'ಚಟುವಟಿಕೆಯಿಂದ ಇರುವ ಮಗು ಕಂಡರೆ ಯಾರೂ ಸಹಿಸುವುದಿಲ್ಲ'
ಬೆಂಗಳೂರು, ಆಗಸ್ಟ್ 19 : 'ಚಟುವಟಿಕೆಯಿಂದ ಇರುವ ಮಗು ಕಂಡರೆ ಯಾರೂ ಸಹಿಸುವುದಿಲ್ಲ. ಇನ್ನೂ 22 ದಿನದ ಕೂಸಾಗಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಹೇಗೆ ಬೆಳೆಯುತ್ತದೆ? ನೋಡ್ತಾ ಇರಿ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಪಕ್ಷದ ವಿವಿಧ ಮೋರ್ಚಾಗಳ ಹೊರತಾಗಿ ಬೇರೆ ಸಂಘಟನೆಯಡಿ ಕಾರ್ಯಕ್ರಮಗಳನ್ನು ನಡೆಸಬಾರದು ಎಂಬ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಎಚ್ಚರಿಕೆಯನ್ನು ಧಿಕ್ಕರಿಸಿ ಕೆ.ಎಸ್.ಈಶ್ವರಪ್ಪ ಅವರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಹುಟ್ಟು ಹಾಕಿದ್ದಾರೆ.[ಸೆ.26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ]
ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಅಂತಿಮ ರೂಪುರೇಷೆ ಸಿದ್ಧವಾಗಿದೆ. ಎರಡು ದಿನದಲ್ಲಿ ಬ್ರಿಗೇಡ್ ನೋಂದಣಿಯಾಗಲಿದ್ದು, ಸೆಪ್ಟೆಂಬರ್ 26ರಂದು ಹಾವೇರಿಯಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ನ ಮೊದಲ ಸಮಾವೇಶ ನಡೆಯಲಿದೆ.[ಕೇಂದ್ರ ನಾಯಕರಿಗೆ ಬಿಎಸ್ವೈ ರವಾನಿಸಿದ ಎಚ್ಚರಿಕೆ ಏನು?]
ಕೆ.ಎಸ್.ಈಶ್ವರಪ್ಪ ಅವರ ಜೊತೆಗೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಅಹಿಂದ ಮುಖಂಡ ಕೆ. ಮುಕುಡಪ್ಪ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶಮೂರ್ತಿ, ದಲಿತ ಹಿಂದುಳಿದ ಕ್ರಿಯಾಸಮಿತಿಯ ಚಿ.ನಾ.ರಾಮು, ಸವಿತಾ ಸಮಾಜದ ಮುಖಂಡ ದೇವರಾಜ್ ಮುಂತಾದವರು ಬ್ರಿಗೇಡ್ಗೆ ಬೆಂಬಲವಾಗಿ ನಿಂತಿದ್ದಾರೆ.....
'ಎಲ್ಲರನ್ನೂ ಒಗ್ಗೂಡಿಸುವ ಉದ್ದೇಶ ನನ್ನದು'
ಗುರುವಾರ ಶಾಸಕರ ಭವನದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು. 'ಬಿಜೆಪಿ ಹಿಂದುಳಿದ ಮೋರ್ಚಾದ ದೀಪ ಹಚ್ಚಲು ಎಲ್ಲರೂ ಬರುತ್ತಾರಾ? ಪಕ್ಷದ ಬಾವುಟ ಹಿಡಿಯದೆಯೂ ಹೊರಗಿನಿಂದ ಬೆಂಬಲಿಸುವವರು ಇದ್ದಾರೆ. ಅವರನ್ನು ಒಗ್ಗೂಡಿಸುವ ಉದ್ದೇಶ ನನ್ನದು' ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಸಮರ್ಥನೆ ನೀಡಿದರು.
'ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ'
'ಪಕ್ಷದ ಯಾವ ನಾಯಕರ ಸೂಚನೆಯನ್ನು ನಾನು ತಿರಸ್ಕಾರ ಮಾಡುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ವಿಚಾರದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಆಹ್ವಾನಿತನಾಗಿ ನಾನು ಸಭೆಗೆ ಹೋಗಿದ್ದೆ' ಎಂದು ಈಶ್ವರಪ್ಪ ಹೇಳಿದರು.
'ಸಂಘಟನೆಗಾಗಿ ಬ್ರಿಗೇಡ್ ಸ್ಥಾಪನೆ'
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತನಾಡಿರುವ ಬ್ರಿಗೇಡ್ನ ನೂತನ ಸಂಚಾಲಕ ಕೆ. ವಿರೂಪಾಕ್ಷಪ್ಪ ಅವರು, 'ಹಿಂದುಳಿದವರು ಮತ್ತು ದಲಿತ ಸಮುದಾಯದ ಸಂಘಟನೆಗಾಗಿ ಬ್ರಿಗೇಡ್ ಹುಟ್ಟು ಹಾಕಿದ್ದೇವೆ. ಸಂಘಟನೆ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇವೆ. ಸೆಪ್ಟೆಂಬರ್ 26 ರಂದು ಹಾವೇರಿಯಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ' ಎಂದರು.
'ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ'
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಬ್ರಿಗೇಡ್ ಸ್ಥಾಪನೆ ವಿಚಾರ ಈಶ್ವರಪ್ಪ ಅವರ ವಿವೇಚನೆಗೆ ಬಿಟ್ಟಿದ್ದು. ಇನ್ನು ಮುಂದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಸ್ವತಂತ್ರವಾಗಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ' ಎಂದು ಹೇಳಿದ್ದಾರೆ.