ಕೆಪಿಸಿಸಿಗೆ ನೂತನ ಸಾರಥಿ ಯಾರು?
ಬೆಂಗಳೂರು, ಮಾರ್ಚ್ 09 : ಕರ್ನಾಟಕ ಪ್ರದೇಶ ಕಾ೦ಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಕೆಪಿಸಿಸಿಗೆ ಸಾರಥಿಯನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಸಲು ಡಾ.ಜಿ.ಪರಮೇಶ್ವರ ಅವರು ದೆಹಲಿಗೆ ತೆರಳಿದ್ದಾರೆ.
ಡಾ.ಜಿ.ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿದ್ದಾರೆ. 2015ರ ಅಕ್ಟೋಬರ್ನಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಿದ್ದಾರೆ. ವಿವಿಧ ಚುನಾವಣೆಗಳು ಎದುರಾದ ಕಾರಣ ಪಕ್ಷದ ಹೈಕಮಾಂಡ್ ಹೊಸ ಅಧ್ಯಕ್ಷರ ಹುಡುಕಾಟ ನಡೆಸಿರಲಿಲ್ಲ. [ಡಾ.ಜಿ.ಪರಮೇಶ್ವರ ಪರಿಚಯ]
ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬುದು ಕಾಂಗ್ರೆಸ್ನಲ್ಲಿರುವ ನಿಯಮ. ಪರಮೇಶ್ವರ ಅವರು ಸಿದ್ದರಾಮಯ್ಯ ಸಂಪುಟ ಸೇರಿದಾಗಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕಿತ್ತು. ಆದರೆ, ಬಿಬಿಎಂಪಿ, ಮೂರು ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಾದ ಕಾರಣ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ತಡವಾಗಿತ್ತು. [ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಯಾರು?]
ಸದ್ಯ, ಅಧ್ಯಕ್ಷರ ಬದಲಾವಣೆಗೆ ವರಿಷ್ಠರು ನಿರ್ಧರಿಸಿದ್ದಾರೆ. ಆದ್ದರಿಂದ, ಪರಮೇಶ್ವರ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ. ಮುಂದಿನ 15 ದಿನಗಳಲ್ಲಿ ಕೆಪಿಸಿಸಿಗೆ ಹೊಸ ಸಾರಥಿ ಆಯ್ಕೆಯಾಗುವುದಂತು ಖಚಿತವಾಗಿದೆ. ಅಧ್ಯಕ್ಷರ ಆಯ್ಕೆ ಹಿಂದಿನ ಲೆಕ್ಕಾಚಾರ ಚಿತ್ರಗಳಲ್ಲಿ..... [ಕೆಪಿಸಿಸಿ ಅಧ್ಯಕ್ಷ ಗಾದಿ: ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತರು ಮುಂದೆ]

ಅಧ್ಯಕ್ಷ ಹುದ್ದೆಗೆ ಯಾರ ಹೆಸರು?
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ, ಸಚಿವ ಎಸ್.ಆರ್.ಪಾಟೀಲ್ ಹೆಸರು ಮುಂಚೂಣಿಯಲ್ಲಿದೆ. ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರುಗಳು ಕೇಳಿಬರುತ್ತಿವೆ.

ಲಿಂಗಾಯತ ಅಥವ ಒಕ್ಕಲಿಗರಿಗೆ ಪಟ್ಟ
ಲಿಂಗಾಯತ ಅಥವ ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕು ಎಂಬುದು ಲೆಕ್ಕಾಚಾರ. ಈ ಅಭಿಪ್ರಾಯ ಮೂಲ ಕಾಂಗ್ರೆಸಿಗರದ್ದು. ಆದರೆ, ಅಹಿಂದ ವರ್ಗಕ್ಕೆ ಸೇರಿದವರು ಈ ಹುದ್ದೆ ಅಲಂಕರಿಸಬೇಕು ಎನ್ನುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಅವರ ಲೆಕ್ಕಾಚಾರಗಳೇನು?
ಅಪ್ಪಾಜಿ ನಾಡಗೌಡ ಅಥವ ಎಸ್.ಆರ್.ಪಾಟೀಲ್ ಅವರನ್ನು ಅಧ್ಯಕ್ಷರಾಗಿ ನೇಮಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಲವು ಹೊಂದಿದ್ದಾರೆ. ಅಪ್ಪಾಜಿ ನಾಡಗೌಡರಾದರೆ ರಾಜ್ಯವನ್ನು ತಿರುಗಿ ಪಕ್ಷ ಕಟ್ಟಬಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ ನಿರಂತರವಾಗಿ ವಿಧಾನಸಭೆಗೆ ಗೆದ್ದು ಬರುತ್ತಿರುವ ಅಪ್ಪಾಜಿ ನಾಡಗೌಡರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಿದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇದೆ.

ಯಡಿಯೂರಪ್ಪ ಅಧ್ಯಕ್ಷರಾದರೆ ಎಂಬ ಲೆಕ್ಕಾಚಾರ
ಲಿಂಗಾಯತ ಸಮುದಾಯದ ಎಸ್.ಆರ್.ಪಾಟೀಲ್ ಅವರನ್ನು ನೇಮಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ಪ್ರಬಲ ಲಿಂಗಾಯತ ನಾಯಕ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದರೆ ಅದೇ ಸಮುದಾಯದ ಮತ್ತೋರ್ವ ನಾಯಕ ಕೆಪಿಸಿಸಿ ಸಾರಥ್ಯ ವಹಿಸಿದರೆ ಲಾಭವಾಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಡಿಕೆಶಿ ಮತ್ತು ಮುದ್ದಹನುಮೇಗೌಡರ ಹೆಸರು
ಒಕ್ಕಲಿಗ ಸಮುದಾಯದವರಾದ ತುಮಕೂರು ಸಂಸದ ಮುದ್ದಹನುಮೇಗೌಡ ಅಥವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications