ಶಿವಕುಮಾರ್ ಜೊತೆ ಬಾಳುವ ಆಶಯದಲ್ಲಿದ್ದಾಳೆ ರಾಧಿಕಾ!
ಕೊಪ್ಪಳ, ಜೂನ್ 28 : ಕೊಪ್ಪಳದ ರಾಧಿಕಾ ಮತ್ತು ಶಿವಕುಮಾರ್ ಮದುವೆ ಮುರಿದುಬಿದ್ದಿದೆ. ಶಿವಕುಮಾರ್ ಕುಟುಂಬದವರು ಆತನನ್ನು ಎಳೆದುಕೊಂಡು ಹೋಗಿದ್ದಾರೆ. ಪತಿಯ ಜೊತೆಗೆ ವಾಸ ಮಾಡಲು ಅವಕಾಶ ನೀಡುತ್ತಾರೆ ಎಂಬ ಭರವಸೆಯಲ್ಲಿದ್ದಾಳೆ ರಾಧಿಕಾ.
ಕೊಪ್ಪಳದ ಸದಾಶಿವನಗರದಲ್ಲಿರುವ ಸಂತೋಷಿಮಾ ದೇವರ ಮುಂದೆ ತೃತೀಯ ಲಿಂಗಿ ರಾಧಿಕಾ ಮತ್ತು ಶಿವಕುಮಾರ್ ವಿವಾಹ ಜೂನ್ 21ರಂದು ನಡೆದಿತ್ತು. ಸೋಮವಾರ ಸಂಜೆ ಶಿವಕುಮಾರ್ ಕುಟುಂಬದವರು ಆತನನ್ನು ಎಳೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಮದುವೆ ಮುರಿದುಬಿದ್ದಿದೆ. [ಈ ಲಗ್ನ ಸಾಧ್ಯವಿಲ್ಲ, ಏಕೆಂದ್ರೆ ಅವಳು ಅವಳಲ್ಲ ಅವನು!]

'ಶಿವಕುಮಾರ್ ಕುಟುಂಬದವರ ವಿರುದ್ಧ ನಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಡಲು ನಿರ್ಧರಿಸಿದ್ದೆವು. ಆದರೆ, ಅವರ ಸಹೋದರ ಕರೆ ಮಾಡಿ ಇಬ್ಬರನ್ನು ಒಟ್ಟಿಗೆ ಬಾಳಲು ಬಿಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಶಿವಕುಮಾರ್ ಸಹ ನನ್ನ ಜೊತೆ ಬಾಳಲು ಸಿದ್ಧವಿದ್ದಾರೆ' ಎಂದು ರಾಧಿಕಾ ಹೇಳಿದ್ದಾರೆ. [ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]
ರಾಧಿಕಾ (19) ಮತ್ತು ಶಿವಕುಮಾರ್ (21) ಇಬ್ಬರೂ ಲಂಬಾಣಿ ಸಮುದಾಯಕ್ಕೆ ಸೇರಿದವರು. ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದ್ದೇ ಒಂದು ಸಿನಿಮಾ ಕಥೆಯಂತಿದೆ. ಶಿವಕುಮಾರ್ ಕೊಪ್ಪಳ ರೈಲು ನಿಲ್ದಾಣದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಮಂಗಳಮುಖಿಯಾದ ರಾಧಿಕಾ ಅಲ್ಲಿ ಹಣ ಕೇಳಲು ಹೋಗುತ್ತಿದ್ದಳು. ಆಗ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. [ಮಂಗಳಮುಖಿಯನ್ನು ಪ್ರೀತಿಸಿ ರೈಲಿಗೆ ತಲೆಕೊಟ್ಟ ಯುವಕ]
'ನನ್ನ ಮತ್ತು ಶಿವಕುಮಾರ್ ಪ್ರೀತಿಯ ಬಗ್ಗೆ ಅವರ ಕುಟುಂಬದವರಿಗೆ ಮೊದಲೇ ತಿಳಿದಿತ್ತು. ಮಕ್ಕಳಾಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವರು ಮದುವೆಯನ್ನು ವಿರೋಧಿಸುತ್ತಿದ್ದಾರೆ' ಎನ್ನುತ್ತಾರೆ ರಾಧಿಕಾ. ಮಕ್ಕಳಾಗದಿದ್ದರೂ ಒಟ್ಟಿಗೆ ಬಾಳುವ ಆಶಯ ಹೊಂದಿದ್ದಾರೆ ನವ ದಂಪತಿಗಳು. (ಚಿತ್ರಸುದ್ದಿ : ದಿ ನ್ಯೂಸ್ ಮಿನಿಟ್)












Click it and Unblock the Notifications