ಕೋಲಾರ: ಭೀಕರ ಅಪಘಾತದಲ್ಲಿ ಟೆಕ್ಕಿಗಳ ದುರ್ಮರಣ
ಕೋಲಾರ, ಏಪ್ರಿಲ್ 11: ಇಲ್ಲಿನ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಮೂವರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಖಾಜಿಕಲ್ಲಹಳ್ಳಿ ಗೇಟ್ ಬಳಿ ನಡೆದ ಈ ದುರಂತದಲ್ಲಿ ಗ್ಯಾಸ್ ಟ್ಯಾಂಕರ್ ವೊಂದಕ್ಕೆ ಫೋಕ್ಸ್ ವಾಗನ್ ಕಾರು ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಭರತ್ ರೆಡ್ಡಿ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಕೋಮಾಕ್ಕೆ ಜಾರಿದ್ದಾರೆ.

ಮೃತರನ್ನು ಡಿ.ತ್ರಿನಾಥ್, ಚಂದ್ರಶೇಖರ್, ವೆಂಕಟನರೇಂದ್ರ, ಹಾಗೂ ಅಮರೇಂದ್ರಬಾಬು ಎಂದು ಗುರುತಿಸಲಾಗಿದೆ. ಈ ಎಲ್ಲರೂ ಬೆಂಗಳೂರಿನಲ್ಲಿ ಆರೇಕಲ್ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಯುಗಾದಿ ಹಬ್ಬಕ್ಕೆಂದು ಆಂಧ್ರಪ್ರದೇಶದ ರೇಣುಗುಂಟಕ್ಕೆ ತೆರಳಿದ್ದ ಎಲ್ಲರೂ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಸೋಮವಾರ ಬೆಳಗ್ಗಿನ ಜಾವ ಸುಮಾರು 3.30ಕ್ಕೆ ಕಾರು (AP 9 BL 9888) ಚಲಾಯಿಸುತ್ತಿದ್ದ ಅಮರೇಂದ್ರ ಬಾಬು ಅವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಟ್ಯಾಂಕರ್ ಗೆ ಡಿಕ್ಕಿ ಹೊಡೆಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಸಂಪರ್ಕಿಸಬಹುದು.












Click it and Unblock the Notifications