ಬೆಂಗಳೂರು Fly 19 ವಿಮಾನದಲ್ಲಿ ಮತ್ತೆ ದೋಷ: 2 ತಾಸು ತಡವಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್, ಸುರಕ್ಷತೆಯ ಪ್ರಶ್ನೆ..
ಹುಬ್ಬಳ್ಳಿ: ಹೈದರಾಬಾದ್ನಿಂದ ಹುಬ್ಬಳ್ಳಿಗೆ ಬರುತ್ತಿದ್ದ Fly- 91 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ನಾಲ್ಕು ಗಂಟೆ ತಡವಾಗಿ ತುರ್ತು ಲ್ಯಾಂಡ್ ಆಗಿತ್ತು. ಇದೀಗ ಬೆಂಗಳೂರು-ಹುಬ್ಬಳ್ಳಿಗೆ ತೆರಳಿದ್ದ ಅದೇ Fly- 91ವಿಮಾನದಲ್ಲಿ ಮತ್ತೆ ಅಂಥದ್ದೆ ತೊಂದರೆ ಆಗಿದೆ. ಹೀಗಾಗಿ ಎರಡು ಗಂಟೆಗಳ ಕಾಲ ಆಗಸದಲ್ಲೇ ಹಾರಾಡಿ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ಅವಧಿಯಲ್ಲಿ ಪ್ರಯಾಣಿಕರು ಜೀವ ಭಯದಿಂದ ಆತಂಕಗೊಂಡು ಪರಾಡಿದ್ದಾರೆ. ಎರಡನೇ ಬಾರಿ ಫ್ಲೈ ವಿಮಾನದಲ್ಲಿ ಇಂಥಹ ತೊಂದರೆ ಕಾಣಿಸಿಕೊಂಡಿದ್ದು ಕೆಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಇದೇ ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಬೆಂಗಳೂರು ಮತ್ತು ಹುಬ್ಬಳ್ಳಿ-ಹೈದರಾಬಾದ್ಗೆ Fly- 91 ವಿಮಾನ ಸಂಚಾರ ಆರಂಭವಾಗಿದೆ. ಇದರಿಂದ ದೇಶಿಯ ವಿಮಾನ ಸೇವೆಯಲ್ಲಿ ಸುಧಾರಣೆಯನ್ನು ನಿರೀಕ್ಷಿಸಲಾಗಿದೆ. ಆದರೆ ಈ ವಿಮಾನವು ಪದೇ ಪದೇ ತಾಂತ್ರಿಕ ಹಾಗೂ ಇನ್ನಿತರ ಸಮಸ್ಯೆ ಎದುರಿಸುತ್ತಿದೆ. ಇದರಿಂದ ಪ್ರಯಾಣಿಕರು ಈ ವಿಮಾನದ ಮೇಲಿನ ಭರವಸೆಯನ್ನು ಕಳೆದುಕೊಳ್ಳುವಂತಾಗಿದೆ.

ಬೆಂಗಳೂರು-ಹುಬ್ಬಳ್ಳಿ ವಿಮಾನದಲ್ಲಿ ಆಗಿದ್ದೇನು?
ಬೆಂಗಳೂರಿನಿಂದ ಈ ಫ್ಲೈ-91 ವಿಮಾನವು (IC3411) ಮಂಗಳವಾರ ಸಂಜೆ4.55 ಟೇಕಾಫ್ ಆಗಿದೆ. ಸಂಜೆ 6.15ಕ್ಕೆ ಗಮ್ಯಸ್ಥಳ ಹುಬ್ಬಳ್ಳಿ ತಲುಪಬೇಕಿತ್ತು. ಆದರೆ ವಿಮಾನ ಲ್ಯಾಂಡ್ ಆಗುವಲ್ಲಿ ವಿಫಲವಾಗಿದೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಹಾರಾಟ ನಡೆಸಿದೆ. ಈ ವೇಳೆ ಒಳಗಿದ್ದ ಅಂದಾಜು 20ಕ್ಕೂ ಅಧಿಕ ಪ್ರಯಾಣಿಕರು ಜೀವಭಯದಿಂದ ಕೂಗಾಡಿದ್ದಾರೆ. ವಿಮಾನ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವವರೆಗೂ ಜೀವ ಕೈಲಿ ಹಿಡಿದು ದೇವರ ಸ್ಮರಿಸಿದ್ದಾರೆ. ಒಳಗಿದ್ದವರ ಸ್ಥಿತಿ ಬದುಕಿದರೆ ಸಾಕಪ್ಪಾ ಎನ್ನುವಂತಾಗಿತ್ತು.
