ಭೂ ಕಬಳಿಕೆ ಪ್ರಕರಣ: ಸಚಿವ ಭೈರತಿ ಬಸವರಾಜ್, ಶಂಕರ್ಗೆ ರಿಲೀಫ್
ಬೆಂಗಳೂರು, ಜನವರಿ 25; ಭೂ ಕಬಳಿಕೆ ಪ್ರಕರಣ ಸಂಬಂಧ ಸಚಿವ ಭೈರತಿ ಬಸವರಾಜ್ ಮತ್ತು ಶಾಸಕ ಆರ್. ಶಂಕರ್ ವಿರುದ್ಧದ ಖಾಸಗಿ ದೂರು ಸಂಬಂಧ 42ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಮುಂದುವರಿಸಿದೆ.
ಭೈರತಿ ಬಸವರಾಜ್, ಆರ್. ಶಂಕರ್ ಮತ್ತು ಎ. ಎಂ. ಮಾದಪ್ಪ ಅರ್ಜಿ ಆಲಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಹಿಂದೆ ನೀಡಿದ್ದ ಆದೇಶವನ್ನು ಮುಂದುವರೆಸಿತು, ವಿಚಾರಣೆಯನ್ನು ಫೆಬ್ರವರಿ 2ನೇ ವಾರಕ್ಕೆ ಮುಂದೂಡಿತು.
ಪ್ರಕರಣದ ವಿಚಾರಣೆಗೆ ಅಂಗೀಕರಿಸಿ (ಕಾಗ್ನಿಜೆನ್ ತೆಗೆದುಕೊಂಡ) ಮತ್ತು ಸಮನ್ಸ್ ಜಾರಿಗೊಳಿಸಿದ ಮತ್ತು ಪ್ರಕರಣದ ಬಗ್ಗೆ ಕೆ. ಆರ್. ಪುರ ಪೊಲೀಸರು ಸಲ್ಲಿಸಿದ ಬಿ-ರಿಪೋರ್ಟ್ ತಿರಸ್ಕರಿಸಿದ 42ನೇ ಹೆಚ್ಚುವರಿ ಸಿವಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.

ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಅಂಶಗಳು ಅರ್ಜಿದಾರರ ಮತ್ತು ಪ್ರತಿವಾದಿಗಳ ನಡುವೆ ಸಿವಿಲ್ ವ್ಯಾಜ್ಯವಿತ್ತು. ಅಲ್ಲದೆ, 2012ರಲ್ಲಿ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಕುರಿತು ಸಿವಿಲ್ ನ್ಯಾಯಾಲಯ, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶವನ್ನು ಪರಿಗಣಿಸಬೇಕಿದೆ. ಆದ್ದರಿಂದ ಇದು ಮಧ್ಯಂತರ ಆದೇಶ ನೀಡಲು ಇದು ಅರ್ಹ ಪ್ರಕರಣವಾಗಿದೆ ಎಂದು ಹೈಕೋರ್ಟ್ ಹಿಂದೆ ಅಭಿಪ್ರಾಯಪಟ್ಟಿತು.
ಪ್ರಕರಣದ ಹಿನ್ನೆಲೆ; ಬೆಂಗಳೂರು ಪೂರ್ವ ತಾಲೂಕಿನ ಕೆ. ಆರ್. ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೇ ನಂಬರ್ 375/2 ರಲ್ಲಿನ 22.43 ಎಕರೆ ಜಾಗ ಅದೂರ್ ಅಣ್ಣೈಯಪ್ಪಗೆ ಎಂಬುವರಿಗೆ ಸೇರಿದೆ. 2003ರ ಮೇ 21ರಂದು ಸಂಬಂಧಿಕರಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಅವರು ಖಾಲಿ ಕಾಗದಗಳ ಮೇಲೆ ಅದೂರ್ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡರು.
ನಂತರ ಪಾಲುದಾರಿಕೆ ಕರಾರು ಸಿದ್ಧಪಡಿಸಿಕೊಂಡು ಶಾಸಕ ಬೈರತಿ ಬಸವರಾಜ್ ಅವರಿಗೆ 2003ರ ಮೇ 21ರಂದು ಅಕ್ರಮವಾಗಿ 22.43 ಎಕರೆ ಜಮೀನು ಮಾರಾಟ ಮಾಡಿದ್ದಾರೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ಕುರಿತು 2018ರಲ್ಲಿ ಎಸಿಎಂಎಂ ಕೋರ್ಟ್ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೆ. ಆರ್. ಪುರ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ಪೊಲೀಸರು ತನಿಖೆ ನಡೆಸಿ ಬಿ-ರಿಪೋರ್ಟ್ ಸಲ್ಲಿಸಿದ್ದರು. ನಂತರ ಪ್ರಕರಣ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯಕ್ಕೆ (ಜನಪ್ರತಿನಿಧಿಗಳ ಕೋರ್ಟ್) ವರ್ಗಾವಣೆಯಗಿತ್ತು. ಆ ನ್ಯಾಯಾಲಯವು 2021ರ ಸೆಪ್ಟೆಂಬರ್ 9ರಂದು ಬಿ-ರಿಪೋರ್ಟ್ ತಿರಸ್ಕರಿಸಿತ್ತು.
ನಂತರ ಪ್ರಕರಣವು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಆ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ 2021ರ ನವೆಂಬರ್ 25ರಂದು ಭೈರತಿ ಬಸವರಾಜ್, ಆರ್. ಶಂಕರ್, ಮಾದಪ್ಪ ಮತ್ತು ಪಿಳ್ಳಮಾದಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿತ್ತು ಹಾಗೂ 2021ರ ಡಿಸೆಂಬರ್ 23ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತ್ತು.












Click it and Unblock the Notifications