ಕುಕ್ಕೆ ಸುಬ್ರಹ್ಮಣ್ಯಕ್ಕೆ ರೈಲು: ಕ್ರಿಕೆಟ್ ದೇವರಿಗೆ ಮೊರೆ
ಕುಕ್ಕೆ ಸುಬ್ರಹ್ಮಣ್ಯ, ಅ.9: ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿ ಭರದಿಂದ ನಡೆಯುತ್ತಿದೆ. ಆದಾಗ್ಯೂ ಇಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳು ಗಗನಕುಸುಮವಾಗಿವೆ. ದೆಹಲಿಯ ನಿಜಾಮುದ್ದೀನ್ ಸ್ಟೇಷನ್ನಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೇರವಾಗಿ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂಬುದು ಪುರಾತನ ಬೇಡಿಕೆ.
ಆದರೆ ಇದರ ಬಗ್ಗೆ ಜನಪ್ರತಿನಿಧಿಗಳ ಅಸಡ್ಡೆ ಹೇಳತೀರದು. ಹಾಗಾಗಿ ಪುತ್ತೂರು ರೈಲು ಬಳಕೆದಾರರ ವೇದಿಕೆಯು ತನ್ನ ಕಾರ್ಯ ಸಾಧನೆಗಾಗಿ ಭಿನ್ನ ಹಳಿಯಲ್ಲಿ ಸಾಗುತ್ತಿದೆ. ಸಾಕ್ಷಾತ್ ಸುಬ್ರಹ್ಮಣ್ಯನಿಗೇ ಮೊರೆಯಿಟ್ಟರೂ ರೈಲು ಕುಕ್ಕೆಯತ್ತ ಹಾದುಬಂದಿಲ್ಲ ಎಂದು ನಿರಾಶೆಗೊಂಡ ವೇದಿಕೆಯು ಈಗ ಕ್ರಿಕೆಟ್ ದೇವರಿಗೆ ಮೊರೆಯಿಡಲು ಮುಂದಾಗಿದೆ.

ಅಂದಹಾಗೆ ಈ ಕ್ರಿಕೆಟ್ ದೇವ ಮೂಲತಃ ಕುಕ್ಕೆ ಸುಬ್ರಹ್ಮಣ್ಯನ ಪರಮಭಕ್ತ. ಹಾಗಾಗಿ ತಮ್ಮ ಕಾರ್ಯ ಸಿದ್ಧಿಯಾಗಬಹುದು ಎಂಬುದು ವೇದಿಕೆಯ ಅಚಲ ವಿಶ್ವಾಸ. ಸದ್ಯಕ್ಕೆ ಕ್ರಿಕೆಟ್ ದೇವ ಎನಿಸಿಕೊಂಡಿರುವುದು ಒಬ್ಬರೇ ಒಬ್ಬರು. ನಿವೃತ್ತಿಯ ಹೊಸ್ತಿಲಲ್ಲಿರುವ ಸಚಿನ್ ತೆಂಡೂಲ್ಕರ್ ಅವರು ಕುಕ್ಕೆ ಸುಬ್ರಹ್ಮಣ್ಯ ರೈಲು ಬಳಕೆದಾರರ ವೇದಿಕೆ ಪಾಲಿಗೆ ದೇವರಾಗಿ ಕಾಣಿಸಿಕೊಂಡಿದ್ದಾರೆ.
ಸರ್ಪ ಸಂಸ್ಕಾರಕ್ಕೆಂದು ಆಗಾಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರೀಗ ರಾಜ್ಯಸಭೆ ಸದಸ್ಯರೂ ಹೌದು. ಹಾಗಾಗಿ ತೆಂಡೂಲ್ಕರ್ ಮನಸ್ಸು ಮಾಡಿದರೆ ದಿಲ್ಲಿಯಿಂದ ಕುಕ್ಕೆಗೆ ರೈಲು ಬರುವುದು ಅಸಾಧ್ಯವೇನೂ ಅಲ್ಲ ಎಂಬುದು ವೇದಿಕೆಯ ಲೆಕ್ಕಾಚಾರ.
ಈ ಸಂಬಂಧ Puttur railway users' association ತೆಂಡೂಲ್ಕರ್ ಗೆ ಪತ್ರ ಬರೆದಿದೆ. Mangalore, Margao, Panvel, Vashi Road, Vadodara ಮತ್ತು Mathura ಮಾರ್ಗಯವಾಗಿ Nizamuddin ಸ್ಟೇಷನ್ ತಲುಪುವ ರೈಲಿಗಾಗಿ ಬೇಡಿಕೆಯಿಟ್ಟಿದ್ದೇವೆ ಎಂದು ಕಾರ್ಯದರ್ಶಿ ಎಂಆರ್ ಪ್ರಭು ತಿಳಿಸಿದ್ದಾರೆ. ಕ್ರಿಕೆಟ್ ದೈವ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ರೈಲು ಬರುವಂತೆ ಮಾಡುತ್ತಾರಾ? ಕಾದು ನೋಡಬೇಕು!












Click it and Unblock the Notifications