KPSC; ಕೆಪಿಎಸ್ಸಿಗೆ ಮೂವರು ಸದಸ್ಯರ ನೇಮಕಕ್ಕೆ ಸಿಎಂ ಶಿಫಾರಸು
ಬೆಂಗಳೂರು, ಆಗಸ್ಟ್ 20: ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ಯಲ್ಲಿ ಖಾಲಿ ಇರುವ ಮೂವರು ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ರವಾನೆ ಮಾಡಿದ್ದಾರೆ.
ಆಗಸ್ಟ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮೂವರು ಸದಸ್ಯರ ಹೆಸರುಗಳ ಸಹಿತ ಟಿಪ್ಪಣಿಯನ್ನು ರವಾನೆ ಮಾಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಸದಸ್ಯರ ಹುದ್ದೆಗೆ ನೇಮಕ ಮಾಡುವ ಸಂಬಂಧ ಎಂಬ ವಿಷಯವನ್ನು ಟಿಪ್ಪಣಿ ಒಳಗೊಂಡಿದೆ.

ಈ ಕೆಳಕಂಡವರ ಸ್ವಯಂ-ವಿವರಣೆಯುಳ್ಳ ಬಯೋಡೇಟಾವನ್ನು ಲಗತ್ತಿಸಿದೆ. ಈ ಸಂಬಂಧ ಇವರುಗಳ ನೇಮಕಾತಿ ಆದೇಶವನ್ನು ಹೊರಡಿಸುವಂತೆ ಸೂಚಿಸಿದೆ ಎಂದು ಟಿಪ್ಪಣಿಯಲ್ಲಿ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಯಾರ-ಯಾರ ಹೆಸರುಗಳು; ಮುಖ್ಯಮಂತ್ರಿಗಳ ಟಿಪ್ಪಣಿಯಲ್ಲಿ ಕೆಪಿಎಸ್ಸಿ ಸದಸ್ಯರ ಹುದ್ದೆಗೆ ಬಸವರಾಜ್ ಮಲ್ಗೆ, ಬೀದರ್ ಜಿಲ್ಲೆ. ಡಾ. ಆರ್. ಕಾವಾಲಮ್ಮ, ಬೆಂಗಳೂರು ಮತ್ತು ಡಾ. ಹೆಚ್. ಭೋಜ್ಯನಾಯ್ಕ ಹೆಸರು ಶಿಫಾರಸು ಮಾಡಲಾಗಿದೆ.
ಡಾ. ಹೆಚ್. ಭೋಜ್ಯನಾಯ್ಕ ಹೆಸರು ಶಿಫಾರಸು ವಿವಾದಕ್ಕೆ ಕಾರಣವಾಗಿದೆ. ಡಾ. ಹೆಚ್. ಭೋಜ್ಯನಾಯ್ಕ ಪ್ರೊಫೆಸರ್ ಮತ್ತು ಮುಖಸ್ಥರು, ಕೈಗಾರಿಕಾ ರಸಾಯನಶಾಸ್ತ್ರ ವಿಭಾಗ, ಮಾಜಿ ರಿಜಿಸ್ಟ್ರಾರ್, ಕುವೆಂಪು ವಿಶ್ವವಿದ್ಯಾಲಯ.
ಡಾ. ಹೆಚ್. ಭೋಜ್ಯನಾಯ್ಕ ವಿರುದ್ಧ ಕೆಲವು ಗಂಭೀರ ಆರೋಪಗಳಿವೆ. ಕೆಲವು ಪ್ರಕರಣಗಳಲ್ಲಿ ತನಿಖೆ ಸಹ ನಡೆಯುತ್ತಿದೆ. ಈ ಹಿಂದೆ ಅವರು ಕುವೆಂಪು ವಿವಿ ಪರೀಕ್ಷಾಂಗ ಕುಲ ಸಚಿವರಾಗಿದ್ದ ವೇಳೆ ಅಕ್ರಮ ಎಸಗಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯಿಂದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಡಾ. ಹೆಚ್. ಭೋಜ್ಯನಾಯ್ಕ ವಿರುದ್ಧ ತನಿಖೆ ನಡೆಯುತ್ತಿದೆ ಎಂಬ ವರದಿಗಳಿವೆ. ವಿವಿಯಲ್ಲಿ ಕೆಟಿಟಿಪಿ ನಿಯಮ ಉಲ್ಲಂಘಿಸಿ ಅಕ್ರಮ ಎಸಗಿದ್ದಾರೆಂಬ ಎಂಬ ಆರೋಪದ ಕುರಿತು ದೂರು ದಾಖಲಾಗಿತ್ತು.
ಹೈಕೋರ್ಟ್ಗೆ ಅರ್ಜಿ; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಕುರಿತು ಕರ್ನಾಟಕ ಹೈಕೋರ್ಟ್ ಅರ್ಜಿ ಸಹ ಸಲ್ಲಿಕೆಯಾಗಿದೆ. ನೇಮಕಾತಿಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ನೇಮಕಾತಿಯಲ್ಲಿ ಸುಪ್ರೀಂಕೋರ್ಟ್ ಆದೇಶ ಅನುಸರಿಸಬೇಕು ಎಂದು ಕೋರ್ಟ್ ಹೇಳಿತ್ತು.
ಕೆಪಿಎಸ್ಸಿಯ ಅಧ್ಯಕ್ಷ ಮತ್ತು 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ಮತ್ತು ಶಶಿಪ್ರಸಾದ್ ಗಾಂಧಿ ಪ್ರತ್ಯೇಕವಾಗಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು. ಈ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು ಎಂದು ಆದೇಶ ನೀಡಿತ್ತು.
ಕೋರ್ಟ್ ತನ್ನ ಆದೇಶದಲ್ಲಿ ಕೆಪಿಎಸ್ಸಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು ಉನ್ನತ ಮಟ್ಟದ ಮತ್ತು ಅತಿಸೂಕ್ಷ್ಮ ಸಾಂವಿಧಾನಿಕ ಹುದ್ದೆಗಳಾಗಿವೆ. ಅವುಗಳಿಗೆ ನೇಮಕ ಮಾಡುವ ವೇಳೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಆಕ್ಷೇಪಣೆ, ಆರೋಪ ಮತ್ತು ನಿರಂಕುಶತ್ವ ಮತ್ತು ಸ್ವೇಚ್ಛೆಯಿಂದ ಅಧಿಕಾರ ಬಳಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಹೇಳಿತ್ತು.
ಅರ್ಜಿದಾರರು ಕೆಪಿಎಸ್ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳಿಲ್ಲ. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು. ಮಾರ್ಗಸೂಚಿಯಂತೆ ಅಧ್ಯಕ್ಷರ ನೇಮಕಾತಿ ಹಾಗೂ ಶೋಧನಾ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.












Click it and Unblock the Notifications