ದಿನೇಶ್ ಗುಂಡೂರಾವ್ ಬಳಿ ಸೋಲಿಗೆ ಮುಖಂಡರು ನೀಡಿದ ಕಾರಣ ಇದೊಂದೇ
Recommended Video
ಬೆಂಗಳೂರು, ಜೂನ್ 17: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನೈತಿಕ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಗೆ ಕೆಪಿಸಿಸಿ ಮಾಧ್ಯಮ ಕಚೇರಿ ಸ್ಪಷ್ಟನೆ ನೀಡಿ, ಸುದ್ದಿಯನ್ನು ತಳ್ಳಿಹಾಕಿದೆ.
ಸೋಲಿಗೆ ಸುದೀರ್ಘ ಅವಲೋಕನದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್, ಪ್ರತೀ ಜಿಲ್ಲಾ ಘಟಕದ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದೆ. ಭಾನುವಾರವೂ (ಜೂ 16) ಹಲವು ಜಿಲ್ಲಾಧ್ಯಕ್ಷರ ಜೊತೆ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದ್ದಾರೆ.
ಎಲ್ಲಾ ಮುಖಂಡರು ಸೋಲಿಗೆ ನೀಡುತ್ತಿರುವುದು ಒಂದೇ ಒಂದು ಕಾರಣ, ಅದು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದು. ಇನ್ನು ಮುಂದೆಯಾದರೂ ಇಂತಹ ತಪ್ಪಾಗದಂತೆ ನೋಡಿಕೊಳ್ಳಿ, ಹೈಕಮಾಂಡಿಗೆ ಖಡಕ್ಕಾಗಿ ರಾಜ್ಯ ಘಟಕದ ಅಭಿಪ್ರಾಯವನ್ನು ತಿಳಿಸಿ ಎಂದು ಮುಖಂಡರು, ದಿನೇಶ್ ಗುಂಡೂರಾವ್ ಅವರಿಗೆ ಹೇಳಿದ್ದಾರೆ.

ಜೆಡಿಎಸ್ ಜೊತೆ ದೊಡ್ಡವರ ಲೆವೆಲ್ ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಯಿತು, ಆದರೆ ಕಾರ್ಯಕರ್ತರು ಇನ್ನೂ ಜೆಡಿಎಸ್ ನಮ್ಮ ವಿರೋಧಿ ಎನ್ನುವ ಭಾವನೆಯಲ್ಲಿದ್ದಾರೆ. ಇದು ತಳಮಟ್ಟದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣವಾಯಿತು ಎನ್ನುವುದನ್ನು ಹಿರಿಯ ಮುಖಂಡರು ಅರ್ಥಮಾಡಿಕೊಳ್ಳಬೇಕು ಎಂದು ಜಿಲ್ಲಾ ಮುಖಂಡರು, ದಿನೇಶ್ ಗುಂಡೂರಾವ್ ಗೆ ಹೇಳಿದ್ದಾರೆಂದು ತಿಳಿದುಬಂದಿದೆ.
ಬಿಜೆಪಿಯನ್ನು ದೂರವಿಡಲು ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡರೆ ಅದಕ್ಕೆ ಯಾರದ್ದೂ ವಿರೋಧವಿಲ್ಲ. ಆದರೆ, ಚುನಾವಣೆಗೆ ಮುನ್ನ ಹೊಂದಾಣಿಕೆ ಮಾಡಿಕೊಂಡರೆ, ಸಾಂಪ್ರದಾಯಿಕ ಮತಗಳಿಗೆ ಧಕ್ಕೆಯಾಗುತ್ತದೆ ಎನ್ನುವುದು ಜಿಲ್ಲಾ ಮುಖಂಡರ ಬಹುತೇಕ ಅಭಿಪ್ರಾಯವಾಗಿತ್ತು.
ದೇವೇಗೌಡರ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಿದರು, ಇದು ಕುಟುಂಬ ರಾಜಕಾರಣದ ಬಗ್ಗೆ ಜನರು ಆಡಿಕೊಳ್ಳುವಂತಾಯಿತು. ಅದರಲ್ಲೂ, ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದು, ಎರಡೂ ಪಕ್ಷಗಳಿಗೆ ಹಿನ್ನಡೆಗೆ ಕಾರಣವಾಯಿತು ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications