ಕರ್ನಾಟಕದಲ್ಲಿ 'ಗುಜರಾತ್ ಮಾಡೆಲ್'ಗೆ ಸಿಗದ ಮನ್ನಣೆ: ಸಂಕಷ್ಟದಲ್ಲಿ ಬಿಜೆಪಿ- ಮಹತ್ವದ ಕಾರಣಗಳನ್ನು ತಿಳಿಯಿರಿ
ಬೆಂಗಳೂರು, ಏಪ್ರಿಲ್ 19: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಹಲವು ಮಹತ್ವದ ಕಸರತ್ತುಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ 'ಗುಜರಾತ್ ಮಾಡೆಲ್' ಅನ್ನು ಕರ್ನಾಟಕದಲ್ಲಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಆದರೆ, ಗುಜರಾತ್ ಮಾಡೆಲ್ ಅನ್ನು ಕರ್ನಾಟಕದಂತಹ ದಕ್ಷಿಣ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದು ಬಿಜೆಪಿಗೆ ಕಷ್ಟಕರ ಕೆಲಸವೆಂದೇ ಹೇಳಲಾಗುತ್ತಿದೆ.
ಏನಿದು ಗುಜರಾತ್ ಮಾಡೆಲ್?
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲಿ 'ಹೊಸಬರಿಗೆ ಮಣೆ' ಹಾಕುವ ತಂತ್ರವನ್ನು ಬಿಜೆಪಿ ಬಳಸಿಕೊಂಡಿತ್ತು. ಹಲವು ಬಾರಿ ಶಾಸಕರಾಗಿರುವ ಹಿರಿಯ ಹಾಗೂ ಪ್ರಬಲ ನಾಯಕರಿಗೆ ಟಿಕೆಟ್ ನಿರಾಕರಿಸಿ ಯುವಕರಿಗೆ ದಾರಿ ಮಾಡಿಕೊಟ್ಟಿತ್ತು. ಈ ಯೋಜನೆಯಲ್ಲಿ ಬಿಜೆಪಿ ಭಾರೀ ಯಶಸ್ಸನ್ನು ಕಂಡಿತ್ತು. ಇಲ್ಲಿ ಹೊಸಬರಿಗೆ ಮಣೆ ಹಾಕುವುದು ಅಷ್ಟೇ ಅಲ್ಲದೇ, ಪ್ರಧಾನಿ ಮೋದಿ ಅವರ ವರ್ಚಸ್ಸು ಕೆಲಸ ಮಾಡಿತ್ತು.

ಕರ್ನಾಕದಲ್ಲಿಯೂ 'ಗುಜರಾತ್ ಮಾಡೆಲ್'
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೂ ಗುಜರಾತ್ ಮಾಡೆಲ್ ಅನ್ನು ಬಿಜೆಪಿ ಬಹುತೇಕ ಕಾರ್ಯಗತಗೊಳಿಸಿದೆ. ಕನಿಷ್ಠ 72 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೆ, ಗುಜರಾತ್ನಂತೆ ಇಲ್ಲಿನ ಹಿರಿಯ ನಾಯಕರು ಚುನಾವಣಾ ಕಣದಿಂದ ಹಿಂದೆ ಸರಿಯದೇ ಬಿಜೆಪಿ ವಿರುದ್ಧ ಸಿಡಿದೆದಿದ್ದಾರೆ.
ಪ್ರಮುಖ ಲಿಂಗಾಯತ ನಾಯಕರಾದ ಲಕ್ಷ್ಮಣ ಸವದಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಯಡಿಯೂರಪ್ಪನವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಅವರ ಪುತ್ರ ಬಿ ವೈ ವಿಜಯೇಂದ್ರ ಸಲುವಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಇನ್ನೊಬ್ಬ ಪ್ರಮುಖ ಲಿಂಗಾಯತ ನಾಯಕ ಆಯನೂರು ಮಂಜುನಾಥ್ ಅವರು ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಹಾಗೂ ಅಸಮಾಧಾನದ ಬೆಂಕಿಯಲ್ಲಿ ಬೇಯುತ್ತಿದೆ.

