ಕಾಂಗ್ರೆಸ್ ತೊರೆದು ಕೆ.ಪಿ ನಂಜುಂಡಿ ಬಿಜೆಪಿಗೆ ಸೇರ್ಪಡೆ?
ಕಾಂಗ್ರೆಸ್ ಗಾಗಿ ವಿಶ್ವಕರ್ಮ ಸಮುದಾಯವನ್ನು ಒಂದುಗೂಡಿಸಿದ್ದೇನೆ ಎಂದು ಪ್ರತಿಪಾದಿಸುತ್ತಾ ಬಂದ ಚಿನ್ನದ ಉದ್ಯಮಿ ಕೆ.ಪಿ ನಂಜುಂಡಿ ಕಾಂಗ್ರೆಸ್ ಬಿಡುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯದಲ್ಲೇ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಜೂನ್ 14: ಕಾಂಗ್ರೆಸ್ ಗಾಗಿ ವಿಶ್ವಕರ್ಮ ಸಮುದಾಯವನ್ನು ಒಂದುಗೂಡಿಸಿದ್ದೇನೆ ಎಂದು ಪ್ರತಿಪಾದಿಸುತ್ತಾ ಬಂದ ಚಿನ್ನದ ಉದ್ಯಮಿ ಕೆ.ಪಿ ನಂಜುಂಡಿ ಕಾಂಗ್ರೆಸ್ ಬಿಡುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯದಲ್ಲೇ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದ್ದಕ್ಕೆ ಬೇಸರದಿಂದ ತಾನು ಕಾಂಗ್ರೆಸ್ ಬಿಡುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ನಂಜುಂಡಿ ಹೇಳಿದ್ದಾರೆ.
ಮಂಗಳವಾರ ಡಾಲರ್ಸ್ ಕಾಲನಿಯಲ್ಲಿನ ನಿವಾಸದಲ್ಲಿ ವಿಶ್ವಕರ್ಮ ಸಮುದಾಯದ ಸ್ವಾಮೀಜಿಗಳ ಸಭೆಯ ನಂತರ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, "ಕಳೆದ 16 ವರ್ಷದಿಂದ ಕಾಂಗ್ರೆಸಿನಲ್ಲಿ ನಂಜುಂಡಿ ಸಕ್ರಿಯವಾಗಿದ್ದರು. ಅನೇಕ ಬೃಹತ್ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಈ ಸಂದರ್ಭ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ 3 ಬಾರಿ ನಂಜುಂಡಿಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸುವ ಅವಕಾಶ ಇದ್ದರೂ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ," ಎಂದು ಹೇಳಿದ್ದಾರೆ.
ಹೀಗಾಗಿ ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ವಿಶ್ವಕರ್ಮ ಸಮುದಾಯ ಹಿಂಪಡೆಯುತ್ತಿದೆ. ಮಾತ್ರವಲ್ಲ ಸಮುದಾಯದ 67 ಮಠಾಧೀಶರು ಚರ್ಚಿಸಿ ಯಾವ ಪಕ್ಷಕ್ಕೆ ಬೆಂಬಲಿಸಬೇಕೆಂಬುದನ್ನು ತೀರ್ಮಾನಿಸಲಿದ್ದೇನೆ ಎಂದಿದ್ದಾರೆ.
ಮೂಲಗಳ ಪ್ರಕಾರ ವಿಶ್ವಕರ್ಮದ ಸಮುದಾಯದ ಮಠಾಧೀಶರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎನ್ನಲಾಗಿದೆ. ಜುಲೈ 2ಕ್ಕೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಅಲ್ಲಿ, ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಂಜುಂಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೆಪಿ ನಂಜುಂಡಿ, "16 ವರ್ಷದಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದ್ದೇನೆ. 3 ಬಾರಿ ಪರಿಷತ್ ಸದಸ್ಯನಾಗಿ ಮಾಡುವ ಅವಕಾಶಗಳಿದ್ದರೂ ಮಾಡಿಲ್ಲ. ಇಷ್ಟು ಕಷ್ಟಪಟ್ಟು ಪಕ್ಷಕ್ಕೆ ದುಡಿದರೂ ನ್ಯಾಯ ಸಿಕ್ಕಿಲ್ಲ. ಈ ಕಾರಣಕ್ಕೆ ಪಕ್ಷ ತೊರೆಯುತ್ತಿದ್ದೇನೆ," ಎಂದು ಹೇಳಿದ್ದಾರೆ.












Click it and Unblock the Notifications