ಆದಾಯ ತಂದರೆ ಮಾತ್ರ ಹಾಜರಾತಿ: KSRTC ಸಿಬ್ಬಂದಿಗೆ ಹೊಸ ಸಂಕಷ್ಟ
ಬೆಂಗಳೂರು, ಜೂ. 22: ಕೊರೊನಾ ವೈರಸ್ ಹರಡದಂತೆ ತಡೆಯಲು ಇಡೀ ರಾಜ್ಯಾದ್ಯಂತ ಭಾಗಶಃ ಲಾಕ್ಡೌನ್ ಮಾಡಲಾಗಿದೆ.. ವೈರಸ್ ಹರಡದಂತೆ ತಡೆಯಲು ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಲೇ ಇದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ.
Recommended Video
ಈ ಮಧ್ಯೆ ಹಲವು ಷರತ್ತುಗಳೊಂದಿಗೆ ಕೆಲ ದಿನಗಳ ಹಿಂದಷ್ಟೇ ಸಾರ್ವಜನಿಕ ಸಾರಿಗೆ ಸೇವೆಗೆ ಸರ್ಕಾರ ಅನುಮತಿ ಕೊಟ್ಟಿದೆ. ಹಲವು ಷರತ್ತುಗಳನ್ನು ಹಾಕಿ ಜನರನ್ನು ಬಸ್ಸಿಗೆ ಹತ್ತಿಸಿಕೊಳ್ಳಲಾಗುತ್ತಿದೆ. ಕೊರೊನಾ ವೈರಸ್ ಭಯದಿಂದ ಜನರು ಬಸ್ಗಳಲ್ಲಿ ಪ್ರಯಾಣಿಸಲು ಮುಂದಾಗುತ್ತಿಲ್ಲ. ಆದರೂ ಈ ಪರಿಸ್ಥಿತಿಯಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಆದಾಯ ತರುವ ಒತ್ತಡ ಹಾಕಲಾಗುತ್ತಿದೆ.

ಆದಾಯ ತರಲು ಒತ್ತಡ
ಕೆಎಸ್ಆರ್ಟಿಸಿ ಚಾಲಕರು ಹಾಗೂ ನಿರ್ವಾಹಕರ ಮೇಲೆದಿನಕ್ಕೆ ಇಂತಿಷ್ಟು ಆದಾಯ ತರಲೇಬೇಕು ಎಂಬ ಒತ್ತಡವನ್ನು ಹೇರಲಾಗಿದೆ. ಲಾಕ್ಡೌನ್ನಿಂದಾಗಿ ಸಾರಿಗೆ ಸಂಸ್ಥೆಗಳಿಗೆ ನಷ್ಠವುಂಟಾಗಿದ್ದು ಅದನ್ನು ಸರ್ಕಾರವೇ ಭರಿಸಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದರು. ಆದರೆ ಇದೀಗ ಲಾಕ್ಡೌನ್ ಸಂದರ್ಭದಲ್ಲಿ ಉಂಟಾಗಿರುವ ನಷ್ಠ ಭರಿಸುವುದು ಸೇರಿದಂತೆ, ಸಧ್ಯ ದಿನಕ್ಕೆ ಇಂತಿಷ್ಟು ಆದಾಯವನ್ನು ತರಲೇಬೇಕು ಎಂದು ಸಾರಿಗೆ ಇಲಾಖೆ ಆದೇಶ ಮಾಡಿದೆ.
ಜನಸಂದಣಿ ಇರುವ ಮಾರ್ಗಗಳಲ್ಲಿ ಬಸ್ ಸಂಚಾರ ಮಾಡಬೇಕು. ಜೊತೆಗೆ ಪ್ರತಿ ಕಿಲೋ ಮೀಟರ್ ಸಂಚಾರದಲ್ಲಿ ಕನಿಷ್ಠ ಡಿಸೇಲ್ ಬಳಕೆ ಆಗುವಂತೆ ಮಾಡಬೇಕು ಎಂದು ಸಾರಿಗೆ ಇಲಾಖೆ ಘಟಕ ವ್ಯವಸ್ಥಾಪಕರು (ಡಿಪೋ ಮ್ಯಾನೇಜರ್) ಸುತ್ತೋಲೆ ಹೊರಡಿಸಿದ್ದಾರೆ.

