ಮೂಢನಂಬಿಕೆ ವಿರೋಧಿ ಸಿದ್ದುಗೆ ಕೋಡಿಶ್ರೀ ಸವಾಲ್
ಅಂಥದೊಂದು ಸವಾಲನ್ನು ಎಸೆದಿರುವುದು ಮತ್ತಾರೂ ಅಲ್ಲ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು. ಸಿದ್ದರಾಮಯ್ಯನವರ ಸರಕಾರ ಇನ್ನು ಕೇವಲ 10 ತಿಂಗಳು ಮಾತ್ರವಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನ ನಡೆದಿರುವ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ರೈತ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಸಂದರ್ಭದಲ್ಲಿ ಕೋಡಿಮಠದ ಶ್ರೀಗಳು ಹೇಳಿರುವ ಭವಿಷ್ಯ ಗಮನಾರ್ಹವಾದದ್ದು. ಏಕೆಂದರೆ, ರೈತರನ್ನು ಕಡೆಗಣಿಸಿದ್ದರಿಂದಲೇ ಸಿದ್ದರಾಮಯ್ಯ ಸರಕಾರ ಇನ್ನು ಹತ್ತು ತಿಂಗಳಲ್ಲಿ ಪತನಗೊಳ್ಳುತ್ತದೆ ಎಂದು ಕೋಡಿಶ್ರೀಗಳು ತರ್ಕಬದ್ಧವಾದ ಮಾತುಗಳನ್ನು ಆಡಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರೂ ರೈತರು ರಾಜ್ಯದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥವರನ್ನು ಸಿದ್ದರಾಮಯ್ಯ ಸರಕಾರ ಕಡೆಗಣಿಸುತ್ತದೆ. ರೈತರನ್ನು ಎದುರುಹಾಕಿಕೊಂಡರೆ ಸಿದ್ದರಾಮಯ್ಯ ಅವರ ಸರಕಾರಕ್ಕೆ ಉಳಿಗಾಲವಿಲ್ಲ. ಇನ್ನು ಬಹಳವೆಂದರೆ 10 ತಿಂಗಳು ಮಾತ್ರ ಸರಕಾರ ಅಸ್ತಿತ್ವದಲ್ಲಿರುತ್ತದೆ ಎಂದು ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ಹೇಳಿದವರೂ ಇದೇ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು. ಈಗ ಅವರೇ, ಸಿದ್ದರಾಮಯ್ಯ ಸರಕಾರದ ಆಯುಷ್ಯ ಅಲ್ಪಕಾಲದ್ದು ಎಂದು ಹೇಳಿ ಬಿಸಿ ಮುಟ್ಟಿಸಿದ್ದಾರೆ. ಆದರೆ, ಭವಿಷ್ಯ, ಜ್ಯೋತಿಷ್ಯಗಳಿಗೆಲ್ಲ ಕವಡೆ ಕಾಸಿನ ಕಿಮ್ಮತ್ತು ನೀಡದ ಸಿದ್ದರಾಮಯ್ಯ ಅವರು ಈ ಮಾತಿಗೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಕೋಡಿಮಠ ಶ್ರೀಗಳು ಹೇಳಿರುವ ಹಲವಾರು ಭವಿಷ್ಯಗಳು ನಿಜವಾಗಿವೆ ಮತ್ತು ಕೆಲವಾರು ಸುಳ್ಳಾಗಿವೆ. ಪಾಟೀಲ ಪುಟ್ಟಪ್ಪ ಅವರ ಬಗ್ಗೆ ಶ್ರೀಗಳು ಹೇಳಿದ್ದ ಭವಿಷ್ಯ ಸುಳ್ಳಾಗಿದೆ ಎಂದು ಪಾಪು ಅವರೇ ಹೇಳಿದ್ದರು. ನಾಡೋಜ ಪಾಪು ಅವರು 79 ವರ್ಷ ಮಾತ್ರ ಬದುಕುತ್ತಾರೆ ಎಂದು ಕೋಡಿಶ್ರೀಗಳು ಹೇಳಿದ್ದರಂತೆ. ಅದು ಸುಳ್ಳಾಗಿದೆ ನೋಡಿ, ನನಗೀಗ 94 ವರ್ಷ, ಇನ್ನೂ ಗಟ್ಟಿಯಾಗಿದ್ದೇನೆ ಎಂದು ಪಾಪು ಅಪಹಾಸ್ಯ ಮಾಡಿದ್ದರು.
ರಾಜಕೀಯದಲ್ಲಿ ಯಾವುದೂ ಸ್ಥಿರವಲ್ಲ, ಯಾವುದೂ ಅಸ್ಥಿರವಲ್ಲ. ರಾಜಕೀಯದಲ್ಲಿ ಯಾವ ಹೊತ್ತಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ಸ್ವತಃ ಆ ಬ್ರಹ್ಮನು ಕೂಡ ಊಹಿಸಲಾರ. ಇಂದಿದ್ದ ಸರಕಾರ ನಾಳೆ ಇರುವುದಿಲ್ಲ, ಇಂದು ಅಧಿಕಾರದ ಚುಕ್ಕಾಣಿ ಹಿಡಿದಿರುವ ವ್ಯಕ್ತಿ ನಾಳೆ ಪದಚ್ಯುತನಾಗಿರುತ್ತಾನೆ. ಆದರೆ, ರಾಜಕೀಯ ಭವಿಷ್ಯ ಹೇಳುವಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠದ ಶ್ರೀಗಳ ಈ ಭವಿಷ್ಯವನ್ನು ಖಂಡಿತ ತಳ್ಳಿಹಾಕುವಂತಿಲ್ಲ.
ಭವಿಷ್ಯ, ಜ್ಯೋತಿಷ್ಯಗಳೇನೇ ಹೇಳಲಿ ಸಿದ್ದರಾಮಯ್ಯ ಅವರು ಮುಳ್ಳಿನ ಗದ್ದುಗೆಯ ಮೇಲೆ ಕುಳಿತೇ ರಾಜ್ಯಭಾರ ನಡೆಸುತ್ತಿದ್ದಾರೆ. ತಮ್ಮನ್ನು ಸಿದ್ದರಾಮಯ್ಯ ಗಡೆಗಣಿಸುತ್ತಿದ್ದಾರೆ ಎಂದು ಡಜನ್ ಶಾಸಕರು ಕಾಂಗ್ರೆಸ್ ಹೈಕಮಾಂಡಿಗೆ ಈಗಾಗಲೆ ಫ್ಯಾಕ್ಸ್ ಸಂದೇಶ ಕಳಿಸಿದ್ದಾರೆ. ಅಲ್ಲದೆ, ತೆರೆಯ ಮರೆಯಲ್ಲಿ ಸಿದ್ದರಾಮಯ್ಯ ಅವರನ್ನು ಪದಚ್ಯುತಿಗೊಳಿಸಲು ಕೆಲ ಘಟಾನುಘಟಿ ನಾಯಕರು ಸಂಚು ನಡೆಸುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.