ಪಹಲ್ಗಾಮ್ನಲ್ಲಿ ಅಸುನೀಗಿದ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಾಂತ್ವನ
ಬೆಂಗಳೂರು, ಏಪ್ರಿಲ್ 23: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸುಮಾರು 25ಕ್ಕೂ ಹೆಚ್ಚು ಪ್ರವಾಸಿಗರು ಉಗ್ರರ ದಾಳಿಗೆ ಅಸುನೀಗಿದ್ದಾರೆ. ಪ್ರವಾಸಿ ತಾಣವಾದ ಪಹಲ್ಗಾಮ್ನದಲ್ಲಿ ಕಂಡುಕೇಳರಿಯದ ಘಟನೆ ನಡೆದಿದ್ದು, ದೇಶವೇ ಬೆಚ್ಚಿಬಿದ್ದಿದೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಎಕೆ-47 ಗನ್ ಬಳಸಿ ಪ್ರವಾಸಿಗರ ಮೇಲೆ ಓಪನ್ ಫೈರ್ ಮಾಡಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಅಸುನೀಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಉದ್ಯಮಿ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, 'ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಹಾಗೂ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ಪತ್ನಿ ಸುಜಾತ ಅವರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದ್ದೇನೆ'.

'ಉಗ್ರರ ಈ ಹೇಯ ಕೃತ್ಯದಲ್ಲಿ ಮಡಿದವರ ಕುಟುಂಬಗಳಿಗೆ ನೋವನ್ನು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಪಹಲ್ಗಾಮ್ನ ಭಯೋತ್ಪಾದಕ ದಾಳಿಯಲ್ಲಿ ಸಂತ್ರಸ್ತರಾದ ಕನ್ನಡಿಗರ ಶವಗಳನ್ನು ನಾಡಿಗೆ ತಲುಪಿಸುವ, ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ಹಾಗೂ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ನೀಡುವ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಮ್ಮ ಸರ್ಕಾರ ನಿರ್ವಹಿಸುತ್ತಿದೆ'.
'ಸಚಿವರಾದ ಸಂತೋಷ್ ಲಾಡ್ ಅವರು ಈ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದು, ನೊಂದವರನ್ನು ಸಂತೈಸಿ, ಧೈರ್ಯತುಂಬಿ ಅವರ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿ ಜೊತೆ ನಿಂತಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹವನ್ನು ತಾಯ್ನಾಡಿಗೆ ಮರಳಿ ತರಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ. ವಿಮಾನದ ಮೂಲಕ ಭರತ್ ಭೂಷಣ್ ಅವರ ಮೃತದೇಹ ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಮಂಜುನಾಥ್ ರಾವ್ ಅವರ ಮೃತದೇಹ ಸಂಜೆ 6 ಗಂಟೆಗೆ ದೆಹಲಿ, ಬೆಂಗಳೂರು ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ' ಎಂದು ಸಿಎಂ ತಿಳಿಸಿದ್ದಾರೆ.
ಮಂಜುನಾಥ್ ಕಾಶ್ಮೀರಕ್ಕೆ ತೆರಳಿದ್ದೇಕೆ?
ಶಿವಮೊಗ್ಗದ ಮಂಜುನಾಥ್ ತಮ್ಮ ಪತ್ನಿ ಹಾಗೂ ಮಗನೊಂದಿಗೆ ಮಗನಿಗೆ ಬೇಸಿಗೆ ರಜೆಯಿದ್ದ ಕಾರಣ ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದಾರೆ. ಕೆಲವು ಜಾಗಗಳನ್ನು ವೀಕ್ಷಿಸಿ ಪಹಲ್ಗಾಮ್ಗೆ ತೆರಳಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿಯನ್ನು ಕಣ್ಣೇದುರೇ ಕಳೆದುಕೊಂಡ ಮಂಜುನಾಥ್ ಪತ್ನಿ, ನನ್ನ ಗಂಡನನ್ನು ಕೊಂದು ಹಾಕಿದಿರಿ, ನನ್ನನ್ನೂ ಕೊಂದು ಬಿಡಿ ಎಂದು ಉಗ್ರರ ಬಳಿ ಕೇಳಿದ್ದು, ಈ ವೇಳೆ ಉಗ್ರನೊಬ್ಬ ನೀವು ಹೋಗಿ ನಿಮ್ಮ ಮೋದಿಗೆ ಹೇಳಿ ಅಂತಾ ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.












Click it and Unblock the Notifications