ಇಡಿ, ಐಟಿ ದಾಳಿಯಿಂದ ಕಾಂಗ್ರೆಸ್ ನಿರ್ನಾಮಕ್ಕೆ ಕೇಂದ್ರ ಯತ್ನ: ಗುಂಡೂರಾವ್
ವಿಜಯಪುರ, ಫೆಬ್ರವರಿ 16: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳಿಂದ ಪ್ರಹಾರ ನಡೆಸಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಕೇಂದ್ರ ಸರಕಾರ ಸಂಚು ರೂಪಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಸದಸ್ಯರ ಹೆಸರನ್ನು ಹಾಳು ಮಾಡುತ್ತಾ ಕಾಂಗ್ರೆಸ್ ನಿರ್ನಾಮ ಮಾಡುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ. ದೇಶದಲ್ಲಿ ಎಲ್ಲೆಡೆ ಕಾಂಗ್ರೆಸ್ ಪಕ್ಷದವರ ಮೇಲೆ ಐಟಿ ದಾಳಿಗಳು ನಡೆದಿವೆ ಹೊರತು ಬಿಜೆಪಿ ಸದಸ್ಯರ ಮೇಲೆ ಕೇಂದ್ರ ಸರಕಾರ ಐಟಿ ದಾಳಿ ನಡೆಸಿಲ್ಲ ಹೀಗಾಗಿ ಕಾಂಗ್ರೆಸ್ಸಿಗರ ಮೇಲೆ ಐಟಿ, ಇಡಿ ದಾಳಿಗಳನ್ನು ನಡೆಸಿ ಪಕ್ಷವನ್ನು ಮುಗಿಸುವ ಸಂಚು ಮಾಡಿದೆ ಈ ಕ್ರಮ ಅವರಿಗೆ ಮುಳ್ಳಾಗಲಿದೆ ಎಂದು ತಿಳಿಸಿದರು.[ಬಿಜೆಪಿ ವಿರುದ್ದ ದಿನೇಶ್ ಗುಂಡೂರಾವ್ ಸಿಡಿಸಿದ ಹೊಸ ಬಾಂಬ್]
ಬಿಜೆಪಿಯಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ ಅವರ ಆತ್ಮವಿಶ್ವಾಸವನ್ನು ತಗ್ಗಿಸುತ್ತಿದ್ದಾರೆ. ಯಡಿಯೂರಪ್ಪನವರು ಡೈರಿ ವಿಚಾರವಾಗಿ ಹಿಡಿತತಪ್ಪಿ ಮಾತನಾಡುತ್ತಿದ್ದಾರೆ. ಅವರಿಗೆ ತಾಕತ್ತು ಇದ್ದರೆ ಡೈರಿಯನ್ನು ಬಿಡುಗಡೆಗೊಳಿಸಲಿ ಎಂದು ಗುಂಡೂರಾವ್ ಸವಾಲು ಹಾಕಿದರು.
ಮುಂದಿನ ವಿಧಾನ ಸಭಾ ಚುನಾವಣೆಗೆ ರಾಜ್ಯ ಸರಕಾರ ಸಿದ್ದತೆ ನಡೆಸುತ್ತಿದೆ. ಇನ್ನು ಉಪಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಅಭ್ಯರ್ಥಿಯನ್ನು ಘೋಷಿಸಲಾಗುವುದು. ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರಿದ್ದಾಗ ಕಾಂಗ್ರೆಸ್ ಪಕ್ಷ ಸರಿಯಿತ್ತು ಎಂದು ಹೇಳುವುದು ತಪ್ಪು. ಜೆಡಿಎಸ್ ಮತ್ತು ಬಿಜೆಪಿಯಿಂದ ಹಲವು ಮುಖಂಡರು ಕಾಂಗ್ರೆಸ್ಸಿಗೆ ಸೇರಲಿದ್ದಾರೆ ಎಂದು ಹೇಳಿದರು.