ಧರಂ ಸಿಂಗ್ ಸರಕಾರ ಬೀಳಿಸಿದ್ದು ನಾನೇ, ಕುಮಾರಸ್ವಾಮಿ ತಪ್ಪೊಪ್ಪಿಗೆ
ಬೆಂಗಳೂರು, ಜುಲೈ 28 : ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಾವು ಮಾಡಿದ್ದ ತಪ್ಪೊಂದನ್ನು ಒಪ್ಪಿಕೊಂಡರು.
'ಧರಂ ಸಿಂಗ್ ಅವರ ಸರ್ಕಾರ ಬೀಳಿಸಿದ್ದು ನಾನೇ' ಎಂದ ತಪ್ಪೊಪ್ಪಿಕೊಂಡ ಕುಮಾರಸ್ವಾಮಿ, ನನ್ನಿಂದ ಅವರಿಗೆ ನೋವಾಯಿತು ಆದರೆ ಅವರು ನನ್ನ ಮೇಲೆ ಎಂದೂ ದ್ವೇಷ ಸಾಧಿಸಲಿಲ್ಲ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಬಗ್ಗೆ ಭಾವುಕರಾಗಿ ನುಡಿದರು.
ಧರಂ ಸಿಂಗ್ ಅಧಿಕಾರ ಬೀಳಿಸಿ ನಾನು ಮುಖ್ಯಮಂತ್ರಿ ಆದಾಗ ಅವರ ಮನೆಗೆ ಹೋಗಿದ್ದೆ ಎಲ್ಲಾ ವಿಷಯಗಳನ್ನು ವಿವರಿಸಿ ಕ್ಷಮೆ ಕೇಳುವ ಉದ್ದೇಶದಿಂದ ಅವರನ್ನು ಭೇಟಿ ಮಾಡಿದ್ದೆ. ಆದರೆ ಅಧಿಕಾರ ಕಳೆದುಕೊಂಡ ಭಾವವೇ ಅವರಿಗೆ ಇರಲಿಲ್ಲ, ಬದಲಾಗಿ 'ರಾಜಕೀಯ ಇದೆಲ್ಲಾ ಸಾಮಾನ್ಯ ಒಳ್ಳೆಯ ಕೆಲಸ ಮಾಡು' ಎಂದು ಅವರು ಹೃದಯ ತುಂಬಿ ಹರಸಿ ಕಳುಹಿಸಿದ್ದರು ಎಂದು ಅವರು ಹೇಳಿದರು.

ನನ್ನ ಮೇಲೆ ಆಪಾದನೆ ಇತ್ತು: ಖರ್ಗೆ
ಕುಮಾರಸ್ವಾಮಿ ಅವರ ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 'ನೀವೇ ತಪ್ಪೊಪ್ಪಿಕೊಂಡಿರಿ ಇದರಿಂದ ನನಗೆ ನಿರಾಳವಾಯಿತು. ಕೆಲವರು ನಾನು ಮತ್ತು ಎಸ್.ಎಂ.ಕೃಷ್ಣ ಸೇರಿ ಧರ್ಮಸಿಂಗ್ ಸರ್ಕಾರ ಬೀಳಿಸಿದೆವು ಎಂದು ಸುದ್ದಿ ಹಬ್ಬಿಸಿದ್ದರು, ಪತ್ರಿಕೆಗಳಲ್ಲೂ ಹಾಗೆ ಬರೆಸಿದ್ದರು, ಈಗ ನನಗೆ ಸಮಾಧಾನವಾಯಿತು ಎಂದರು.

ಹಲವು ಬಾರಿ ಖರ್ಗೆ ಸ್ಪಷ್ಟನೆ
ನಾನು ಹಲವಾರು ಭಾರಿ ಈ ಸ್ಪಷ್ಟೀಕರಣ ಕೊಟ್ಟಿದ್ದೇನೆ ಆದರೆ ನನ್ನ ಮಾತು ನಂಬುತ್ತಿರಲಿಲ್ಲ ಈಗ ನೀವು ಹೇಳಿದ ಮೇಲೆ ನನ್ನ ಮೇಲಿನ ಅಪವಾದವೊಂದು ಹೋದಂತಾಗಿದೆ ಎಂದರು.

ಆತ ಸಿಎಂ ಆದ ನಾನು ಆಗಲಿಲ್ಲ
ಧರ್ಮಸಿಂಗ್ ಅವರೊಂದಿಗಿನ ರಾಜಕೀಯ ದಿನಗಳನ್ನು ನೆನೆಸಿಕೊಂಡ ಖರ್ಗೆ, ನನ್ನ ಹಾಗೂ ಧರಂಸಿಂಗ್ ಅವರ ಕ್ಷೇತ್ರ ಯಾವಾಗಲೂ ಫಿಕ್ಸ್ ಆಗಿತ್ತು. ಅವರು ಮಂತ್ರಿ ಆದರೆ ನಾನು ಕೆಪಿಸಿಸಿ ಅಧ್ಯಕ್ಷನಾಗುತ್ತಿದೆ. ಆದರೆ ಮುಖ್ಯಮಂತ್ರಿ ಸ್ಥಾನ ಒಂದೇ ಇತ್ತು ಹಾಗಾಗಿ ಅವರೇ ಮುಖ್ಯಮಂತ್ರಿ ಆದರು ಎಂದು ಅವರು ಹೇಳಿದರು.

ಧರ್ಮಸಿಂಗ್ ಒಬ್ಬ ಜಂಟಲ್ಮ್ಯಾನ್: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಧರ್ಮಸಿಂಗ್ ಎಂದೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಎಲ್ಲ ಪಕ್ಷದವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು, ಅವರೊಬ್ಬ ಜಂಟಲ್ಮೆನ್ ಎಂದು ಹೊಗಳಿದರು. ಸಾಯುವ ಒಂದು ವಾರದ ಮುಂಚೆಯಷ್ಟೆ ನಮ್ಮ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದ್ದರು ಎಂದು ನೆನಸಿಕೊಂಡರು.












Click it and Unblock the Notifications