ಭಗವಾನ್ ವಿರುದ್ಧದ ಪ್ರಕರಣ ಹೈಗ್ರೌಂಡ್ಸ್ಗೆ ವರ್ಗಾವಣೆ
ಬೆಂಗಳೂರು, ಸೆಪ್ಟೆಂಬರ್. 23: ಪ್ರೊ. ಕೆಎಸ್ ಭಗವಾನ್ ಅವರ ಮೇಲೆ ಉಪ್ಪಿನಂಗಡಿಯಲ್ಲಿ ದಾಖಲಾಗಿರುವ ಪ್ರಕರಣ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆಯಾಗಲಿದೆ. ಈ ಬಗ್ಗೆ ಬೆಂಗಳೂರು ಕೇಂದ್ರ ವಿಭಾಗದ ಎಸಿಪಿ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಭಗವಾನ್ ಸೇರಿದಂತೆ ಮೂವರನ್ನು ಆರೋಪಿತರನ್ನಾಗಿ ಹೆಸರಿಸಲಾಗಿದೆ. ಭಗವಾನ್ ಮೊದಲ ಆರೋಪಿಯಾದರೆ, ಸಾಹಿತಿ ಚಂಪಾ ಅವರನ್ನು ಎರಡನೇ ಆರೋಪಿಯಾಗಿ ಹೆಸರಿಸಲಾಗಿದೆ.[ಭಗವಾನ್ ವಿರುದ್ಧ ಉಪ್ಪಿನಂಗಡಿಯಲ್ಲಿ ಎಫ್ಐಆರ್ ದಾಖಲು]
ಹಿಂದೂಗಳ ಪ್ರವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಬಗ್ಗೆ ತುಚ್ಛವಾಗಿ ಮಾತಾಡಿದ್ದಲ್ಲದೆ, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೋಮು ಭಾವನೆ ಕೆರಳಿಸಿದ್ದಾರೆ ಎಂದು ಆರೋಪಿಸಿ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಮೂಲೆ ಮನೆಯ ಶ್ಯಾಮ ಸುದರ್ಶನ್ ಭಟ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸೆಪ್ಟೆಂಬರ್ 21 ರಂದು ದೂರು ನೀಡಿದ್ದರು.
'ರಾಮಾಯಣದ ಶ್ರೀರಾಮ ತಂದೆಗೆ ಹುಟ್ಟಿದ ಮಗನಲ್ಲ, ಹಿಂದೂ ದೇವತೆಗಳು ವ್ಯಭಿಚಾರಿಗಳು, ಮಹಾಭಾರತ ಓದಬೇಡಿ, ಭಗವದ್ಗೀತೆ ಓದಿದವರು ಭಯೋತ್ಪಾದಕರಾಗುತ್ತಾರೆ, ಉಪನಿಷತ್ತು ಕೆಟ್ಟ ಗ್ರಂಥ, ಹಿಂದೂ ದೇವಸ್ಥಾನಗಳು ಕೇವಲ ಹಣ ಮಾಡುವ ಯಂತ್ರಗಳಾಗಿವೆ' ಇತ್ಯಾದಿಯಾಗಿ ಕೆರಳಿಸುವಂಥ ಹೇಳಿಕೆ ನೀಡಿದ್ದಾರೆ ಎಂದು ಶ್ಯಾಮ ಸುದರ್ಶನ್ ಭಟ್ ಅವರು ಆರೋಪಿಸಿದ್ದರು.[ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?]
ಭಗವಾನ್ ಅವರಿಗೆ ಸಾಹಿತ್ಯ ಅಕಾಡೆಮಿ ಘೋಷಣೆ ಮಾಡಿರುವ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಅಲ್ಲದೇ ಟ್ವಿಟ್ಟರ್ ನಲ್ಲಿಯೂ ಸಹ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಪಾಲರಿಗೆ ಮತ್ತು ಸಾಹಿತ್ಯ ಅಕಾಡೆಮಿಗೆ ಇಮೇಲ್ ಕಳುಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.