ಕೆಪಿಟಿಸಿಎಲ್ ಅಕ್ರಮದಲ್ಲಿ ಗೋಲ್ಮಾಲ್: ದೊಡ್ಡ ದೊಡ್ಡ ಕೈಗಳ ಶಾಮೀಲು
ಬೆಂಗಳೂರು, ಆ. 23: ಪಿಎಸ್ಐ ಅಕ್ರಮ ಆಯ್ತು. ಇತ್ತೀಚೆಗೆ ನಡೆದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 1492 ವಿವಿಧ ತಾಂತ್ರಿಕ ಹುದ್ದಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ. ಈ ಅಕ್ರಮವನ್ನು ಸಿಐಡಿ ತನಿಖೆಗೆ ವಹಿಸಿದರೆ ಸಾಕಷ್ಟು ಪ್ರಭಾವಿಗಳಿಗೆ ಉರುಳಾಗಲಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಗದಗದ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಹಾಗೂ ಅವರ ಪುತ್ರನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪ್ರಾಚಾರ್ಯರ ಮಗ ಪತ್ರಕರ್ತನ ಸೋಗಿನಲ್ಲಿ ಕಾಲೇಜಿಗೆ ಹೋಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾನೆ. ಆ ಬಳಿಕ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಗೆ ಉತ್ತರಗಳನ್ನು ಲೀಕ್ ಮಾಡಿದ ಗಂಭೀರ ಅರೋಪ ಕೇಳಿ ಬಂದಿದ್ದು,ಈ ಅಕ್ರಮದಲ್ಲಿ ಅಭ್ಯರ್ಥಿಗಳು ಸೇರಿದಂತೆ ದೊಡ್ಡ ಕಿಂಗ್ ಪಿನ್ ಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲೂ ದೊಡ್ಡ ದೊಡ್ಡವರು ಶಾಮೀಲಾಗಿದ್ದು, 300 ಕೋಟಿ ರೂ.ಗೂ ಅಧಿಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಸಹ ಇದೇ ಆರೋಪ ಮಾಡಿದ್ದಾರೆ.
KPTCL recruitment scam ಸ್ಮಾರ್ಟ್ವಾಚ್ ಬಳಸಿ ಅಕ್ರಮ- 9 ಮಂದಿ ಬಂಧನ
ಕೆಪಿಟಿಸಿಎಲ್ ನಲ್ಲಿ ಖಾಲಿಯಿದ್ದ ಸಹಾಯಕ ಇಂಜಿನಿಯರ್ ವಿದ್ಯುತ್, ಸಹಾಯಕ ಇಂಜಿನಿಯರ್ ಸಿವಿಲ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಇದೇ ಜನವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಕಳೆದ ಫೆಬ್ರವರಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ನಿಗದಿ ಪಡಿಸಲಾಗಿತ್ತು. ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಆಗಸ್ಟ್ 07 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆ ನಡೆಸಿತ್ತು.
ಗದಗದಲ್ಲಿ ಟಿಸಿಲೊಡೆದ ಅಕ್ರಮ: ಪಿಎಸ್ಐ ಅಕ್ರಮ ಇನ್ನೂ ತನಿಖಾ ಹಂತದಲ್ಲಿದೆ. ಪ್ರಭಾವಿ ಐಪಿಎಸ್ ಅಧಿಕಾರಿ ಸೇರಿದಂತೆ ಹಲವರು ಬಂಧನಕ್ಕೆ ಒಳಗಾಗಿದ್ದರು. ಈ ಅಕ್ರಮ ಜೀವಂತವಾಗಿರುವ ಬೆನ್ನಲ್ಲೇ ಅದೇ ಮಾದರಿಯಲ್ಲಿ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಗೋಲ್ಮಾಲ್ ನಡೆದಿದೆ. ಕೆಪಿಟಿಸಿಎಲ್ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದರು. ಕಾಕತಳೀಯ ವೆಂಬಂತೆ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ. ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದ್ದು, ಬ್ಲೂಟೂತ್ ಬಳಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ.
ಗದಗದ ಮುನಿಸಪಲ್ ಸರ್ಕಾರಿ ಕಾಲೇಜಿನ ಉಪನ್ಯಾಸಕ ಮಾರುತಿ ಸೋನಾವನೆ ಅವರ ಪತ್ರ ಸಮೀತ್ ಕುಮಾರ್ ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವುದು ಸೈಬರ್ ಕ್ರೈಂ ಪೋಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ, ಇಬ್ಬರನ್ನೂ ಸಹ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆ ನಡೆಯುತ್ತಿದ್ದ ವೇಳೆ ಪತ್ರಕರ್ತನ ಸೊಗಿನಲ್ಲಿ ಕಾಲೇಜಿಗೆ ಹೋಗಿದ್ದ ಪ್ರಾಚಾರ್ಯರ ಪುತ್ರ ಪ್ರಶ್ನೆ ಪತ್ರಿಕೆ ಮೊಬೈಲ್ ನಲ್ಲಿ ಕ್ಲಿಕ್ಕಿಸಿಕೊಂಡು ಲೀಕ್ ಮಾಡಿದ್ದಾನೆ. ಅ ಬಳಿಕ ರಾಜ್ಯದ ಬೇರೆ ಬೇರೆ ಕಡೆ ಕಳುಹಿಸಿದ್ದಾನೆ. ಈಗಾಗಲೇ ಪರೀಕ್ಷೆ ಅಕ್ರಮ ಡೀಲ್ ಕುದುರಿಸಿದ್ದ ಕಿಂಗ್ ಪಿನ್ ಗಳು ಪರೀಕ್ಷಾ ಅಭ್ಯರ್ಥಿಗಳಿಗೆ ಉತ್ತರ ಹೇಳಿಸಿ ಅಕ್ರಮಕ್ಕೆ ನಾಂದಿ ಹಾಡಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಎಲ್ಲಾ ಸೆಂಟರ್ ಗಳಲ್ಲಿ ಅಕ್ರಮ ನಡೆದಿರುವ ವಾಸನೆ ಬಡಿಯುತ್ತಿದೆ. ಮುನಿಸಿಪಲ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಸಂಗತಿ ಹೊರ ಬರುತ್ತಿದ್ದಂತೆ ಸೈಬರ್ ಕ್ರೈಂ ಪೊಲೀಸರು ಕೇಸು ದಾಖಲಿಸಿ ಅಕ್ರಮ ಬಯಲಿಗೆ ಎಳೆದಿದ್ದಾರೆ. ಆರಂಭದಲ್ಲಿ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ್ ಕುಮಾರ್ ನನ್ನು ಬಂಧಿಸಿದ್ದಾರೆ. ಆದರೆ ಸಮೀತ್ ಕುಮಾರ್ ಪೋನ್ ನಾಶ ಪಡಿಸಿದ್ದು, ಅದಕ್ಕಾಗಿ ಸೈಬರ್ ಪೊಲೀಸರು ಹುಡುಕುತ್ತಿದ್ದಾರೆ. ಈ ಮೂಲಕ ಈ ಅಕ್ರಮದಲ್ಲಿ ಭಾಗಿಯಾಗಿರುವರ ಕಿಂಗ್ ಪಿನ್ ಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಇನ್ನು ಕೆಪಿಟಿಸಿಎಲ್ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಮೂಲಕ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಇತರೆ 9 ಶಂಕಿತರನ್ನು ವಶಕ್ಕೆ ಪಡೆದು ಗದಗ ಸೈಬರ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಅಕ್ರಮವನ್ನು ಸಿಐಡಿ ತನಿಖೆಗೆ ವಹಿಸಿದಲ್ಲಿ ಇದರಲ್ಲಿ ಶಾಮೀಲಾಗಿರುವ ಪ್ರಭಾವಿ ಕಿಂಗ್ ಪಿನ್ ಗಳು ಮತ್ತು ಸರ್ಕಾರಿ ಅಧಿಕಾರಿಗಳೇ ಸಿಕ್ಕಿ ಬೀಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅಕ್ರಮವನ್ನು ಸಚಿವ ಸುನೀಲ್ ಕುಮಾರ್ ಸಿಐಡಿ ತನಿಖೆಗೆ ವಹಿಸುತ್ತಾರಾ ಕಾದು ನೋಡಬೇಕಿದೆ.
Recommended Video