ಕಾಶೀಮಠ ಸಂಸ್ಥಾನದ ಪೀಠಾಧಿಪತಿ ಸುಧೀಂದ್ರತೀರ್ಥ ಸ್ವಾಮೀಜಿ ವಿಧಿವಶ
ಹರಿದ್ವಾರ, ಜ 17: ಹಿಂದೂ ಸಮಾಜದ ಹಿರಿಯ ಯತಿ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರಮುಖ ಧರ್ಮಪೀಠ ಕಾಶೀಮಠ ಸಂಸ್ಥಾನದ ಪೀಠಾಧಿಪತಿ ಶ್ರೀಸುಧೀಂದ್ರತೀರ್ಥ ಸ್ವಾಮೀಜಿ ವಿಧಿವಶರಾಗಿದ್ದಾರೆ.
ಕಾಶೀಮಠ ಸಂಸ್ಥಾನದ ಗುರುಪರಂಪರೆಯ ಮಠಾಧಿಪತಿ ಶ್ರೀಸುಧೀಂದ್ರತೀರ್ಥ ಶ್ರೀಗಳು ಹರಿದ್ವಾರದ ಕಾಶೀಮಠದಲ್ಲಿ ಭಾನುವಾರ (ಜ 17) ನಸುಕಿನ 1.10ಕ್ಕೆ ವಿಷ್ಣುಪಾದ ಸೇರಿದ್ದಾರೆ.

ಸಂಸ್ಥಾನದ ಗುರುಪರಂಪರೆಯ ಇಪ್ಪತ್ತನೇ ಪೀಠಾಧಿಪತಿಯಾಗಿದ್ದ 85ವರ್ಷದ ಶ್ರೀಗಳು ವಯೋಸಂಬಂಧಿ ಕಾರಣಗಳಿಂದ ನಿಧನರಾಗಿದ್ದಾರೆ. ಶ್ರೀಗಳ ಅಂತಿಮ ವಿದಿವಿಧಾನ ಹರಿದ್ವಾರದ ವ್ಯಾಸಾಶ್ರಮದಲ್ಲಿ ಇಂದು ಸಂಜೆ ನಡೆಯಲಿದೆ.
ಸಂಸ್ಥಾನದ ಆಸ್ತಿಯಾಗಿರುವ ಜಿಎಸ್ಬಿ ಸಮುದಾಯದ ಶಿಷ್ಯವರ್ಗವನ್ನು ನಿರಂತರ ತಮ್ಮ ನೆರಳಿನಲ್ಲಿ ಮಮತೆ, ಮಾರ್ಗದರ್ಶನದಿಂದ ಬೆಳೆಸಿಕೊಂಡು ಬಂದಿರುವ ಶ್ರೀಗಳನ್ನು ಶಿಷ್ಯವೃಂದ ಭಗವಂತನ ಸ್ವರೂಪದಲ್ಲಿ ಕಾಣುತ್ತಿದ್ದದ್ದು ವಿಶೇಷ.
ನಿರಂತರ ಸಂಚಾರಿಗಳಾಗಿ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಾ ಧರ್ಮ, ಅಧ್ಯಾತ್ಮಿಕದಲ್ಲಿ ನಿರಂತರಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಶ್ರೀಗಳು ಇಡೀ ಸಮಾಜಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದರು.

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ 31.03.1930ರಂದು ಜನಿಸಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ಸದಾಶಿವ ಶೆಣೈ. 1949ರಲ್ಲಿ ಅವರು ಕಾಶೀಮಠ ಗುರುಪರಂಪರೆಯ ಇಪ್ಪತ್ತನೇ ಶ್ರೀಗಳಾಗಿ ಪೀಠಾರೋಹಣ ಮಾಡಿದ್ದರು.
ಶ್ರೀಗಳನ್ನು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರವಷ್ಟೇ ಏರ್ ಆಂಬುಲೆನ್ಸ್ ನಲ್ಲಿ ಹರಿದ್ವಾರಕ್ಕೆ ಕರೆ ತರಲಾಗಿತ್ತು. ತಾವೇ ಸ್ಥಾಪಿಸಿರುವ ಹರಿದ್ವಾರ ಮಠದಲ್ಲೇ ತಮ್ಮ ವೃಂದಾವನ ಮಾಡಬೇಕು ಎಂದು ಶ್ರೀಗಳು ಬಯಸಿದ್ದರು.












Click it and Unblock the Notifications