ಪ್ರಭಾವಿ ಹೆಣ್ಣಿನ ರಕ್ಷಣೆ ಮುಂದೆ ನನ್ನ ನೋವು ಯಾರಿಗೂ ಕಾಣಿಸಲಿಲ್ಲ- ಕುಸುಮಾ
ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕಿ ಕುಸುಮಾ ಹನುಮಂತರಾಯಪ್ಪ ಕರ್ನಾಟಕದ ಜನಪ್ರಿಯ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಪತ್ನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಡಿ.ಕೆ ರವಿ ಅವರ ಸಾವಿನ ಬಳಿಕ ಏನಾಯ್ತು? ಅಂದು ಕುಸುಮಾ ಅವರ ಮನಸ್ಥಿತಿ ಹೇಗಿತ್ತು? ಎನ್ನುವುದರ ಬಗ್ಗೆ ವಾರ್ತಾ ಭಾರತಿ ವಾಹಿನಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಸ್ವತಃ ಕುಸುಮಾ ಅವರೇ ಮಾತನಾಡಿದ್ದಾರೆ.
'ಈಗ ಹೇಗಾಗಿದೆ ಅಂದರೆ ಯಾರದ್ದೋ ಒಂದು ಸಾವನ್ನು ಬಳಸಿಕೊಳ್ಳುವಂತದ್ದು, ಅವರ ಸ್ವಾರ್ಥಕ್ಕೆ ಯಾರದ್ದೋ ಸಾವಿನ ವಿಚಾರವನ್ನು ಬಳಸಿಕೊಳ್ಳುವುದು ನಡೆಯುತ್ತಿದೆ. ಒಂದು ಸಾವಿನಲ್ಲೂ ರಾಜಕಾರಣ ಮಾಡುವುದನ್ನು ನಾವು ನೋಡಿದ್ದೇವೆ. ನನಗೆ ಸ್ವತಃ ಇದು ಗೊತ್ತಿದೆ. ಯಾಕೆಂದರೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಯಲ್ಲಿ ನಡೆದಿದ್ದೂ ಕೂಡ ಅದೆ'.

'ಇವತ್ತು ನಾನು ಅವಮಾನಗಳನ್ನು ನೋಡಿದ್ದೇನೆ. ಸನ್ಮಾನಗಳನ್ನೂ ನೋಡಿದ್ದೇನೆ. ನನ್ನ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸಿ ನನ್ನನ್ನು ಕುಗ್ಗಿಸಬಹುದು ಎಂದಕೊಂಡರೆ ಅದು ತಪ್ಪು, ನನಗೆ ನೆನಪಿಸುವ ಅವಶ್ಯಕತೆ ಇಲ್ಲ ಯಾಕೆಂದರೆ ಪ್ರತಿ ದಿನ ನನಗೆ ಅದು ನೆನಪಾಗುತ್ತದೆ. ಆ ಸಮಯದಲ್ಲಿ ನನ್ನ ಮೇಲೆ ಬಂದ ಆರೋಪಗಳಿಗೆ ನಾನು ಉತ್ತರ ಕೊಡಲಿಲ್ಲ. ಯಾಕೆಂದರೆ ಅವತ್ತು ನನಗೆ ನಾನು ಮುಖ್ಯ ಆಗಿರಲಿಲ್ಲ. ಇವತ್ತು ಅನಿಸುತ್ತದೆ ನಾನು ಉತ್ತರ ಕೊಡುವ ಕೆಲಸ ಮಾಡಬೇಕಿತ್ತು ಅಂತಾ' ಎಂದರು.
