ಕಾಳಿಕಾಂಬ ದೇಗುಲದಲ್ಲಿ ಚಿನ್ನಾಭರಣ ದೋಚಿದ ಕಳ್ಳರು

ಏಕಾಂತ ಸ್ಥಳದಲ್ಲಿರುವ ಕಾಳಿಕಾಂಬ ದೇವಸ್ಥಾನವನ್ನು ತಮ್ಮ ಕುಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಇಬ್ಬರು ಕಳ್ಳರು ದೇವಸ್ಥಾನದ ಹಿಂಭಾಗದಲ್ಲಿರುವ ಕಿಟಕಿಯನ್ನು ಮುರಿದು ಒಳಪ್ರವೇಶಿಸಿದ್ದಾರೆ. ದೇವಸ್ಥಾನದಲ್ಲಿದ್ದ ಭದ್ರತಾ ಕಪಾಟನ್ನು ಗ್ಯಾಸ್ ಕಟ್ಟರ್ ನಿಂದ ಮುರಿದು, ಅದರಲ್ಲಿದ್ದ 11.26 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ದೇವಸ್ಥಾನದಲ್ಲಿ ಕಾಳಿಕಾಂಬಾ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಆ ವೇಳೆ ಹೊಸದಾಗಿ ದೇವಸ್ಥಾನದಲ್ಲಿ ಹೊಸ ಭದ್ರತಾ ಕಪಾಟನ್ನು ಉದ್ಘಾಟಿಸಲಾಗಿತ್ತು. ದೇವಿಗೆ ಭಕ್ತರು ನೀಡಿದ್ದ ಚಿನ್ನಾಭರಣವನ್ನು ಭದ್ರತಾ ಕಪಾಟಿನಲ್ಲಿ ಸಂಗ್ರಹಿಸಿಡಲಾಗಿತ್ತು. ಅದನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ದೇವಸ್ಥಾನದ ಅರ್ಚಕರಾದ ಕರುಣಾಕರ ಶೆಟ್ಟಿ ಅವರು ದೂರು ದಾಖಲಿಸಿದ್ದು, ಪ್ರಾಥಮಿಕವಾಗಿ ತಿಳಿದುಬಂದಂತೆ 11.26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಆದರೆ ದೇವಸ್ಥಾನದಲ್ಲಿ ಇನ್ನೂ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇತ್ತು. ಅದನ್ನೂ ಸಹ ದೋಚಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ನಿನ್ನೆ ಗುರುವಾರ ಬೆಳಗ್ಗೆ ಎಂದಿನಂತೆ ಪೂಜೆ ಮಾಡಲು ದೇವಸ್ಥಾನದೊಳಕ್ಕೆ ಪ್ರವೇಶಿಸಿದಾಗ ಕಳ್ಳತನವಾಗಿರುವುದು ಅರಿವೆಗೆ ಬಂದಿತು ಎಂದು ಅರ್ಚಕರಾದ ಕರುಣಾಕರ ಶೆಟ್ಟಿ ಅವರು ಹೇಳಿದ್ದಾರೆ. ತಕ್ಷಣ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸಿ, ತದನಂತರ ಕುಂದಾಪುರ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ( ದೇವ್ರಾಣೆಗೂ ಉದ್ಧಾರವಾಗೋಲ್ಲ: ಕೃಷ್ಣ ಬೈರೇಗೌಡ ವ್ಯಥೆ )
ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್, ಎಸ್ಸೈ ಜಯರಾಂ ಗೌಡ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ. ಉಡುಪಿಯಿಂದ ಬಂದಿದ್ದ ಶ್ವಾನದಳವನ್ನೂ ತನಿಖೆಗೆ ಹಚ್ಚಲಾಗಿದೆ.












Click it and Unblock the Notifications