ನಕಲಿ ಡಿಕ್ರಿ ಪ್ರಕರಣ: ಐಪಿಎಸ್ ಅಧಿಕಾರಿ ಹರಿಶೇಖರನ್ ವಿಚಾರಣೆಗೆ ಕೆಆರ್ಎಸ್ ಆಗ್ರಹ
ಬೆಂಗಳೂರು, ಜು. 12: ಅನ್ಯರ ಆಸ್ತಿಗೆ ನಕಲಿ ಮಾಲೀಕರನ್ನು ಸೃಷ್ಟಿಸಿ ಕೋರ್ಟ್ನಿಂದಲೇ ಡಿಕ್ರಿ ಮಾಡಿಸಿ ವಂಚಿಸುವ ಪ್ರಕರಣದ ತನಿಖೆಯನ್ನು ಮುಚ್ಚಿ ಹಾಕಿದ ಅರೋಪಕ್ಕೆ ಗುರಿಯಾಗಿರುವ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಎಡಿಜಿಪಿ ಪಿ. ಹರಿಶೇಖರನ್ ಅವರನ್ನು ತನಿಖೆಗೆ ಒಳಪಡಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಆಗ್ರಹಿಸಿದೆ. ಸೂಕ್ತ ತನಿಖೆ ಮಾಡದಿದ್ದಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕರ್ನಾಟಕ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಹಲಸೂರು ಕೆರೆ ಸಮೀಪ ಇರುವ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಕೇಂದ್ರ ಕಚೇರಿ ಮುಂದೆ ಇನ್ನೆರಡು ದಿನದಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರವಿಕೃಷ್ಣಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕಲಿ ಡಿಕ್ರಿ ಪ್ರಕರಣಗಳ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಿರಿಯ ಐಪಿಎಸ್ ಅಧಿಕಾರಿ ವಿಚಾರಣೆಗೆ ಸಿಐಡಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಐಪಿಎಸ್ ಅಧಿಕಾರಿ ಹೆಸರು ಉಲ್ಲೇಖಿಸದೇ ಪ್ರಜಾವಾಣಿ ವಿಶೇಷ ವರದಿ ಪ್ರಕಟಿಸಿತ್ತು.ಈ ವರದಿಗೆ ಹಿರಿಯ ಐಪಿಎಸ್ ಅಧಿಕಾರಿ ಪಿ. ಹರಿಶೇಖರನ್ ಅವರ ಹೆಸರನ್ನು ಉಲ್ಲೇಖಿಸಿ ಕರ್ನಾಟಕ ರಾಷ್ಟ್ರ ಸಮಿತಿ ಹೋರಾಟ ಆರಂಭಿಸಿದೆ.
ಅಕ್ರಮ ಮತ್ತು ಅಪರಾಧ ಕೃತ್ಯಗಳ ಮೂಲಕ ಅನ್ಯರ ಆಸ್ತಿಯನ್ನು ಕಬಳಿಕೆ ಮಾಡಿರುವ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ರಾಜ್ಯ CID ಇಲಾಖೆ, ಈ ಹಗರಣದ ಕಿಂಗ್ಪಿನ್ ಎಂದು ಹೇಳಲಾಗುತ್ತಿರುವ ಭ್ರಷ್ಟ IPS ಅಧಿಕಾರಿಯನ್ನು ವಿಚಾರಣೆ ಮಾಡಲು ಮತ್ತು ಬಂಧಿಸಲು ಯಾಕೆ ಹಿಂದೆಮುಂದೆ ನೋಡುತ್ತಿದೆ ಎಂದು ಕೆಅರ್ಎಸ್ ಪ್ರಶ್ನಿಸಿದೆ.
ಅನಾಮಧೇಯವಾಗಿ ಉಲ್ಲೇಖವಾಗಿರುವ ಭ್ರಷ್ಟ ಅಧಿಕಾರಿ ಬೇರೆ ಯಾರೂ ಅಲ್ಲ, ಅದು ಪಿ. ಹರಿಶೇಖರನ್. ಇವರು ಬಹುಶಃ ರಾಜ್ಯದ ಹತ್ತು ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಉನ್ನತ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಗಳೇ ಇಂತಹ ನೀಚ ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗಿದರೆ ಈ ನಾಡನ್ನು ಕಾಪಾಡುವವರು ಯಾರು? ಇಂತಹ ಹಿರಿಯ ಅಧಿಕಾರಿಗಳೇ ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲಿ ತೊಡಗಿದ್ದಾಗ, ಪೊಲೀಸ್ ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಅವರನ್ನು ವಿಚಾರಣೆ ಮಾಡಲು ಹೇಗೆ ತಾನೇ ಧೈರ್ಯ ಬರುತ್ತದೆ? ಈ ಪ್ರಕರಣದಲ್ಲಿಯೂ ಇದೇ ಆಗಿರುವುದು.
ಹಲವು ಮೂಲಗಳಿಂದ ನಮಗೆ ಬಂದಿರುವ ಮಾಹಿತಿಗಳ ಪ್ರಕಾರ ಈ ಹರಿಶೇಖರನ್ ಪರಮಭ್ರಷ್ಟ ಮತ್ತು ಸಾಕಷ್ಟು ಅಕ್ರಮ ಆಸ್ತಿಯನ್ನು ಮಾಡಿದ್ದಾರೆ.ಎಸಿಬಿ ಈ ಕೂಡಲೇ ಆದಾಯಮೀರಿದ ಆಸ್ತಿ ಪ್ರಕರಣದಲ್ಲಿ ಇವರ ಮೇಲೆ ದಾಳಿ ಮಾಡಬೇಕು.
ಈ ಹಿನ್ನೆಲೆಯಲ್ಲಿ KRS ಪಕ್ಷದ ನಿಯೋಗವು CID ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ, ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕ ಪೊಲೀಸರಿಗೆ ತಕ್ಕುದಾದ ಧೈರ್ಯದಿಂದ ತನಿಖೆ ಮಾಡುವಂತೆ ಆಗ್ರಹಿಸಲಿದೆ ಎಂದು ಕೆಆರ್ಎಸ್ ಆರೋಪಿಸಿದೆ. ಹಾಗೆಯೇ, ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಸಹ ಭೇಟಿ ಮಾಡಿ ಅವರನ್ನೂ ಸಹ ಸೂಕ್ತ ಕ್ರಮಕ್ಕಾಗಿ ಅಗ್ರಹಿಸಲಿದೆ.
ಇದರ ಜೊತೆಗೆ KRS ಪಕ್ಷವು ಮುಂದಿನ ಒಂದೆರಡು ದಿನಗಳಲ್ಲಿ ಈ ಪಿ. ಹರಿಶೇಖರನ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕಚೇರಿಯ (ಅಲಸೂರು ಕೆರೆ) ಮುಂದೆ ತಮಟೆ ಚಳವಳಿ ಮಾಡಲಿದೆ ಎಂದು ಎಚ್ಚರಿಕೆ ನೀಡಿದೆ.
ಐಪಿಎಸ್ ಅಧಿಕಾರಿಯ ಪಾತ್ರದ ಬಗ್ಗೆ ತನಿಖೆ ನಡೆಸಿ ವಿಚಾರಣೆಗೆ ಒಳಪಡಿಸಲು ಧೈರ್ಯ ತೋರದ ಸಿಐಡಿ ಪುಕ್ಕಲುತನ ಹಾಗೂ ಕರ್ತವ್ಯಲೋಪದ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿಯೂ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.