ಮೈತ್ರಿ ಸರ್ಕಾರ ಅಲ್ಲಾಡುತ್ತಿರುವಾಗ ಕೆಪಿಸಿಸಿ ಅಧ್ಯಕ್ಷರ ವಿದೇಶ ಪ್ರವಾಸ!
ಬೆಂಗಳೂರು, ಜುಲೈ 02: ಈಗಾಗಲೇ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಕೆಲವು ಹಿರಿಯ ಶಾಸಕರು ಬಹಿರಂಗವಾಗಿ ಪಕ್ಷದ ವಿರುದ್ಧ ಗುಟುರು ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಆಪ್ತ ಶಾಸಕರು ಕಾಂಗ್ರೆಸ್ ಗೆ ಕೈ ಕೊಡುವ ಸಾಧ್ಯತೆಗಳಿವೆ, ಇಂತಹಾ ಸಂಧಿಗ್ದ ಪರಿಸ್ಥಿತಿಯಲ್ಲಿ ದಿನೇಶ್ ಗುಂಡೂರಾವ್ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ಹೌದು, ಸರ್ಕಾರಕ್ಕೆ ಪಥನದ ಭೀತಿ ಪ್ರಾರಂಭವಾಗಿರುವ ಈ ಹೊತ್ತಿನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ದಿನೇಶ್ ಗುಂಡೂರಾವ್ ಅವರು ಲಂಡನ್ ಪ್ರವಾಸ ಹೊರಟಿದ್ದು, ಕುಟುಂಬ ಸದಸ್ಯರೊಂದಿಗೆ 10 ದಿನಗಳ ಕಾಲ ಲಂಡನ್, ಸಿಂಗಪುರ ಸೇರಿದಂತೆ ಇನ್ನೂ ಹಲವು ಕಡೆ ಸುತ್ತಾಡಿ ವಾಪಸ್ಸಾಗಲಿದ್ದಾರೆ.

ದಿನೇಶ್ ಗುಂಡೂರಾವ್ ಅವರ ಈ ಖಾಸಗಿ ಪ್ರವಾಸ ಪುರ್ವ ನಿಗದಿಯಾಗಿದ್ದ ಕಾರಣ, ದಿನೇಶ್ ಗುಂಡೂರಾವ್ ಅವರು ಪ್ರವಾಸಕ್ಕೆ ತೆರಳಿದ್ದಾರೆ. ಆದರೆ ಅವರ ಈ ಪ್ರವಾಸದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ ಎನ್ನಲಾಗಿದೆ.
ಇನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರುಗಳು ದಿನೇಶ್ ಗುಂಡೂರಾವ್ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ. ದಿನೇಶ್ ಗುಂಡೂರಾವ್ ಪ್ರವಾಸದ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರಕ್ಕೆ ಏನೂ ಆಗದು ಎಂಬ ವಿಶ್ವಾಸ ಅವರಿಗಿದೆ, ಅಲ್ಲದೆ ಅವರಿಗೂ ಕುಟುಂಬವಿದೆ, ಅದಕ್ಕೆ ಅವರು ಸಮಯ ಕೊಡಬೇಕಿದೆ ಎಂದು ಹೇಳಿದ್ದಾರೆ.












Click it and Unblock the Notifications