ಕಾಂಗ್ರೆಸ್-ಮೈತ್ರಿ ಸರ್ಕಾರ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

Recommended Video

      ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಕ್ಯಾಬಿನೆಟ್ ಸಚಿವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ | Oneindia Kannada

      ಬೆಂಗಳೂರು, ಜೂನ್ 06: ಕರ್ನಾಟಕ ವಿಧಾನಸಭೆ ಚುನಾವಣೆ 2018 ಹಲವು ಅಚ್ಚರಿಗೆ ಜನತೆಯನ್ನು ದೂಡಿದ ಕುತೂಹಲಕಾರಿ ಚುನಾವಣೆಯಾಗಿತ್ತು. ಚುನಾವಣೆ ಬಳಿಕ ಕೂಡಾ ಇಡೀ ದೇಶವೇ ರಾಜ್ಯದತ್ತ ತಿರುಗಿ ನೋಡುವಂಥ ಬೆಳವಣಿಗೆಗಳು ಘಟಿಸಿದವು.

      ಅಲ್ಪಾವಧಿಯ ಬಿಜೆಪಿ ಸರ್ಕಾರ ಪತನವಾದ ಬಳಿಕ, ಸ್ಥಾಪನೆಗೊಂಡ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಸ್ಥಾಪನೆಯಾಗಿದ್ದು, ಬುಧವಾರದಂದು(ಜೂನ್ 06) ಮೊದಲ ಸಚಿವರ ಸಂಪುಟ ವಿಸ್ತರಣೆ ಸಮಾರಂಭ ನಡೆಯಿತು.

      ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರು ಹಾಗೂ ಹಳೆ ಮೈಸೂರು ಭಾಗದ ಪ್ರಾಬಲ್ಯ ಎದ್ದು ಕಾಣುತ್ತಿದೆ. ಲಿಂಗಾಯತರಿಗೆ ನಾಲ್ಕು, ಕುರುಬರಿಗೆ ಎರಡು, ಉಪ್ಪಾರ, ಈಡಿಗ, ಪರಿಶಿಷ್ಟ ಪಂಗಡ ತಲಾ ಒಂದು, ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರಿಗೆ ತಲಾ ಮೂರು, ಬ್ರಾಹ್ಮಣ ಒಂದು, ಒಕ್ಕಲಿಗರಿಗೆ ಒಂಭತ್ತು ಸಚಿವ ಸ್ಥಾನ ನೀಡಲಾಗಿದೆ.

      ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ಸಿನಿಂದ 14 ಹಾಗೂ ಜೆಡಿಎಸ್ ನಿಂದ 9 ಮತ್ತು ಕೆಪಿಜೆಪಿ 1 ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ 1 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

      ನೂತನ ಸಚಿವರ ಹಿನ್ನೆಲೆ ಏನು, ಯಾರ್ಯಾರು ಎಲ್ಲಿಯವರೆಗೆ ಓದಿದ್ದಾರೆ, ಎಷ್ಟು ಬಾರಿ ಕ್ಷೇತ್ರದಲ್ಲಿ ಗೆದ್ದುಬಂದಿದ್ದಾರೆ, ಯಾರ್ಯಾರಿಗೆ ಯಾವ ಖಾತೆ ಎಂಬ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.

      ಎಚ್ ಡಿ ಕುಮಾರಸ್ವಾಮಿ

      ಎಚ್ ಡಿ ಕುಮಾರಸ್ವಾಮಿ

      16 ಡಿಸೆಂಬರ್ 1959ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನನ

      * ಚನ್ನಪಟ್ಟಣ, ರಾಮನಗರ ಇವರ ರಾಜಕೀಯ ಕಾರ್ಯಕ್ಷೇತ್ರ
      * ಬಿಎಸ್ಸಿ ಪದವೀಧರ
      * ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್
      * ಎಚ್ ಡಿ ಬಾಲಕೃಷ್ಣ, ಎಚ್ ಡಿ ರೇವಣ್ಣ ಇಬ್ಬರು ಅಣ್ಣಂದಿರು. ಎಚ್ ಡಿ ರಮೇಶ್ ತಮ್ಮ, ಇಬ್ಬರು ಸೋದರಿಯರು.

      ಜಿ ಪರಮೇಶ್ವರ

      ಜಿ ಪರಮೇಶ್ವರ

      * 1989ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ

      * ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಣೆ

      * 1999ರಲ್ಲಿ ಮರು ಆಯ್ಕೆ. ಎಸ್‌.ಎಂ.ಕೃಷ್ಣ ಸಂಪುಟದಲ್ಲಿ ಉನ್ನತ ಶಿಕ್ಷಣ ಖಾತೆ ಜವಾಬ್ದಾರಿ

      * 2013ರ ಚುನಾವಣೆ ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋಲು * 2010ರ ಅ. 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ

      * 2014ರ ಜುಲೈ 1 ರಂದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ

      * 2015ರ ಅಕ್ಟೋಬರ್‌ನಲ್ಲಿ ಗೃಹ ಸಚಿವರಾಗಿ ನೇಮಕ

      * 2017ರ ಜೂನ್‌ನಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ

      ಕೃಷ್ಣಬೈರೇಗೌಡ

      ಕೃಷ್ಣಬೈರೇಗೌಡ

      ಕ್ಷೇತ್ರ : ಬೆಂಗಳೂರು ನಗರ (ಬ್ಯಾಟರಾಯನಪುರ)
      ಜನನ: 4 ಏಪ್ರಿಲ್ 1973, ಗರುಡಪಾಳ್ಯ, ಕೋಲಾರ ಜಿಲ್ಲೆ
      ಶಿಕ್ಷಣ : ಎಂ.ಎ (ಅಂತರರಾಷ್ಟ್ರೀಯ ವಿಚಾರಗಳು)
      ಜಾತಿ : ಒಕ್ಕಲಿಗ
      * ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರ ಪುತ್ರರಾದ ಕೃಷ್ಣ ಬೈರೇಗೌಡ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆ.
      ಕುಟುಂಬ: ಪತ್ನಿ: ಮೀನಾಕ್ಷಿ ಶೇಷಾದ್ರಿ.
      * ತಂದೆ ನಿಧನದ ನಂತರ 2003ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವೇಮಗಲ್ ಕ್ಷೇತ್ರದಿಂದ ಆಯ್ಕೆ. 2004ರಲ್ಲಿ ಪುನರಾಯ್ಕೆ
      * 2008ರಲ್ಲಿ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೃಷ್ಣ ಬೈರೇಗೌಡ ಜಯಶಾಲಿಯಾದರು.
      * ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ವಿರುದ್ಧ ಸೋತಿದ್ದರು.

      ಆರ್ ವಿ ದೇಶಪಾಂಡೆ

      ಆರ್ ವಿ ದೇಶಪಾಂಡೆ

      ಕ್ಷೇತ್ರ: ಹಳಿಯಾಳ
      ವಯಸ್ಸು: 70
      ವಿದ್ಯೆ : ಕಾನೂನು ಪದವಿ
      ಜಾತಿ: ಗೌಡ ಸಾರಸ್ವತ ಬ್ರಾಹ್ಮಣ
      ಕುಟುಂಬ : ಪತ್ನಿ ರಾಧಾ. ಈ ದಂಪತಿಗೆ ಪ್ರಸಾದ್ ಹಾಗೂ ಪ್ರಶಾಂತ್ ಎಂಬ ಪುತ್ರರು. ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ದೇಶಪಾಂಡೆಯವರ ಬೀಗರು.
      * ಹಳಿಯಾಳದಲ್ಲಿ ವಕೀಲ ವೃತ್ತಿ ಆರಂಭಿಸಿ, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು.
      * ಹಳಿಯಾಳ ಕ್ಷೇತ್ರದಿಂದ ಏಳು ಬಾರಿ ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.
      * 1983 ರಿಂದ 2004ರ ವರೆಗೆ ದೇಶಪಾಂಡೆಯವರು ಸತತ ಆರು ಸಲ ಗೆದ್ದು ಎರಡೆರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದರು.
      * 1985ರಲ್ಲಿ ಮೊದಲ ಬಾರಿಗೆ ಸಚಿವರಾದರು.
      * 1989ರ ಚುನಾವಣೆಯಲ್ಲಿ ಜಯ ಗಳಿಸಿ ನಗರಾಭಿವೃದ್ಧಿ ಖಾತೆ ಸಚಿವರಾದರು,
      * 1994, 98 ಹಾಗೂ 2004ರಲ್ಲಿ ಗೆದ್ದು ಸತತ ಮೂರು ಅವಧಿಗೆ ಬೃಹತ್ ಕೈಗಾರಿಕೆ ಸಚಿವರಾಗಿದ್ದರು.
      * 2008ರ ಚುನಾವಣೆ. ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆ ವಿರುದ್ಧ ದೇಶಪಾಂಡೆ ಸೋತಿದ್ದರು.

      ಯು.ಟಿ.ಅಬ್ದುಲ್ ಖಾದರ್

      ಯು.ಟಿ.ಅಬ್ದುಲ್ ಖಾದರ್

      ವಯಸ್ಸು: 48
      ವಿದ್ಯೆ : ಕಾನೂನು ಪದವೀಧರ.
      ಕುಟುಂಬ : ಪತ್ನಿ ಲಾಮಿಸ್ ಖಾದರ್, ಪುತ್ರಿ ಹವ್ವಾ ನಸೀಮಾ.
      * 2007ರಲ್ಲಿ ತಮ್ಮ ತಂದೆ ಯು.ಟಿ.ಫರೀದ್ ನಿಧನದ ನಂತರ ಉಳ್ಳಾಲ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದರು
      * ಎನ್ ಎಸ್ ಯುಐನಲ್ಲಿ ಸಕ್ರಿಯರಾಗಿದ್ದ ಅವರು 1992ರಲ್ಲಿ ಜಿಲ್ಲಾ ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ನಂತರ ಅಧ್ಯಕ್ಷರಾದರು.
      * ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. 2000ದಲ್ಲಿ ರಾಜ್ಯ ಎನ್ ಎಸ್ ಯುಐ ಉಪಾಧ್ಯಕ್ಷರಾಗಿದ್ದರು.
      *2002ರಲ್ಲಿ ಅಖಿಲ ಭಾರತ ಸೇವಾದಳದ ಮಾರ್ಗದರ್ಶಕ
      * ಮೋಟಾರ್ ಕ್ರಾಸಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

      ಡಿಕೆ ಶಿವಕುಮಾರ್

      ಡಿಕೆ ಶಿವಕುಮಾರ್

      * ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದ ಶಾಸಕರು

      * 15-05-1962 ರಲ್ಲಿ ಕನಕಪುರಲ್ಲಿ ಕೃಷಿಕ ಕುಟುಂಬದಲ್ಲಿ ಜನನ
      * ಬಿ.ಕಾಂ ಪದವೀಧರರು

      * ಚಲನಚಿತ್ರ ಪ್ರದರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

      * 1984-94, 1994-99, 1999-2004,2004-07, 2008ರಲ್ಲಿಯೂ ವಿಧಾನಸಭೆಗೆ ಆಯ್ಕೆಯಾಗಿದ್ದರು .

      * ಬಂಧೀಖಾನೆ ಮತ್ತು ಗೃಹ ರಕ್ಷಕದಳ, ನಗರಾಭಿವೃದ್ಧಿ, ಸಹಕಾರ, ಇಂಧನ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

      * ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ
      * ಬೆಂಗಳೂರು ವಿವಿ ಸೆನೆಟ್ ಸದಸ್ಯರಾಗಿ, ಹಲವಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ
      * ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಸಹ ರಾಜಕೀಯದಲ್ಲಿದ್ದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು

      * ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ.

      * ಸಚಿವ ಸ್ಥಾನ ಹೊರತು ಪಡಿಸಿ 2001ರಲ್ಲಿ ಎಐಸಿಸಿಯ ಸದಸ್ಯರಾಗಿದ್ದರು. * 1985 ರಿಂದ 2001ರ ತನಕ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರು. 2013ರ ಚುನಾವಣೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿದ್ದರು. * 2018ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು.

      ಜಮೀರ್ ಅಹ್ಮದ್ ಖಾನ್

      ಜಮೀರ್ ಅಹ್ಮದ್ ಖಾನ್

      ನ್ಯಾಷನ್ ಟ್ರಾವೆಲ್ಸ್ ಉದ್ಯಮದಲ್ಲಿ ಪಾಲು ಹೊಂದಿರುವ ಜಮೀರ್ ಅಹಮದ್ ಖಾನ್, ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದರು. ಎಸ್‌.ಎಂ.ಕೃಷ್ಣ ಅವರು ರಾಜ್ಯಪಾಲರಾಗಿ ಆಯ್ಕೆಗೊಂಡು ಕ್ಷೇತ್ರ ತೊರೆದ ಮೇಲೆ ಚಾಮರಾಪೇಟೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಮೀರ್ ಆಯ್ಕೆಯಾದರು. 2008, 2013 ಸೇರಿ ಮೂರು ಬಾರಿ ಚಾಮರಾಜಪೇಟೆ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸಿದ್ದಾರೆ ಜಮೀರ್ ಅಹಮದ್ ಖಾನ್. 2018ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದರು.

      ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಜಮೀರ್ ಅಹಮದ್ ಖಾನ್, ಹಜ್ ಮತ್ತು ವಕ್ತ್‌ ಖಾತೆ ಸಚಿವರಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

      2016ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಆಗ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದರು ಜಮೀರ್ ಅಹಮದ್ ಖಾನ್. ಬಳಿಕ ಜೆಡಿಎಸ್ ಅವರನ್ನು ಪಕ್ಷದಿಂದ ಅಮಾನತು ಮಾಡಿತು.

      ನಂತರ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ, ಬಂಡಾಯವೆದ್ದಿದ್ದ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಸಿಗೆ ಕರೆ ತಂದರು. ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿಯಿಂದ ಹಿಡಿದು ರೆಸಾರ್ಟ್ ರಾಜಕೀಯದವರೆಗೂ ಜಮೀರ್ ಪರಿಣತರು.

      ಕೆಜೆ ಜಾರ್ಜ್

      ಕೆಜೆ ಜಾರ್ಜ್

      ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಹಾಲಿ ಶಾಸಕ.
      2004 ಚುನಾವಣೆಯಲ್ಲಿ ಭಾರತೀನಗರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದ ಕೆಜೆ ಜಾರ್ಜ್, 2008ರ ವೇಳೆಗೆ ಕ್ಷೇತ್ರ ಮರುವಿಂಗಡಣೆಯಿಂದಾಗಿ ಸರ್ವಜ್ಞ ನಗರ ಕ್ಷೇತ್ರದಿಂದ ಸ್ಪರ್ಧಿಸುವಂತಾಯಿತು.

      ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಜಾರ್ಜ್, ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬೆಂಗಳೂರು ನಗರಾಭಿವೃದ್ಧಿ ಸಚಿವರಾದರು.

      ಮಂಗಳೂರು ಐಜಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿದ್ದ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಹೆಸರು ಕೇಳಿಬಂದಿತ್ತು

      ಬೆಂಗಳೂರು ನಗರದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಪ್ರಸ್ತಾವನೆ ಮುಂಚೂಣಿಕೆ ಬಂದಾಗ ಕೆ.ಜೆ.ಜಾರ್ಜ್ ಸುದ್ದಿಯಲ್ಲಿದ್ದರು.

      ಎಚ್ ಡಿ ರೇವಣ್ಣ

      ಎಚ್ ಡಿ ರೇವಣ್ಣ

      1985ರಲ್ಲಿ ರಾಜಕೀಯ ಜೀವನ ಆರಂಭಿಸಿದ ಎಚ್ ಡಿ ರೇವಣ್ಣ ಅವರು ಜಿಲ್ಲಾ ಪರಿಷತ್‌ಗೆ ಆಯ್ಕೆಯಾದರು. 1994ರಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಹಾಮೂಲ್‌) ಅಧ್ಯಕ್ಷರಾದರು. 1994ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆಲುವು ಸಾಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶ. ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ವಸತಿ ಸಚಿವ. 1999ರಲ್ಲಿ ಸೋಲು ಕಂಡ ಅವರು 2004, 2008, 2013, 2018ರಲ್ಲಿ ಶಾಸಕರಾದರು. 2006-07ರ ಸಮ್ಮಿಶ್ರ ಸರ್ಕಾರದಲ್ಲಿ ಇಂಧನ, ಲೋಕೋಪಯೋಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈ ಬಾರಿ ಕೂಡಾ ಲೋಕೋಪಯೋಗಿ ಸಚಿವರಾಗುವ ಸಾಧ್ಯತೆಯಿದೆ.

      ಬಂಡೆಪ್ಪ ಕಾಶೆಂಪುರ

      ಬಂಡೆಪ್ಪ ಕಾಶೆಂಪುರ

      ಮೂರು ಬಾರಿ ಶಾಸಕರಾದ ಅನುಭವ ಹೊಂದಿರುವ ಬೀದರ್ ದಕ್ಷಿಣ ಕ್ಷೇತ್ರದ ಕಾಶೆಂಪುರ, ಈಗ 2ನೇ ಸಲ ಸಚಿವರಾಗಿ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೊಸದಾಗಿ ಉದಯಿಸಿದ ಬೀದರ್ ದಕ್ಷಿಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಇವರು, ಜೆಡಿಎಸ್‌ ಅಭ್ಯರ್ಥಿಯಾಗಿ 2004, 2008 ಹಾಗೂ 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

      ಆರ್. ಶಂಕರ್

      ಆರ್. ಶಂಕರ್

      52 ವರ್ಷವಯಸ್ಸಿನ ಆರ್ ಶಂಕರ್ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ದ ಶಾಸಕ.
      ಬಿಬಿಎಂಪಿಯ ಮಾಜಿ ಉಪ ಮೇಯರ್‌ ಆಗಿದ್ದ ಆರ್ ಶಂಕರ್, ರಾಜಕೀಯವಾಗಿ ನೆಲೆ ಕಾಣಲು ತಮ್ಮ ಕುರುಬ ಸಮುದಾಯದವರ ಬಲ ಪಡೆಯಲು ರಾಣೆಬೆನ್ನೂರಿಗೆ ಬಂದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದರು. ಅಂದು, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ .ಕೋಳಿವಾಡ ಗೆಲುವು ಸಾಧಿಸಿದ್ದರು. ಆ ಬಳಿಕ ಕ್ಷೇತ್ರದಲ್ಲೇ ಮನೆ ಮಾಡಿ ನಿಂತ ಶಂಕರ್ ಅವರು ಈ ಸಲ ಕೋಳಿವಾಡ ವಿರುದ್ಧ 4,338 ಮತಗಳ ಅಂತರದಲ್ಲಿ ಆಯ್ಕೆಯಾದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+