SSLC Result: ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕ ಫಿಕ್ಸ್: ವಿದ್ಯಾರ್ಥಿಗಳಿಂದ ಗ್ರೇಸ್ ಮಾರ್ಕ್ಸ್ಗೆ ಡಿಮ್ಯಾಂಡ್
ಇತ್ತೀಚೆಗೆ ಮುಕ್ತಾಯಗೊಂಡ ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯ ಮೌಲ್ಯಮಾಪನದ ಕುರಿತು ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದ ಹಾಗೆ ಕಾಣುತ್ತಿಲ್ಲ. ಈ ವರ್ಷ ತೃತೀಯ ಭಾಷೆಯ ಪತ್ರಿಕೆಗೆ ಸರ್ಕಾರ ಹೇಳಿರುವ ಹಾಗೆ ಗ್ರೇಡ್ಗಳನ್ನು ನೀಡುವ ಬದಲು ಹಿಂದಿನಂತೆಯೇ ಅಂಕಗಳನ್ನು ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
ಇದರ ಜೊತೆಗೆ ಪರೀಕ್ಷಾ ನಿಯಮಗಳಲ್ಲಿ ಯಾವದೇ ಬದಲಾವಣೆ ತರುವುದಿದ್ದರೂ ಅಥವಾ ಗ್ರೇಡಿಂಗ್ ವ್ಯವಸ್ಥೆಗೆ ಬದಲಾಯಿಸುವ ಹೊಸ ನಿಯಮವನ್ನು ಜಾರಿಗೆ ತರುವುದಿದ್ದರೂ , ಅದನ್ನು ಮುಂದಿನ ಶೈಕ್ಷಣಿಕ ವರ್ಷದಿಂದ (2026-27) ಮಾತ್ರ ಜಾರಿಗೆ ತರಬಹುದು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ. ಈ ಆದೇಶ ಹೊರಬಿದ್ದ ನಂತರ, ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ ತಮಗೆ ಸ್ಪಷ್ಟ ಭರವಸೆ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.

ನ್ಯಾಯಾಲಯದ ಈ ಸ್ಪಷ್ಟನೆಯು ಅನೇಕ ವಿದ್ಯಾರ್ಥಿಗಳನ್ನು ತೀವ್ರ ಆತಂಕಕ್ಕೀಡುಮಾಡಿದೆ. ಇದಕ್ಕೆ ಮುಖ್ಯ ಕಾರಣ, ಪರೀಕ್ಷೆಗಳು ಆರಂಭವಾಗುವ ಮುನ್ನವೇ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತೃತೀಯ ಭಾಷೆಗೆ ಅಂಕಗಳ ಬದಲು ಕೇವಲ ಗ್ರೇಡ್ ನೀಡಲಾಗುವುದು ಎಂದು ಘೋಷಿಸಿದ್ದರು. ಈ ಹಿಂದಿನ ಪ್ರಕಟಣೆಗಳ ಆಧಾರದ ಮೇಲೆ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಂಡಿದ್ದರು. ತೃತೀಯ ಭಾಷೆಯ (ಉದಾಹರಣೆಗೆ ಹಿಂದಿ) ಅಂಕಗಳನ್ನು ಅಂತಿಮ ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ ಎಂಬ ಸರ್ಕಾರದ ಮಾತು ನಂಬಿದ್ದರಿಂದ, ಅನೇಕರು ಆ ವಿಷಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ ಮತ್ತು ಪರೀಕ್ಷೆಯನ್ನು ಹಗುರವಾಗಿ ತೆಗೆದುಕೊಂಡಿದ್ದರು.
ಆದರೆ, ಈಗ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಪೀಠವು "ಮಧ್ಯದಲ್ಲಿ ನಿಯಮಗಳನ್ನು ಬದಲಾಯಿಸುವಂತಿಲ್ಲ" ಎಂದು ಸ್ಪಷ್ಟ ಆದೇಶ ನೀಡಿದೆ. ಅಂದರೆ, ಅಸ್ತಿತ್ವದಲ್ಲಿರುವ ಹಳೆಯ ನಿಯಮಗಳ ಪ್ರಕಾರವೇ ಮೌಲ್ಯಮಾಪನ ನಡೆಯಲಿದ್ದು, ಮೂರನೇ ಭಾಷೆಗೆ ಕಡ್ಡಾಯವಾಗಿ ಅಂಕಗಳನ್ನು ನೀಡಲಾಗುತ್ತದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಉಡುಪಿ ಹಾಗೂ ಚಿಕ್ಕಮಗಳೂರಿನ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಈಗ ಅಂಕಗಳನ್ನು ನೀಡುವುದರಿಂದ ಮತ್ತು ಅದನ್ನು ಅಂತಿಮ ಶೇಕಡಾವಾರು ಲೆಕ್ಕಾಚಾರಕ್ಕೆ ಸೇರಿಸುವುದರಿಂದ ತಮ್ಮ ಒಟ್ಟು ಫಲಿತಾಂಶ ಕಡಿಮೆಯಾಗಬಹುದು ಎಂಬ ಭಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮೂರನೇ ಭಾಷೆಯ ಈ ಅಂಕಗಳನ್ನು ಅಂತಿಮ ಶೇಕಡಾವಾರು ಲೆಕ್ಕಾಚಾರದಲ್ಲಿ ಪರಿಗಣಿಸಬಾರದು ಎಂದು ಅವರು ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ಅಂಕಗಳನ್ನು ಕಡ್ಡಾಯವಾಗಿ ಪರಿಗಣಿಸುವುದೇ ಆದರೆ, ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು (grace marks) ನೀಡಬೇಕು ಅಥವಾ ಮೌಲ್ಯಮಾಪನವನ್ನು ಅತ್ಯಂತ ಉದಾರವಾಗಿ (lenient evaluation) ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪರೀಕ್ಷಾ ಸಮಯದಲ್ಲಿ ಸರ್ಕಾರದ ಕಡೆಯಿಂದ ಹೊರಬಿದ್ದ ಅಸ್ಪಷ್ಟ ನಿರ್ಧಾರಗಳು ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲವನ್ನು ಸೃಷ್ಟಿಸಿವೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಯಾವ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿತ್ತು.














Click it and Unblock the Notifications