'ಆ ಕಹಿ ಘಟನೆ ಆದ ಸಂದರ್ಭದಲ್ಲಿ ರವಿ ಅವರ ಸ್ನೇಹಿತರು ಬಂದು ಹೇಳಿದ ಮಾತು, ಮೇಡಂ ಇಡೀ ರಾಜ್ಯ ಅವರನ್ನು ಹೊಗಳುತ್ತಿದೆ. ಎಷ್ಟೋ ಜನ ಮಕ್ಕಳು ಅವರಿಂದ ಸ್ಫೂರ್ತಿ ಪಡೆದು ಅಧಿಕಾರಿಯಾಗಬೇಕು ಅಂದುಕೊಳ್ಳುತ್ತಿದ್ದಾರೆ. ದಯವಿಟ್ಟು ನೀವೇನು ಮಾತನಾಡಲು ಹೋಗಬೇಡಿ. ಅವರ ಬಗ್ಗೆ ಏನೂ ಹೇಳುವುದೂ ಬೇಡ. ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ ಅಂತಾ ಹೇಳಿದರು. ಅವರೆಲ್ಲಾ ಈಗಲೂ ನನಗೆ ಹಿತೈಷಿಗಳು. ಹೀಗಾಗಿ ಆ ಸಂದರ್ಭದಲ್ಲಿ ಸುಮ್ಮನಾಗಿದ್ದೆ'.
'ಈಗ ಅನಿಸುತ್ತದೆ ನಾನೂ ಸ್ವಾರ್ಥಿಯಾಗಬೇಕಿತ್ತು. ಅವತ್ತು ನನ್ನ ಜೀವನದಲ್ಲಿ ಆಗಿದ್ದನ್ನು ಹೇಳಿಕೊಂಡಿದ್ದರೆ ಇವತ್ತು ಈ ಮಟ್ಟಿನ ಪರಿಸ್ಥಿತಿ ಬರುತ್ತಿರಲಿಲ್ಲವೇನೋ, ಅವತ್ತು ನಾನು ಮುಖ್ಯವಲ್ಲ, ಅವರು ಇಷ್ಟು ಜನಕ್ಕೆ ಸ್ಫೂರ್ತಿ ಎಂದ ಮೇಲೆ ಅದೇ ಮುಂದುವರಿಯಲಿ ಅಂತಾ ಸುಮ್ಮನಾದೆ. ನನ್ನದು ತಪ್ಪು ಎಂದುಕೊಂಡಿದ್ದಾರೆ. ನಾನು ಕೆಟ್ಟವಳು ಎಂದುಕೊಂಡಿದ್ದಾರೆ. ನನ್ನಿಂದ ತಪ್ಪಾಗಿದೆ ಅಂದರೆ ಕಾಲ ಉತ್ತರ ಕೊಡುತ್ತದೆ ಅಂತಾ ಅಂದುಕೊಂಡಿದ್ದೆ' ಎಂದು ಹೇಳಿದರು.
'ಪ್ರಕರಣದಲ್ಲಿ ಸಿಬಿಐ ತನಿಖೆ ಆಯ್ತು. ತನಿಖೆಯಲ್ಲಿ ಎಲ್ಲಾ ನೇರವಾಗಿ ವರದಿ ಬಂತು. ನಾನು ಯಾವಗಲೂ ಅಂದುಕೊಂಡಿದಷ್ಟೇ ನನ್ನ ವಸ್ತು ಸರಿ ಇಲ್ಲ ಅಂದ ಮೇಲೆ ನಾನು ಯಾರನ್ನೂ ದೂಷಿಸಿ ಏನು ಆಗಬೇಕಾಗಿಲ್ಲ. ಅವತ್ತು ನಾನು ನನ್ನ ಬಗ್ಗೆ ಯೋಚನೆ ಮಾಡಲಿಲ್ಲ. ನನಗೆ ನಾನೇನು ತಪ್ಪು ಮಾಡಿದೆ ಅಂತಾ ಇಂತಹ ಪರಿಸ್ಥಿತಿ ಬಂತು ಎನ್ನುವ ನೋವಿತ್ತು ಅಷ್ಟೇ'.
'ನನ್ನ ವಿರುದ್ಧ ಆರೋಪ ಮಾಡಿದರೂ ನನ್ನ ಚುಚ್ಚಿ ಮಾತನಾಡಿದರೂ ನನಗೆ ರೋಷ ಅಂತಾ ಬರಲೇ ಇಲ್ಲ. ನನ್ನ ಯಾರು ಅವಮಾನ ಮಾಡಿದರು, ಅವರಿಗೇನೋ ಹೇಳಬೇಕು, ಅವರ ಮುಂದೆ ಏನೋ ಆಗಬೇಕು ಎನ್ನುವುದು ಇರಲಿಲ್ಲ. ನನ್ನವರೇ ಅಂದುಕೊಂಡಿದ್ದವರು ನನಗೆ ಮೋಸ ಮಾಡಿದ ಮೇಲೆ, ಸ್ವತಃ ನನಗೆ ಅನ್ಯಾಯ ಆದ ಮೇಲೆ ಬೇರೆ ಯಾರೂ ಕೂಡ ನನಗೆ ಮುಖ್ಯ ಅನಿಸಲೇ ಇಲ್ಲ. ಇಡೀ ಸಮಾಜ ನನಗೆ ಮುಖ್ಯ ಅನಿಸಲಿಲ್ಲ'.
'ಆ ಸಮಯದಲ್ಲಿ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗೆ ಕಾರಣ ಏನು ಎನ್ನುವುದನ್ನು ಹುಡುಕುವ ಕೆಲಸ ಮಾಡುತ್ತಿದ್ದೆ. ನನಗೆ ಗೊತ್ತಿತ್ತು. ನನ್ನ ಕುಟುಂಬದವರಿಗೆ ಗೊತ್ತಿತ್ತು. ಯಾವುದು ಸತ್ಯ, ಯಾವುದು ಸುಳ್ಳು, ಯಾರದು ಸರಿ, ಯಾರದು ತಪ್ಪು ಅಂತಾ. ಆ ರೀತಿಯ ಇರುವ ಸಮಯದಲ್ಲಿ ನನ್ನನ್ನು ಬೈದವರಿಗೆ ಬುದ್ಧಿ ಕಲಿಸಬೇಕು ಎನ್ನುವ ವಿಚಾರ ನನ್ನ ತಲೆಗೆ ಬರಲೇ ಇಲ್ಲ. ನನಗೆ ನಾನು ಮುಖ್ಯ ಆಗೇ ಇರಲಿಲ್ಲ' ಎಂದರು.
'ಇವತ್ತು ನಾನು ಯೋಚನೆ ಮಾಡುತ್ತೇನೆ ಹೌದು ನಾನು ಸ್ವಾರ್ಥಿಯಾಗಿರಬೇಕಿತ್ತು ಅಂತಾ. ನಾನು ಆಚೆ ಬಂದು ಎಲ್ಲವನ್ನೂ ಹೇಳಬೇಕಿತ್ತು. ಜನರಿಗೆ ಎಲ್ಲವೂ ಗೊತ್ತಾಗಬೇಕಿತ್ತು ಅಂತಾ ಅನಿಸುತ್ತದೆ. ಆದರೆ ಹೊರಡಗೆ ಬಂದು ನೋಡಿದಾಗ, ನಾನು ಎಲ್ಲೋ ಹೋದಾಗ ಮಕ್ಕಳು ಬಂದು ಹೇಳುತ್ತಾರೆ. ನಾನು ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಓದುತ್ತಿದ್ದೇನೆ. ಅವರ ಹಾಗೆ ಅಧಿಕಾರಿಯಾಗುತ್ತೇನೆ ಅಂದಾಗ ನನ್ನ ನೋವು ನನಗಿರಲಿ ಸಾಕು. ಎಲ್ಲರಿಗೂ ಅವರು ಸ್ಫೂರ್ತಿಯಾಗಿದ್ದಾರೆ. ಆ ಸ್ಫೂರ್ತಿ ಹಾಗೇ ಇರಲಿ ಎನ್ನುವ ವಿಚಾರ ನನ್ನ ತಲೆಗೆ ಬರುತ್ತದೆ' ಎಂದು ಹೇಳಿದರು.
'ಸಿಬಿಐ ವಿಚಾರಣೆ ಮಾಡುವ ಸಮಯದಲ್ಲೇ ನನಗೆ ಅವರ ಎಲ್ಲಾ ವಿಚಾರ ತಿಳಿಯಿತು. ಬಹಳ ನೋವಾಯ್ತು. ಆ ನೋವನ್ನು ಯಾವ ಹೆಣ್ಣು ಮಗಳು ಸಹಿಸಲ್ಲ. ಇವತ್ತು ಯಾವುದೇ ಹೆಣ್ಣು ಮಗಳನ್ನು ಹೋಗಿ ಕೇಳಿ ಇಂತಹ ಸಂದರ್ಭದಲ್ಲಿ ನಿಮಗೆ ಏನು ಅನಿಸುತ್ತಿತ್ತು ಅಂತಾ, ಅವರು ಹೇಳುವುದು ಮನಸ್ಸು ಛಿದ್ರವಾಯ್ತು ಅಂತಾ. ಯಾವ ಹೆಣ್ಣು ಸಹಿಸಲಾಗದ ವಿಚಾರ ನನಗೆ ಸಿಬಿಐ ತನಿಖೆ ಸಮಯದಲ್ಲಿ ತಿಳಿದು ಬಂತು. ಸಿಬಿಐ ವರದಿಯಲ್ಲಿ ಎಲ್ಲಾ ವಿಚಾರಗಳನ್ನು ಹೇಳಿದಾಗ ತುಂಬಾ ನೋವಾಯ್ತು'.
'ಆ ನೋವನ್ನು ನಾನು ಯಾರ ಬಳಿಯೂ ಹಂಚಿಕೊಳ್ಳಲಿಲ್ಲ. ಸಾಕಷ್ಟು ನೋವಾಯ್ತು. ಆ ನೋವಿಗಿಂತ ಹೆಚ್ಚಾಗಿ ಸಮಾಜ ನನ್ನನ್ನು ನೋಡುತ್ತಿದ್ದ ರೀತಿ, ಮಾಡುತ್ತಿದ್ದ ಅವಮಾನಗಳು, ನನ್ನ ಬಗ್ಗೆ ಆಡುತ್ತಿದ್ದ ಮಾತುಗಳು, ಎಲ್ಲೋ ನನ್ನನ್ನು ನಾನು ಕಟ್ಟಿ ಹಾಕಿಕೊಳ್ಳುವಂತಾಯಿತು. ಜೊತೆಗೆ ಯಾವ ವಿಚಾರವನ್ನೂ ಹೊರಗೆ ಹೇಳಬೇಡಿ ಎಂದು ಅವರ ಸ್ನೇಹಿತರು ಕೂಡ ಬಂದು ಹೇಳಿದ್ದರು'.
'ಅವತ್ತು ನಾನು ಏನೂ ಇರಲಿಲ್ಲ. ಎಲ್ಲೋ ಒಂದು ಕಡೆ ಬಹಳ ಪ್ರಭಾವಿಯಾಗಿದ್ದ ಮಹಿಳೆಯನ್ನು ಸುರಕ್ಷೆ ಮಾಡಬೇಕು ಅಂತಾ ನನ್ನ ನೋವು ಯಾರಿಗೂ ಕಾಣಿಸಲಿಲ್ಲ. ನಾನು ಒಬ್ಬಳು ಸಾಮಾನ್ಯ ಮಹಿಳೆ, ನನ್ನ ಜೀವನ ಇಷ್ಟೇ ಎಂದುಕೊಂಡರು. ನನ್ನನ್ನು ಯಾರೂ ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಆಕೆಯ ನೋವು ನೋವೇ ಅಲ್ಲ ಎನ್ನುವ ನಿರ್ಧಾರಕ್ಕೆ ಬಂದಿತ್ತು ಸಮಾಜ' ಎಂದು ಕುಸುಮಾ ತಮ್ಮ ಮನಸ್ಸಿನಲ್ಲಿದ್ದ ನೋವು ತೋಡಿಕೊಂಡರು.












Click it and Unblock the Notifications