ಬಿಜೆಪಿಗೆ ನುಂಗಲಾರದ ತುತ್ತಾದ ಜಾತಿ ರಾಜಕಾರಣದ
ಕರ್ನಾಟಕದ ಪ್ರಬಲ ಸಮುದಾಯಗಳ ನಾಯಕರು ತಮ್ಮದೇ ಆದ ವೈಯಕ್ತಿಕ ವರ್ಚಸ್ಸನ್ನು ಹೊಂದಿದ್ದಾರೆ. ಅವರು ತಮ್ಮ ಕ್ಷೇತ್ರಗಳಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರಾಬಲ್ಯ ಇಟ್ಟುಕೊಂಡಿದ್ದಾರೆ. ಬಲಿಷ್ಠ ಸಮುದಾಯಗಳ ನಾಯಕರು ಸ್ಥಳೀಯವಾಗಿ ಜನಬೆಂಬಲವನ್ನು ಹೊಂದಿದ್ದಾರೆ. ಇದು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.
ಗುಜರಾತ್ನಲ್ಲಿ ಮೋದಿ ಹಾಗೂ ಅಮಿತ್ ಶಾ ಜೋಡಿಯ ನಿರ್ಧಾರವೇ ಅಂತಿಮವಾಗಿದೆ. ಆದರೆ, ಕರ್ನಾಟಕದಲ್ಲಿ ಸ್ಥಳೀಯ ನಾಯಕರ ನಿರ್ಧಾರಗಳು ಮಹತ್ವ ಪಡೆದುಕೊಳ್ಳುತ್ತವೆ ಎಂಬುದು ಬಿಜೆಪಿ ನಾಯಕತ್ವದ ಅರಿವಿಗೆ ಬಂದಿಲ್ಲ ಎಂಬುದನ್ನು ಬಿಜೆಪಿ ತೊರೆದ ನಾಯಕರು ಪರೋಕ್ಷವಾಗಿ ಹೇಳಿದ್ದಾರೆ. ಹೀಗಾಗಿ, ಬಿಜೆಪಿಯ ಹೈಮಾಂಡ್ನ ಕಟ್ಟಪ್ಪಣೆಗಳಿಗೆ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕರು ಸೊಪ್ಪು ಹಾಕದಿರುವುದು ಕಂಡುಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್ ಸೇರಿ ಟಿಕೆಟ್ ಅನ್ನು ಪಡೆಯುವಲ್ಲಿಯೂ ಯಶಸ್ವಿ ಆಗಿದ್ದಾರೆ.

ಕನ್ನಡದ ಅಸ್ಮಿತೆ- ಬಿಜೆಪಿಗೆ ಕಠಿಣ ಸವಾಲು
ಗುಜರಾತ್ನಂತೆ ಹಿಂದಿ ಭಾಷೆಯನ್ನು ಕರ್ನಾಟಕದಲ್ಲಿ ಅಪ್ಪಿಕೊಳ್ಳದಿರುವುದು ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳುವಲ್ಲಿ ಕಷ್ಟಪಡುತ್ತಿರುವುದಕ್ಕೆ ಇದೂ ಕಾರಣವಾಗಿದೆ. ದಕ್ಷಿಣ ರಾಜ್ಯಗಳಲ್ಲಿನ ಭಾಷಾ ಅಸ್ಮಿತೆ ಹಿರಿಮೆಯನ್ನು ಹತ್ತಿಕ್ಕುವುದು ಬಿಜೆಪಿ ಬಹುದೊಡ್ಡ ಸವಾಲಾಗಿದೆ. ಇಲ್ಲಿನ ರಾಜಕಾರಣ, ಜಾತಿ, ಭಾಷೆ ಹಾಗೂ ಸ್ಥಳೀಯ ಅಸ್ಮಿತೆಗಳ ಮೇಲೆ ನಿಂತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಎಲ್ಲ ಸಂಕೀರ್ಣತೆಗಳನ್ನು ಗಮನಿಸುವುದಾದರೆ ಬಿಜೆಪಿ ಈಗ ಕರ್ನಾಟಕದಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವುದು ಗೋಚರವಾಗುತ್ತಿದೆ.












Click it and Unblock the Notifications