ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್
ಬೆಂಗಳೂರು, ಫೆ 18: ರೈತರ ಹೋರಾಟ, ಹಣದುಬ್ಬರ, ತೈಲಬೆಲೆ ಏರಿಕೆ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ವಿರುದ್ದ ತಿರುಗಿಬೀಳಲು ಸದ್ಯಕ್ಕೆ ಯಶಸ್ವಿಯಾಗುತ್ತಿರುವ ಕಾಂಗ್ರೆಸ್, ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಯಡಿಯೂರಪ್ಪ ಸರಕಾರದ ಆಡಳಿತ ವೈಖರಿ ಮತ್ತು ಭ್ರಷ್ಟಾಚಾರದ ವಿರುದ್ದ ಕಿಡಿಕಾರಿದ್ದಾರೆ.
ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ಗೆಲ್ಲಲ್ಲೇಬೇಕೆಂದು ಪಣ ತೊಟ್ಟಿರುವ ಸುರ್ಜೇವಾಲಾ, ರಾಜ್ಯದ ವಿವಿಧ ಕಾಂಗ್ರೆಸ್ ಮುಖಂಡರ ಜೊತೆಗೆ ಸುದೀರ್ಘ ಮಾತುಕತೆ ನಡೆಸುತ್ತಿದ್ದಾರೆ.
ಯಡಿಯೂರಪ್ಪನವರ ಪುತ್ರ ಬಿ.ವೈ,ವಿಜಯೇಂದ್ರ ವಿರುದ್ದ ಕಿಡಿಕಾರಿದ ಸುರ್ಜೇವಾಲಾ, ಸಾಧ್ಯವಾದ ಕಡೆಯೆಲ್ಲಾ ವಿಜಯೇಂದ್ರ ಲೂಟಿ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ರಾಜ್ಯದಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ ಎಂದು ದೂರಿದ್ದಾರೆ.

ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್
"ನಮ್ಮ ಪಕ್ಷದಲ್ಲಿ ವಿಎಸ್ ಟಿಗೆ ಅವಕಾಶವಿಲ್ಲ. ವಿಎಸ್ ಟಿ ಅಂದರೆ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಎಂದು ಲೇವಡಿ ಮಾಡಿರುವ ಸುರ್ಜೇವಾಲಾ, ರಾಜ್ಯದಲ್ಲಿ ಪ್ರತೀನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ. ವಿಜಯೇಂದ್ರ ರಾಜ್ಯದಲ್ಲಿ ಸೂಪರ್ ಸಿಎಂ ಆಗಿದ್ದಾರೆ"ಎಂದು ಸುರ್ಜೇವಾಲಾ ದೂರಿದ್ದಾರೆ.

ಜನ ವಿರೋಧಿ ಕೇಂದ್ರ ಸರಕಾರ
"ಕೇಂದ್ರ ಸರಕಾರ ದೇಶವನ್ನು ಲೂಟಿ ಮಾಡುತ್ತಿದೆ, ತೈಲಬೆಲೆಗಳು ಗಗನಕ್ಕೇರುತ್ತಿದೆ. ರೈತರ ಸಂಕಷ್ಟವನ್ನು ಕೇಳುವವರಿಲ್ಲ. ಇದೇನಾ ಮೋದಿ ಹೇಳಿದ ಅಚ್ಚೇದಿನ್" ಎಂದು ಪ್ರಶ್ನಿಸಿರುವ ಸುರ್ಜೇವಾಲಾ, ಈ ಜನ ವಿರೋಧಿ ಸರಕಾರವನ್ನು ಕಿತ್ತೊಗೆಯಬೇಕಿದೆ ಎಂದು ಹೇಳಿದ್ದಾರೆ.

ಸಂಪತ್ ರಾಜ್ ಮತ್ತು ಅಖಂಡ ಶ್ರೀನಿವಾಸಮೂರ್ತಿ
"ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಶಾಸಕರ ಜೊತೆಗೆ ಚರ್ಚೆ ನಡೆಸುತ್ತೇನೆ, ಸಂಪತ್ ರಾಜ್ ಮತ್ತು ಅಖಂಡ ಶ್ರೀನಿವಾಸಮೂರ್ತಿಯವರ ಬಳಿಯೂ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು"ಎಂದು ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ರಣದೀಪ್ ಸುರ್ಜೇವಾಲಾ ಎಚ್ಚರಿಕೆ
"ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅವರ ಪಕ್ಷದ ಹಿರಿಯ ಮುಖಂಡರೇ ದೂರುತ್ತಿದ್ದಾರೆ ಎಂದು ಪರೋಕ್ಷವಾಗಿ ಯತ್ನಾಳ್ ಅವರನ್ನು ಉಲ್ಲೇಖಿಸಿರುವ ಸುರ್ಜೇವಾಲಾ, ಬಿಎಸ್ವೈ ಸರಕಾರದ ಜನವಿರೋಧಿ ನೀತಿ, ವೈಫಲ್ಯಗಳನ್ನು ಮನೆಮನೆಗೆ ತಲುಪಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.












Click it and Unblock the Notifications