ನಂತರ ವಿಮಾನವು ನಿಗದಿಯಂತೆ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ 9.15ಕ್ಕೆ ಲ್ಯಾಂಡ್ ಆಗಿದೆ. ಪ್ರಯಾಣಿಕರಿಗೆ ಹೋದ ಪ್ರಾಣ ಬಂದಂತಾಗಿತ್ತು. ವಿಮಾನದಲ್ಲಿ ತಾಂತ್ರಿಕ ದೋಷವೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಆದರೆ ಈ ಬಗ್ಗೆ ಸಂಸ್ಥೆ ನಿಖರ ಉತ್ತರ ನೀಡಬೇಕಿದೆ.
ಹೈದರಾಬಾದ್ ವಿಮಾನದ್ದು ಇದೇ ಪರಿಸ್ಥಿತಿ?
ಏಪ್ರಿಲ್ 19ರಂದು ಸಹಿತ ಹೈದರಾಬಾದ್ನಿಂದ ಹುಬ್ಬಳ್ಳಿಗೆ ಬರಬೇಕಿದ್ದ ವಿಮಾನವು ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹೈದರಾಬದ್-ಹುಬ್ಬಳ್ಳಿ ಫ್ಲೈ-91 ವಿಮಾನ (IC3401) ಮಧ್ಯಾಹ್ನ 3 ಗಂಟೆಗೆ ಹೊರಟು 4.30ಕ್ಕೆ ಬರಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಹಾರಾಟ ನಡೆಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಈ ವೇಳೆ ಹತ್ತಾರು ಪ್ರಯಾಣಿಕರು ಕಣ್ಣೀರಿಟ್ಟು ದೇವರೇ ಬದುಕಿಸಿಬಿಡಪ್ಪ ಎಂದು ಕೈ ಮುಗಿದು ಕೇಳಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಹವಾಮಾನ ವೈಪರೀತ್ಯ ಕಾರಣವಾ? ಇದು ನಿಜವೇ?
ಹೈದರಾಬಾದ್ನಿಂದ ಬಂದಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಫ್ಲೈ 91 ವಿಮಾನ ಸಂಸ್ಥೆ ಪ್ರತಿನಿಧಿಗಳು ಹಾರಿಕೆ ಉತ್ತರ ನೀಡಿದ್ದರು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಈ ರೀತಿ ಆಗಿದೆ ಎಂದಿದ್ದರು. ಬೆಂಗಳೂರಲ್ಲಿ ಲ್ಯಾಂಡ್ ಆದ ಬಳಿಕ ತಮ್ಮಿಂದ ಪ್ರಯಾಣಿಕರಿಗೆ ತಡವಾಗಿದೆ, ಭಯಗೊಂಡಿದ್ದಾರೆ ಎಂದು ಸಣ್ಣ ಸಮಾಧಾನ ಮಾಡುವ, ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಾಮಾನ್ಯ ವ್ಯವಧಾನನ್ನೂ ವಿಮಾನ ಸಂಸ್ಥೆ ತೋರಲಿಲ್ಲ. ಇದರಿಂದ ಸಂಸ್ಥೆ ವಿರುದ್ಧ ಸಾರ್ವಜನಿಕವಾಗಿ ಸಾಕಷ್ಟು ಟೀಕೆ ವ್ಯಕ್ತವಾಗಿವೆ.
ಇದೀಗ ಬೆಂಗಳೂರು-ಹುಬ್ಬಳ್ಳಿ ವಿಮಾನದಲ್ಲಿ ಮತ್ತದೇ ತೊಂದರೆ ಆಗಿದೆ. ಜನರ ಜೀವದ ಜೊತೆ ಆಟವಾದೇ ಆಗಿರುವ ತೊಂದರೆ ಪತ್ತೆ ಮಾಡಿ ಸೂಕ್ತ ಸೇವೆ ನೀಡಬೇಕು. ಹವಾಮಾನ ತೊಂದರೆ ಎಂದು ಸಬೂಬು ಹೇಳಬಾರದು ಎಂದು ಸಾರ್ವಜನಿಕ ಒತ್ತಾಯ ಕೇಳಿ ಬಂದಿದೆ.














Click it and Unblock the Notifications