ಆದಾಯ ತಂದರೆ ಮಾತ್ರ ಹಾಜರಾತಿ
ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ಜನರು ಬಸ್ಗಳಲ್ಲಿ ಪ್ರಯಾಣ ಮಾಡುವುದನ್ನೇ ನಿಲ್ಲಿಸಿದ್ದಾರೆ. ಆದರೂ ಸಾರ್ವಜನಿಕರಿಗೆ ಅನಕೂಲವಾಗಲಿ ಎಂದು ಅರ್ಧದಷ್ಟು ಬಸ್ಗಳನ್ನು ಓಡಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಆದರೆಅದರ ಹೊರೆಯನ್ನುಮಾತ್ರ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಾಕಲಾಗುತ್ತಿದೆ.
ವೇಗದೂತ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಪ್ರತಿದಿನ 3 ನೂರು ಕಿಲೋ ಮೀಟರ್ ಸಂಚರಿಸಿ, 9 ಸಾವಿರ ರೂ. ಆದಾಯವನ್ನು ತರಲೇಬೇಕು. ಸಾಮಾನ್ಯ ಸಾರಿಗೆ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಪ್ರತಿದಿನ 280 ಕಿಲೋ ಮೀಟರ್ ಕ್ರಮಿಸಿ ಕನಿಷ್ಠ 7 ಸಾವಿರ ರೂ. ಆದಾಯ ತಂದಲ್ಲಿ ಮಾತ್ರ ಹಾಜರಾತಿ ಕೊಡಲಾಗುವುದು ಎಂದು ಆದೇಶ ಮಾಡಲಾಗಿದೆ.

ಡಿಸೇಲ್ ಬೆಲೆ ಏರಿಕೆ
ಡಿಸೇಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್ಗೆ 66.77 ರೂಪಾಯಿಗಳಿಗೆ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗಿದೆ. ಸಂಸ್ಥೆ ಹೆಚ್ಚು ನಷ್ಠಕ್ಕೆ ಸಿಲುಕುವ ಸಂಭವವಿದೆ. ಹೀಗಾಗಿ ಎಲ್ಲ ಚಾಲನಾ ಸಿಬ್ಬಂದಿಯು ಪ್ರಾಮಾಣಿಕವಾಗಿ ಕಾರ್ಯಾಚರಣೆ ಮಾಡಿ ನಿಗದಿತ ಆದಾಯ ತರಬೇಕೆಂದು ತಿಳಿಸಲಾಗಿದೆ.

ಆದಾಯ ಎಲ್ಲಿಂದ ತರೋದು
ಸಾರಿಗೆ ಇಲಾಖೆಯ ಈಶಾನ್ಯ, ವಾಯುವ್ಯ, ಕೆಎಸ್ಆರ್ಟಿಸಿ ಹಾಗೂ BMTC ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರಿಗೆ ಆದಯ ತರಲು ಸೂಚನೆ ನೀಡಲಾಗಿದೆ.
ಮಳೆಗಾಲ, ಆಷಾಢದ ಸಮಯದಲ್ಲಿ ಆದಾಯ ಇರುತ್ತಿರಲಿಲ್ಲ. ಆದರೆ ಈಗ ಕೊರೊನಾ ವೈರಸ್ನಿಂದಾಗಿ ಜನರು ಬಸ್ನಲ್ಲಿ ಪ್ರಯಾಣ ಮಾಡುವುದನ್ನೇ ಬಿಟ್ಟಿದ್ದಾರೆ. ಬಂದರೂ ಜನಸಂದಣಿ ಇರುವುದಿಲ್ಲ. ಪ್ರತಿದಿನ ಕೈಯಲ್ಲಿ ಜೀವ ಹಿಡಿದುಕೊಂಡು ಕೆಲಸ ಮಾಡುವುದೇ ದುಸ್ತರವಾಗಿದೆ. ಈ ಸಂದರ್ಭದಲ್ಲಿ ಆದಾಯ ತರುವ ಒತ್ತಡವನ್ನು ಹಕಿದರೆ ಎಲ್ಲಿಂದ ತರುವುದು ಎಂದು ಪ್ರಶ್ನೆ ಮಾಡುತ್ತಾರೆ ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರು.
ತಕ್ಷಣವೆ ಸಾರಿಗೆ ಸಚಿವರು ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಅವರು ಸಂಸ್ಥೆಯ ಅಧಿಕಾರಿಗಳು ಸೂಚನೆ ನೀಡಿ ಚಾಲಕರು ಹಾಗೂ ನಿರ್ವಾಹಕ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕಿದೆ. ಒಂದೊಮ್ಮೆ ಸರ್ಕಾರದ ಸಾರಿಗೆ ಸಂಸ್ಥೆಗಳೇ ಸಾಮಾಜಿಕ ಅಂತರ ಮರೆತು ಜನರನ್ನು ಬಸ್ಗೆ ಹತ್ತಿಸಿಕೊಳ್ಳಲು ಒತ್ತಡ ಹಾಕಿದರೆ ಕೊರೊನಾ ವೈರಸ್ ತೀವ್ರವಾಗಿ ಹರಡಲು ಅನಕೂಲ ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಗಮನಿಸಬೇಕಿದೆ.












Click it and Unblock the Notifications