ಅತೃಪ್ತ ಶಾಸಕರಿಗೆ ಆಷಾಢದ ಬಳಿಕ ಸಿಹಿ ಸುದ್ದಿ: ಈಶ್ವರ್ ಖಂಡ್ರೆ
ಬೆಂಗಳೂರು, ಆಗಸ್ಟ್ 03: ಸಚಿವ ಸ್ಥಾನ ಸಿಗದೆ ಅತೃಪ್ತರಾಗಿದ್ದ ಶಾಸಕರಿಗೆ ಆಷಾಢದ ನಂತರ ಸಿಹಿ ಸುದ್ದಿ ಕೊಡಲಿದೆ ರಾಜ್ಯ ಕಾಂಗ್ರೆಸ್.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಆಷಾಢದ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಅತೃಪ್ತ ಶಾಸಕರಲ್ಲಿ ಕೆಲವರಿಗೆ ಸಚಿವ ಸ್ಥಾನ ದೊರೆಯುವ ಸುಳಿವು ನೀಡಿದ್ದಾರೆ.
ಆಷಾಢ ಮಾಸ ಕಳೆದರೂ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯವಿಲ್ಲ!
ನಗರದ ಗೆಸ್ಟ್ಹೌಸ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಮಾಡುವುದಾಗಿ ಹೇಳಿದ್ದಾರೆ.
ವೇಣುಗೋಪಾಲ್ ಜತೆ ಚರ್ಚೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸಿದ್ದು ಅವರ ನೇತೃತ್ವದಲ್ಲಿ ಎರಡು ದಿನಗಳ ಸಭೆಗಳು ನಡೆಯಲಿವೆ. ನಂತರ ಅವರೊಂದಿಗೆ ಚರ್ಚೆ ನಡೆಸಿ ಹೊಸದಾಗಿ ಸಂಪುಟಕ್ಕೆ ಸೇರುವ ಶಾಸಕರ ಪಟ್ಟಿ ಮಾಡಲಾಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅತೃಪ್ತರು ಯಾರ್ಯಾರು
ಎಂಬಿ ಪಾಟೀಲ್, ಎಚ್.ಕೆ.ಪಾಟೀಲ್, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಶಿಡ್ಲಘಟ್ಟ ಶಾಸಕ ಮುನಿಯಪ್ಪ, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ಎನ್ಎ ಹ್ಯಾರಿಸ್ ಇನ್ನೂ ಹಲವು ಅತೃಪ್ತ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಯಾರ ಕಣ್ಣಿಗೆ ಸುಣ್ಣ, ಯಾರಿಗೆ ಬೆಣ್ಣೆ
ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದರು
ಅತೃಪ್ತ ಶಾಸಕರು ತಮ್ಮದೇ ಪ್ರತ್ಯೇಕ ಬಣ ಮಾಡಿಕೊಂಡು ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದರು. ಆ ನಂತರ ಹೈಕಮಾಂಡ್ ಬಳಿಯು ತಮ್ಮ ಅಳಲು ತೋಡಿಕೊಂಡಿದ್ದರು. ಹೈಕಮಾಂಡ್ ಅಭಯದ ಬಳಿಕ ಅತೃಪ್ತರು ತಣ್ಣಗಾಗಿದ್ದರು.
ಯಾರ್ಯಾರಿಗೆ ಸ್ಥಾನ ಸಾಧ್ಯತೆ
ಅತೃಪ್ತ ಶಾಸಕರ ಮುಖಂಡತ್ವ ವಹಿಸಿದ್ದ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅಲ್ಲದೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅಥವಾ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜು ಅವರ ನಡುವೆ ಒಬ್ಬರಿಗೆ ಸ್ಥಾನ ಕೊಡಬಹುದು ಎನ್ನಲಾಗಿದೆ. ಉತ್ತರ ಕರ್ನಾಟಕ ಕೂಗು ಎದ್ದಿರುವ ಕಾರಣ ಹಿರಿಯ ಎಚ್.ಕೆ.ಪಾಟೀಲ್ ಅವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಚಿಂತಿಸಬಹುದು.
ಸ್ಥಳೀಯ ಸಂಸ್ಥೆಗಳ ಚುನಾವಣೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ನಿಗದಿಯಾಗಿರುವ ಕಾರಣ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆಯೂ ಇಲ್ಲಿದಿಲ್ಲ. ಚುನಾವಣೆ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡುವ ಬಗ್ಗೆಯೂ ರಾಜ್ಯ ಕಾಂಗ್ರೆಸ್ ಚಿಂತಿಸುತ್ತಿದೆ.