Bengaluru-Mysuru Expressway: ಇಲ್ಲಿನ ಟೋಲ್ ಶುಲ್ಕ ಪ್ರಯಾಣಿಕರೇ ಪಾವತಿಸಬೇಕು ಎಂದ KSRTC, ಮಹತ್ವದ ಮಾಹಿತಿ
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಎಲ್ಲ ಬಗೆಯ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹವು ಆರಂಭವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರಿಗೆ ಶಾಂಕಿಂಗ್ ಸುದ್ದಿ ಪ್ರಕಟಿಸಿದೆ. ಏನದು?
ಬೆಂಗಳೂರು, ಮಾರ್ಚ್ 14: ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ಬಗೆಯ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹವು ಇಂದು ಮಾರ್ಚ್ 14ರಿಂದ ಆರಂಭವಾಗಿದೆ. ಈ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರಿಗೆ ಶಾಂಕಿಂಗ್ ಸುದ್ದಿಯೊಂದನ್ನು ಪ್ರಕಟಿಸಿದೆ.
ಎರಡು ದಿನದ ಹಿಂದಷ್ಟೇ (ಮಾ.12) ಉದ್ಘಾಟನೆಗೊಂಡಿರುವ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿನ ಟೋಲ್ ನಲ್ಲಿ ಮಿತಿಗಿಂತಲೂ ಹೆಚ್ಚು, ನಿಯಮ ಉಲ್ಲಂಘಿಸಿ ಸುಂಕ ವಸೂಲಿ ಮಾಡಲಾಗುತ್ತಿದೆ. ಹೀಗೆಂದು ಪ್ರಯಾಣಿಕರು, ವಾಹನ ಸವಾರರು ಈ ಮಾರ್ಗದಲ್ಲಿ ಓಡಾಡುವವರು ಮಂಗಳವಾರ ಪ್ರತಿಭಟಿಸಿದ್ದಾರೆ. ಟೋಲ್ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡ ಪ್ರಸಂಗಗಳು ನಡೆದಿವೆ.

ಈ ಮಧ್ಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಪ್ರಯಾಣಿಕರ ಮೇಲೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಟೋಲ್ ಶುಲ್ಕದ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಿಕೊಳ್ಳುವುದಾಗಿ ಖುದ್ದು ಮಂಗಳವಾರ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಕಟಣೆ ಹೊರಡಿಸಿದೆ. ಅದರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಿರುವ ಎಕ್ಸ್ಪ್ರೆಸ್ ವೇ ಮೊದಲ ಹಂತದ ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕೆ ಟೋಲ್ ಮುಖಾಂತರ ನಮ್ಮ ಬಸ್ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಮಾರ್ಗದಲ್ಲಿ ಶುಲ್ಕ ಸಂಗ್ರಹ ಮಾ.14ರಿಂದ ಆರಂಭಿಸಲಾಗಿದೆ.
ಸದರಿ ಈ ಟೋಲ್ ಶುಲ್ಕದ ವೆಚ್ಚವನ್ನು ಸರಿದೂಗಿಸಲು ಸದರಿ ಮಾರ್ಗದಲ್ಲಿ ಓಡಾಡುವ ನಿಗಮ ''ಕರ್ನಾಟಕ ಸಾರಿಗೆ ಬಸ್'ಗಳ ಪ್ರಯಾಣಿಕರಿಂದ 15ರೂಪಾಯಿ, ರಾಜಹಂಸ ಬಸ್ ಪ್ರಯಾಣಿಕರಿಂದ 18ರೂಪಾಯಿ ಮತ್ತು ಇತರೆ ಹಾಗೂ ಮಲ್ಟಿ ಎಕ್ಸೆಲ್ ಬಸ್ಗಳಲ್ಲಿ ಸಂಚರಿಸುವ ಈ ಮಾರ್ಗದ ಪ್ರಯಾಣಿಕರಿಂದ 20ರೂಪಾಯಿ ವಸೂಲಿ ಮಾಡಲಾಗುವುದು'' ಎಂದು ತಿಳಿಸಿದೆ. ಇದು ಅನಿವಾರ್ಯವು ಹೌದು ಎಂದು ನಿಗಮ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಈ ಬಳಕೆದಾರರು ಶುಲ್ಕವು ಈ ಎಕ್ಸ್ಪ್ರೆಸ್ ವೇ ಮೂಲಕ ಕಾರ್ಯಾಚರಣೆಯಾಗುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಸಾರಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಜೊತೆಗೆ ಎಲ್ಲ ಟೋಲ್ ರಸ್ತೆಗಳಲ್ಲಿ ಈ ಪದ್ಧತಿ ಅನುಸರಿಸಲಾಗುತ್ತಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications