಾಹಿತಿಯೊಂದಿಗೆ ಬಂದು ಭೇಟಿಯಾಗುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದ್ದೇನೆ. ತಾಯಿ ಹೆಸರಿಗೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೋ ಅಥವಾ ಖರೀದಿಸಿದ್ದಾರೋ ಎಂದು ನೋಡಬೇಕು' ಎಂದರು.
'ಭವಿಷ್ಯ ಕಾಗೋಡು ಅವರ ಕೈಯಲ್ಲಿದೆ'
'ಅರವಿಂದ ಜಾಧವ್ ಅವರ ಭವಿಷ್ಯ ಸಚಿವ ಕಾಗೋಡು ತಿಮ್ಮಪ್ಪ ಅವರ ಕೈಯಲ್ಲಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅವರು ಏನು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡೋಣ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
'ಸಿಬಿಐ ತನಿಖೆ ನಡೆಸಿ'
'ಭೂ ಹಗರಣದ ಆರೋಪ ಎದುರಿಸುತ್ತಿರುವ ಅರವಿಂದ ಜಾಧವ್ ಅವರನ್ನು ಕೂಡಲೇ ಪದಚ್ಯುತಿಗೊಳಿಸಿ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.
'ದೊಡ್ಡ ತಿಮಿಂಗಿಲಗಳು ಸರ್ಕಾರದಲ್ಲಿವೆ'
'ಅರವಿಂದ ಜಾಧವ್ ಅವರು ಮಾತ್ರವಲ್ಲ. ದೊಡ್ಡ ದೊಡ್ಡ ತಿಮಿಂಗಿಲಗಳು ಸರ್ಕಾರದಲ್ಲಿವೆ. ಎಲ್ಲಾ ಅಧಿಕಾರಿಗಳ ಆಸ್ತಿ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.