ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಟ: ಡಿಕೆಶಿಗೆ ದಿನೇಶ್ ಗುಂಡೂರಾವ್ ಟಾಂಗ್
ಬೆಂಗಳೂರು, ಆಗಸ್ಟ್ 26: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಇಬ್ಬರು ಹಿರಿಯ ನಾಯಕರ ನಡುವೆ ಜಿದ್ದಾಜಿದ್ದಿನ ಪ್ರಯತ್ನ ನಡೆಯುತ್ತಿದ್ದು, ಇಬ್ಬರೂ ನಾಯಕರ ನಡುವೆ ಪರೋಕ್ಷ ವಾಗ್ಯುದ್ದ ಪ್ರಾರಂಭವಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸ್ಥಾನದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣಿಟ್ಟಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಕೆಲವೇ ದಿನಗಳಲ್ಲಿ ಆಯ್ಕೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದು ಪ್ರಸ್ತುತ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಅಸಮಾಧಾನ ತಂದಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, 'ಮಾಧ್ಯಮಗಳಲ್ಲಿ ಪ್ರಚಾರ ತಗೊಂಡು ಕೆಪಿಸಿಸಿ ಅಧ್ಯಕ್ಷರಾಗೋಕೆ ಆಗೊಲ್ಲ' ಎಂದು ಪರೋಕ್ಷವಾಗಿ ಡಿಕೆ.ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.

ಒಬ್ಬರಿಂದ ಪಕ್ಷ ಸಂಘಟನೆ ಆಗದು: ದಿನೇಶ್ ಗುಂಡೂರಾವ್
ಮುಂದುವರೆದು ಮಾತನಾಡಿರುವ ಅವರು, ಕೇವಲ ಒಬ್ಬರಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎನ್ನುವುದು ಸುಳ್ಳು. ಪಕ್ಷ ಸಂಘಟನೆಗೆ ಸಾಂಘಿಕ ಪ್ರಯತ್ನ ಬೇಕು ಎಂದು ಅವರು ಹೇಳಿದರು.

'ಒಂದಿಬ್ಬರು ಕೆಪಿಸಿಸಿ ಅಧ್ಯಕ್ಷರ ಬದಲು ಮಾಡಲಾಗದು'
'ಕೇವಲ ಒಂದಿಬ್ಬರು ಸೇರಿಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ, ಅದನ್ನು ಎಐಸಿಸಿ ನಿರ್ಧರಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ಪ್ರಯತ್ನ ನಡೆದಿಲ್ಲ, ಬಿಜೆಪಿಯು ತನ್ನ ಹುಳುಕು ಮರೆಮಾಚಲು ಹೀಗೆ ಸುಳ್ಳು ಸುದ್ದಿ ಹರಿಬಿಟ್ಟಿದೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾಯಿಸುವ ಸಾಧ್ಯತೆ
ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಉಮೇದು ಹೈಕಮಾಂಡ್ಗೆ ಇದ್ದು, ನಾಳೆ ಗುಲಾಂ ನಬಿ ಆಜಾದ್ ಮತ್ತು ಕೆಸಿ ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದು ಈ ವಿಷಯವಾಗಿ ಚರ್ಚೆ ನಡೆಸಲಿದ್ದಾರೆ.

ಉಪಚುನಾವಣೆಗಾಗಿ ಬದಲಾವಣೆ
ಉಪಚುನಾವಣೆಗೆ ತಯಾರಾಗಲು ಕೆಪಿಸಿಸಿಯಲ್ಲಿ ಪ್ರಮುಖ ಬದಲಾವಣೆ ತರಲು ನಿಶ್ಚಯಿಸಲಾಗಿದೆ. ಹಾಗಾಗಿಯೇ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಅಧಿಕಾರ ನೀಡಲು ಎಐಸಿಸಿ ನಿರ್ಣಯಿಸಿದೆ.












Click it and Unblock the Notifications