ಪರಿಷತ್ ಫೈಟ್; ಸಿದ್ದರಾಮಯ್ಯ ಭೇಟಿಯಾದ ಡಿಕೆಶಿ
ಬೆಂಗಳೂರು, ಜೂನ್ 16 : ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕಾಂಗ್ರೆಸ್ನಲ್ಲಿ ಹೆಚ್ಚುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
Recommended Video
ಮಂಗಳವಾರ ಸಂಜೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಕೆಲವು ಹೊತ್ತು ಅವರ ಜೊತೆ ವಿಧಾನ ಪರಿಷತ್ ಚುನಾವಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.
ಜೂನ್ 29ರಂದು ಕರ್ನಾಟಕದ ವಿಧಾನಸಭೆಯಿಂದ 7 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಶಾಸಕ ಬಲದ ಆಧಾರದ ಮೇಲೆ ಕಾಂಗ್ರೆಸ್ಗೆ 2 ಸ್ಥಾನ ಸಿಗಲಿದೆ. ಇದಕ್ಕೆ ಡಜನ್ಗೂ ಅಧಿಕ ಆಕಾಂಕ್ಷಿಗಳಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.
ಸೋಮವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಸಭೆ ನಡೆಯಿತು. ಆದರೆ, ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಜೂನ್ 18 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.

ಟಿಕೆಟ್ ಆಕಾಂಕ್ಷಿಗಳು ಹೆಚ್ಚು
ವಿಧಾನಸಭೆಯಲ್ಲಿ 68 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆಯಲ್ಲಿ 2 ಸ್ಥಾನದಲ್ಲಿ ಜಯಗಳಿಸಬಹುದು. ಆದರೆ, ನಿವೃತ್ತಿಯಾಗುವ ಸದಸ್ಯರು ಮರು ಆಯ್ಕೆ ಬಯಸಿದ್ದಾರೆ. ಅಲ್ಪ ಸಂಖ್ಯಾತ, ಮಹಿಳಾ, ಹಿಂದುಳಿದ ವರ್ಗ ಹೀಗೆ ವಿವಿಧ ಕೋಟಾದಡಿ ಹಿರಿಯ ನಾಯಕರು ಟಿಕೆಟ್ ಕೇಳುತ್ತಿದ್ದು ಕಗ್ಗಂಟಾಗಿದೆ.

ರಾಜ್ಯಸಭೆ ಟಿಕೆಟ್ ವಂಚಿತರು
ರಾಜ್ಯಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸೀಟು ಬಿಟ್ಟುಕೊಟ್ಟ ರಾಜೀವ್ ಗೌಡ, ತುಮಕೂರು ಕ್ಷೇತ್ರದ ಮಾಜಿ ಸಂಸದ ಮುದ್ದಹನುಮೇಗೌಡ ಸೇರಿದಂತೆ ಹಲವರು ಪರಿಷತ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬ ಕೂಗು ಸಹ ಎದ್ದಿದ್ದು ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.

ಯಾವ-ಯಾವ ನಾಯಕರು?
ಮಾಜಿ ಸಚಿವ ಎಚ್. ಎಂ. ರೇವಣ್ಣ, ಎಂ. ಆರ್. ಸೀತಾರಾಮ್ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಮೋಹನ್ ಬಾಬು, ಐವಾನ್ ಡಿಸೋಜಾ, ನಝೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ಹೆಸರುಗಳು ಸಹ ಕೇಳಿ ಬರುತ್ತಿವೆ. ಎರಡು ಸೀಟುಗಳನ್ನು ಯಾರಿಗೆ ನೀಡಬೇಕು? ಎಂಬುದು ಭಾರಿ ಚರ್ಚೆಗೆ ಕಾರಣವಾಗಿದೆ.

ಕೆ. ಸಿ. ವೇಣುಗೋಪಾಲ್ ತೀರ್ಮಾನ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ರಾಜಸ್ಥಾನದಿಂದ ರಾಜ್ಯಸಭೆ ಚುನಾವಣೆ ಕಣಕ್ಕಿಳಿದಿದ್ದಾರೆ. ಅವರು ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರ ಜೊತೆ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.












Click it and Unblock the Notifications