ಬಗೆಹರಿಯಿತು ಸ್ಪೀಕರ್ ಹುದ್ದೆಯ ಕಗ್ಗಂಟು!
ಬೆಂಗಳೂರು, ಜೂನ್ 20 : ವಿಧಾನಸಭೆ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ. ಇದರಿಂದ ಮುಂದಿನ ಸ್ಪೀಕರ್ ಯಾರು? ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಕೆ.ಬಿ.ಕೋಳಿವಾಡ ಅವರು ಸ್ಪೀಕರ್ ಆಗಲು ಒಪ್ಪಿಗೆ ಸೂಚಿಸಿದ್ದಾರೆ.
ಸೋಮವಾರ ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ನಂತರ ಮಾತನಾಡಿದ ಅವರು, 'ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿದೆ. ಸ್ಪೀಕರ್ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ' ಎಂದು ಹೇಳಿದರು. [ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

'ಸಚಿವನಾದರೆ ಒಂದು ಖಾತೆ ಮಾತ್ರ ನಿಭಾಯಿಸಬೇಕು. ಸ್ಪೀಕರ್ ಆದರೆ ಎಲ್ಲಾ ಖಾತೆಗಳ ಮೇಲೆ ನಿಗಾವಹಿಸಬೇಕಾಗುತ್ತದೆ. ಆದ್ದರಿಂದ, ಸ್ಪೀಕರ್ ಸ್ಥಾನ ನಿರ್ವಹಿಸಲು ಸಿದ್ಧನಾಗಿದ್ದೇನೆ. ಆಡಳಿತ ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಘನತೆಗೆ ಚ್ಯುತಿಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ' ಎಂದರು. [ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]
ರಾಜ್ಯ ವಿಧಾನಸಭೆಯ ಮು೦ದುವರಿದ ಬಜೆಟ್ ಅಧಿವೇಶನ ಜುಲೈ 4ರ೦ದು ಆರ೦ಭವಾಗಲಿದೆ. ಅಂದು ಬೆಳಗ್ಗೆ 11ಗಂಟೆಗೆ ಕಲಾಪ ಆರಂಭವಾಗಲಿದ್ದು, ಅಂದೇ ಸ್ಪೀಕರ್ ಆಯ್ಕೆ ನಡೆಯಲಿದೆ. ಜುಲೈ 29ರವರೆಗೆ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ. [ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಮತ್ತು ಖರ್ಗೆ ಫಿಕ್ಸಿಂಗ್?]
ಕೆ.ಬಿ.ಕೋಳಿವಾಡ, ಮಾಲೀಕಯ್ಯ ಗುತ್ತೇದಾರ್ ಮುಂತಾದ ನಾಯಕರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಸಚಿವ ಸ್ಥಾನ ಕೈತಪ್ಪಿದ ಕೋಳಿವಾಡ ಅವರನ್ನು ಸ್ಪೀಕರ್ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮಾಲೀಕಯ್ಯ ಗುತ್ತೇದಾರ್ ಈಗಾಗಲೇ ಅಸಮಾಧಾನಗೊಂಡು ಕೆಪಿಸಿಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.












Click it and Unblock the Notifications