ಕಾಂಗ್ರೆಸ್ ಲೀಡರ್ ಕೆ.ಸಿ ವೇಣುಗೋಪಾಲ್ ಗೆ ಸಿಬಿಐ ಡ್ರಿಲ್
ದೆಹಲಿ, ಆ. 18: ಕಾಂಗ್ರೆಸ್ ಪಕ್ಷದ ಪ್ರಭಾವಿ ಲೀಡರ್, ರಾಜ್ಯಸಭಾ ಸದಸ್ಯ, ಕೇರಳದ ಕೆ.ಸಿ. ವೇಣುಗೋಪಾಲ್ ಅವರನ್ನು ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಸಿಬಿಐ ಬುಧವಾರ ವಿಚಾರಣೆಗೆ ಒಳಪಡಿಸಿದೆ.
ಕೇರಳ ಸೋಲಾರ್ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕೆ.ಸಿ. ವೇಣುಗೋಪಾಲ್ ಅವರನ್ನು ಕಳೆದ ವಾರವಷ್ಟೇ ಸಿಬಿಐ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಮಹಿಳೆಗೆ ಲೈಂಗಿಕ ಶೋಷಣೆ ನೀಡಿದ ಆರೋಪ ಸಂಬಂಧ ವಿಚಾರಣೆ ನಡೆಸಿ ವೇಣುಗೋಪಾಲ್ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಂಡಿದೆ. ಕಳೆದ ವಾರವಷ್ಟೇ ವೇಣುಗೋಪಾಲ್ ಅವರನ್ನು ಸಿಬಿಐ ಇದೀಗ ಎರಡನೇ ಸಲ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಸಂಗ್ರಹಿಸಿದೆ.
2012 ರಲ್ಲಿ ಬೆಳಕಿಗೆ ಬಂದಿದ್ದ ಸೋಲಾರ್ ಎನರ್ಜಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ನಡುವೆ ಸೋಲಾರ್ ಹಗರಣ ಕೇರಳದಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನು ಮನಗಂಡ ಪಿಣರಾಯಿ ವಿಜಯನ್ ಕಳೆದ ವರ್ಷ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.

ಮಹಿಳೆ ಹೇಳಿಕೆ ಆಧರಿಸಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಉಮ್ಮಾನ್ ಚಾಂಡಿ, ಸಂಸದ ಹಿಬಿ ಇದನ್, ಮಾಜಿ ಸಚಿವ ಎ.ಪಿ. ಅನಿಲ್ ಕುಮಾರ್, ಸಂಸದ ಅಡೂರ್ ಪ್ರಕಾಶ್, ಬಿಜೆಪಿ ಮುಖಂಡ ಎ.ಪಿ. ಅಬ್ದುಲ್ ಕಟ್ಟಿ ಸೇರಿದಂತೆ ಆರು ಮಂದಿಯ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿತ್ತು. ಈ ಪ್ರಕರಣ ಸಂಬಂಧ ಕೆ.ಸಿ. ವೇಣುಗೋಪಾಲ್ ಅವರನ್ನು ವಾರದ ಹಿಂದಷ್ಟೆ ವಿಚಾರಣೆಗೆ ಒಳಪಡಿಸಿತ್ತು.

ಕಾಂಗ್ರೆಸ್ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಪರಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಸಿ. ವೇಣುಗೋಪಾಲ್ ಅವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಸೋಲಾರ್ ಹಗರಣದಲ್ಲಿ ಕೆಸಿ ವೇಣುಗೋಪಾಲ್ ಸಂಕಷ್ಟದಲ್ಲಿ ಸಿಲುಕಿದ್ದಾರೆ.












Click it and Unblock the Notifications