ಡಿ.ಕೆ.ಶಿವಕುಮಾರ್ ಮಾಡಿದ್ದ ಆ ಒಂದು ಮನವಿಯನ್ನು ಯಡಿಯೂರಪ್ಪ ಈಡೇರಿಸಿದ್ದರೆ?
ಲಾಕ್ ಡೌನ್ ಎರಡನೇ ಹಂತ ಮುಂದುವರಿಯುತ್ತದ್ದಂತೆಯೇ, ವಿವಿಧ ಕಾರಣಗಳಿಂದ ರಾಜ್ಯದಿಂದ ಹೊರಗೆ ಹೋಗಿರುವ ಜನರ ಪರಿಸ್ಥಿತಿಯೂ ಅತಂತ್ರಗೊಂಡಿದೆ. ಕರ್ನಾಟಕಕ್ಕೆ ವಾಪಸ್ ಆಗಲು, ಅವರಿಗೆ ಯಾವುದೇ ಮಾರ್ಗಗಳು ಸದ್ಯಕ್ಕೆ ಉಳಿದಿಲ್ಲ.
ಅಲ್ಲೂ ಇರಲಾರದೇ, ಇಲ್ಲೂ ಬರಲಾರದೇ, ಹಲವರ ಪರಿಸ್ಥಿತಿ ಮನಃಕಲಕುವಂತಿದೆ. ರಾಜ್ಯದ ವಿವಿಧ ಚೆಕ್ ಪೋಸ್ಟ್, ಗಡಿಭಾಗ ಸೀಲ್ ಆಗಿರುವುದರಿಂದ, ಗೃಹ ಇಲಾಖೆಯ ಅನುಮತಿ ಇಲ್ಲದೇ, ರಾಜ್ಯಕ್ಕೆ ಎಂಟ್ರಿ ಆಗುವಂತಿಲ್ಲ.
ಆದಾಗ್ಯೂ, ಪೊಲೀಸರ ಕಣ್ಣುತಪ್ಪಿಸಿ, ಟ್ರಕ್, ಟಿಟಿ, ಅಂಬುಲೆನ್ಸ್ ನ ಮೂಲಕ ರಾಜ್ಯದತ್ತ ಬರಲು ಹೊರಟಿದ್ದ ಜನರನ್ನು, ಆಯಾಯ ರಾಜ್ಯದ ಪೊಲೀಸರು ಒಂದೋ ವಾಪಸ್ ಕಳುಹಿಸುತ್ತಿದ್ದರೆ, ಇಲ್ಲವೋ, ಶಿಬಿರಕ್ಕೆ ದೂಡುತ್ತಿದ್ದಾರೆ. ಈ ನಡುವೆ, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ಸರಕಾರಕ್ಕೆ ಮಾಡಿದ್ದ ಮನವಿಯನ್ನು ಪುನರುಚ್ಚಿಸಿದ್ದಾರೆ.
ಎರಡು ದಿನಗಳ ಹಿಂದೆ, ಹರಡಿದ ಒಂದು ಸುಳ್ಳುಸುದ್ದಿಯಿಂದ, ಮುಂಬೈನಲ್ಲಿನ ವಲಸಿಗರು, ತಮ್ಮ ಊರಿಗೆ ವಾಪಸ್ ಹೊರಡಲು, ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಡಿಕೆಶಿ, ಸಿಎಂ ಯಡಿಯೂರಪ್ಪನವರಿಗೆ ಮಾಡಿದ ಮನವಿ:

30 ಬಸ್ ಗಳಲ್ಲಿ ಅಹಮದಾಬಾದ್ ಗೆ ವಾಪಸ್ ಕರೆಸಿಕೊಂಡಿದ್ದ ಸಿಎಂ ರೂಪಾನಿ
ವಲಸಿಗರಿಗೆ ತಮ್ಮತಮ್ಮ ಊರಿಗೆ ವಾಪಸ್ ಆಗಲು, ಗುಜರಾತ್, ಉತ್ತರ ಪ್ರದೇಶ ಮತ್ತು ದೆಹಲಿ ಸರಕಾರ ಬಸ್ಸುಗಳನ್ನು ಆಯೋಜಿಸಿತ್ತು. ಉತ್ತರಾಖಂಡ್ ನಲ್ಲಿದ್ದ ಸುಮಾರು 1,800 ಗುಜರಾತ್ ರಾಜ್ಯದವರನ್ನು ಮೂವತ್ತು ಬಸ್ ಗಳಲ್ಲಿ ಅಹಮದಾಬಾದ್ ಗೆ ಸಿಎಂ ವಿಜಯ್ ರೂಪಾನಿ ವಾಪಸ್ ಕರೆಸಿಕೊಂಡಿದ್ದರು.

NCR ಭಾಗದಿಂದ ವಾಪಸ್
ಅದೇ ರೀತಿ, NCR ಭಾಗದಲ್ಲಿ ಅಂದರೆ, ನೋಯ್ಡಾ, ಘಾಜಿಯಾಬಾದ್ ಮುಂತಾದ ಕಡೆ ಕೆಲಸ ನಿರ್ವಹಿಸಿಕೊಂಡಿದ್ದ ಸಾವಿರಾರು ಜನರನ್ನು, ಉತ್ತರ ಪ್ರದೇಶಕ್ಕೆ ವಾಪಸ್ ಕಳುಹಿಸಲು ದೆಹಲಿ ಸಿಎಂ ಕೇಜ್ರಿವಾಲ್ ಬಸ್ ವ್ಯವಸ್ಥೆಯನ್ನು ಮಾಡಿದ್ದರು. ಇದು ಅತ್ಯಂತ ಅವ್ಯವಸ್ಥೆಯಿಂದ ಕೂಡಿತ್ತು. ಯೋಗಿ ಆದಿತ್ಯನಾಥ್ ಮತ್ತು ಕೇಜ್ರಿವಾಲ್, ಒಬ್ಬರೊನ್ನೊಬ್ಬರು ಈ ವಿಷಯದಲ್ಲಿ ದೂರಿಕೊಂಡಿದ್ದರು.

ಸರ್ವಪಕ್ಷಗಳ ಸಭೆ
ಈಗ ಅದೇ ರೀತಿ, ಕರ್ನಾಟಕದಲ್ಲೂ ಈ ವ್ಯವಸ್ಥೆಯನ್ನು (ಬಸ್ ) ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಅವರು, ಸಿಎಂ ಯಡಿಯೂರಪ್ಪನವರ ಬಳಿ ಮನವಿ ಮಾಡಿದ್ದಾರೆ. "ಈ ಹಿಂದೆ ಸರ್ವಪಕ್ಷಗಳ ಸಭೆ ನಡೆದಾಗಲೂ ಯಡಿಯೂರಪ್ಪನವರ ಬಳಿ ಮನವಿ ಮಾಡಿದ್ದೆವು. ಬೇರೆ ಊರಿನಲ್ಲಿ ಸಿಕ್ಕಿಹಾಕಿಕೊಂಡಿರುವವರು ಫೋನ್ ಮಾಡಿ, ತಮ್ಮ ತೊಂದರೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ನಮ್ಮವರನ್ನು ವಾಪಸ್ ಕರೆಸಿಕೊಳ್ಳಲು ಸರಕಾರ ಮುಂದಾಗಬೇಕು"ಎಂದು ಡಿಕೆಶಿ, ಮನವಿ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಮನವಿ
"ಎಷ್ಟೋ ಜನ ವಾಪಸ್ ಬರಲಾಗದೇ ಕಾರಿನಲ್ಲೇ ಉಳಿದುಕೊಂಡಿದ್ದಾರೆ. ಎಷ್ಟೋ ಜನರಿಗೆ ಊಟ ತಿಂಡಿಯ ವ್ಯವಸ್ಥೆಯಿಲ್ಲ. ನಮ್ಮ ಅಣ್ಣತಮ್ಮಂದಿರನ್ನು ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳೂವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ, ಗುಜರಾತ್ ನಂತೆ, ಕರ್ನಾಟಕದ ಮುಖ್ಯಮಂತ್ರಿಗಳೂ ನಡೆದುಕೊಳ್ಳಲಿ, ಸಾರಿಗೆ ವ್ಯವಸ್ಥೆ ಮಾಡಿ, ವಾಪಸ್ ಕರೆಸಿಕೊಳ್ಳಬೇಕು" ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.












Click it and Unblock the Notifications