ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನದ ಬೇಡಿಕೆ: ಕೆ.ಎನ್. ರಾಜಣ್ಣ
ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತೇವೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ದಾವಣಗೆರೆಯ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಮಗು ಅತ್ತರೆ ತಾನೆ ತಾಯಿ ಹಾಲುಣಿಸೋದು. ಹಾಗೆ ಬೇಡಿಕೆ ನ್ಯಾಯಯುತವಾಗಿದ್ದಾಗ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಪಡೆದುಕೊಂಡು ಸಮಾಜದ ಬೆಳವಣಿಗೆಗೆ ಕೆಲಸ ಮಾಡಬೇಕು. ಮುಂಬರುವ ದಿನಗಳಲ್ಲಿ ನಾವು ಕೂಡ ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನ ಬೇಕೆಂದು ಬೇಡಿಕೆ ಇಡುತ್ತೇವೆ. ಇಡೀ ರಾಜ್ಯದ ವಾಲ್ಮೀಕಿ ಸಮುದಾಯ ಇದನ್ನು ಬಯಸುತ್ತದೆ. ನನಗೆ ಬೇಕು ಎಂದು ಕೇಳುತ್ತಿಲ್ಲ, ಸಮಯ ಬಂದಾಗ ಡಿಸಿಎಂ ಸ್ಥಾನಕ್ಕೆ ಕೂಡ ಬೇಡಿಕೆ ಇಡುವುದಾಗಿ ತಿಳಿಸಿದ್ದಾರೆ.

ನಾನು ಇನ್ನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಆದರೆ ನಮ್ಮ ನಮ್ಮ ಸಮುದಾಯದ ಒಬ್ಬರು ಮುಖ್ಯಮಂತ್ರಿ ಆಗಬೇಕು. ನಮ್ಮ ಸಮುದಾಯದ ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ. ಅವರು ಸಿಎಂ ಆದರೆ ಸಮಾಜಕ್ಕೆ ಇನ್ನೂ ಒಳ್ಳೆಯದಾಗುತ್ತದೆ. ಈಗಲೇ ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೇಳಲು ಸಿದ್ದವಾಗಿದ್ವಿ, ಸಂಘರ್ಷ ಮಾಡದಿದ್ದರೆ ನಮಗೆ ಅಧಿಕಾರ ಸಿಗಲ್ಲ. ಡಿಸಿಎಂ ಸ್ಥಾನಕ್ಕೂ ಬೇಡಿಕೆ ಇಡುತ್ತೇವೆ, ಕೇಳದಿದ್ದರೆ ಅಧಿಕಾರ ಸಿಗಲ್ಲ ಎಂದರು.
ಇನ್ನೈದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ
ಇನ್ನು ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಕೆಎನ್ ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿ, ನಿರ್ಧರಿಸಿದೆ. ಜನರ ವಿಶ್ವಾಸ ಏನಿದೆ ಅದರಂತೆ ನಿರ್ಧಾರ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಕಣ್ಣೀರು ಒರೆಸುತ್ತಾರೆ ಎಂದು ಬಡವರು ನಂಬಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲುತ್ತಾರೆ, ಅಂತವರು ಹೆಚ್ಚಿನ ಕಾಲ ಸಿಎಂ ಆಗಿರಬೇಕು ಎನ್ನುವುದು ನನ್ನ ಆಸೆ, ಹೈಕಮಾಂಡ್ ನಾಳೆಯೇ ಅಧಿಕಾರ ಬಿಡಿ ಅಂದರೂ ಸಿದ್ದರಾಮಯ್ಯ ಬಿಡುತ್ತಾರೆ, ಅವರು ಏನು ನಿರ್ಧಾರ ಮಾಡಿದ್ದಾರೆ ಅದರಂತೆ ನಡೆಯುತ್ತಾರೆ ಎಂದು ಹೇಳಿದರು.
ಇನ್ನು ಮತಾಂತರ ನಿಷೇಧ ಕಾಯ್ದೆ ರದ್ಧತಿ ಬಗ್ಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ಅದಕ್ಕಾಗಿ ಕೆಲವು ಬದಲಾವಣೆ ತರಬೇಕಾಗುತ್ತದೆ, ರಾಜ್ಯದ ಜನ ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದು ಕೆ.ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications