ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ದೀಕ್ಷಾಭೂಮಿ ಯಾತ್ರೆಗೆ ಚಾಲನೆ
ಬೆಂಗಳೂರು, ಅ.04: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ರಾಜ್ಯದಿಂದ ಈ ಬಾರಿ ಸುಮಾರು 5 ಸಾವಿರ ಅನುಯಾಯಿಗಳನ್ನು ರಾಜ್ಯ ಸರ್ಕಾರದ ವತಿಯಿಂದ ಕಳುಹಿಸಿಕೊಡಲಾಗುತ್ತಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
1950ರಲ್ಲಿ RSS ಈ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು: ಪ್ರಕಾಶ್ ಅಂಬೇಡ್ಕರ್
ಬೇರೆ ಬೇರೆ ಧರ್ಮದವರು ವಿವಿಧ ಕ್ಷೇತ್ರಗಳಿಗೆ ಯಾತ್ರೆ ಮಾಡುವ ಮಾದರಿಯಲ್ಲಿಯೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ನಾಗಪುರದಲ್ಲಿ ನಡೆಯುವ ದಮ್ಮ ಪ್ರವರ್ತನಾ ದಿನ ಕಾರ್ಯಕ್ರಮಕ್ಕೆ ದೀಕ್ಷಾ ಯಾತ್ರೆ ಕೈಗೊಳ್ಳುವುದು ವಾಡಿಕೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದೀಕ್ಷಾಭೂಮಿ ಯಾತ್ರೆ
"ದಮ್ಮ ಪ್ರವರ್ತನಾ ದಿನ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಾಬಾ ಸಾಹೇಬ ಅಂಬೇಡ್ಕರ್ ಅವರ ಅನುಯಾಯಿಗಳನ್ನು ಪ್ರತಿ ವರ್ಷವೂ ದೀಕ್ಷಾಯಾತ್ರೆಗೆ ಕಳುಹಿಸಲಾಗುತ್ತಿದೆ. ಈ ಬಾರಿಯೂ ಐದು ಸಾವಿರ ಅನುಯಾಯಿಗಳನ್ನು ನಾಗಪುರ ದೀಕ್ಷಾಯಾತ್ರೆಗೆ ತೆರಳಲು ಸರ್ಕಾರದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ" ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಅಂಬೇಡ್ಕರ್ ಅನುಯಾಯಿಗಳಿಗೆ ದೀಕ್ಷಾಭೂಮಿ ಯಾತ್ರೆ
ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳ ದೀಕ್ಷಾಭೂಮಿ ಯಾತ್ರೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಿಗೆ ಅಕ್ಟೋಬರ್ 3 ರಿಂದ 5 ರವರೆಗೆ ಆಯೋಜಿಸಲಾಗಿರುವ ಮಹಾರಾಷ್ಟ್ರದ ನಾಗಪೂರಕ್ಕೆ 'ದೀಕ್ಷಾ ಭೂಮಿ ಯಾತ್ರೆಗೆ' ಸಮಾಜ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿ ರಾಜೇಶ್ ಗೌಡ, ಉಪನಿರ್ದೇಶಕ ಚಿದಾನಂದಪ್ಪ ಹಾಗೂ ಕೊಪ್ಪಳ ತಹಶೀಲ್ದರ್ ವಿಠ್ಠಲ ಚೌಗಲಾ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಯಲ್ಲಪ್ಪ ಬಳಗಾನೂರು, ಮಹಾಂತೇಶ ಚಾಕ್ರಿ, ಹುಸೇನಪ್ಪ ಮುದೇನೂರು, ಹೇಮರಾಜ ವೀರಾಪೂರು, ರಘು, ಆನಂದ, ಮಾರ್ಕಂಡೇಯ, ಫಕೀರಪ್ಪ ಹಾಗೂ ಇತರರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ರಾಜಹಂಸ ಬಸ್ಗಳ ಮೂಲಕ ಯಾತ್ರೆಗೆ ಕಳಿಸಲಾಗುತ್ತದೆ
ಇನ್ನು 'ದೀಕ್ಷಾ ಭೂಮಿ ಯಾತ್ರೆ'ಗೆ ಹೋಗಲು ಬಯಸುವ ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಆಯಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ನಾಗಪುರ ದೀಕ್ಷಾಯಾತ್ರೆಗೆ ಕರೆದೊಯ್ಯಲು ಸರ್ಕಾರದಿಂದ ಬಸ್ ವ್ಯವಸ್ಥೆ ಕಲ್ಪಿಸುತ್ತಾರೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ನಿಂತಿದ್ದ ದೀಕ್ಷಾ ಭೂಮಿ ಯಾತ್ರೆ ಈ ಬಾರಿ ಆರಂಭವಾಗಿದೆ. ರಾಜ್ಯಾದ್ಯಂತ ಈ ಯೋಜನೆಗಾಗಿ ಸುಮಾರು 2.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅಶೋಕ ವಿಜಯದಶಮಿಯಂದು ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ
ಡಾ.ಅಂಬೇಡ್ಕರ್ ಅವರು 1956ರ ಅಶೋಕ ವಿಜಯದಶಮಿಯ ದಿನ ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಸ್ಮರಣೆಯ ನಿಮಿತ್ತ ದೀಕ್ಷಾಭೂಮಿ ಯಾತ್ರೆ ಜರುಗುತ್ತದೆ.
ದೀಕ್ಷಾಭೂಮಿಯು ಭಾರತದ ಮಹಾರಾಷ್ಟ್ರ ರಾಜ್ಯದ ನಾಗಪುರ ನಗರದಲ್ಲಿ ನೆಲೆಗೊಂಡಿರುವ ನವಯಾನ ಬೌದ್ಧಧರ್ಮದ ಪವಿತ್ರ ಸ್ಮಾರಕವಾಗಿದೆ. ಅಲ್ಲಿ ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಸುಮಾರು 6,00,000 ಅನುಯಾಯಿಗಳೊಂದಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಸಮುದಾಯದವರೊಂದಿಗೆ 14 ಅಕ್ಟೋಬರ್ 1956 ರಂದು ಅಶೋಕ ವಿಜಯ ದಶಮಿಯಂದು ಬೌದ್ಧಧರ್ಮವನ್ನು ಸ್ವೀಕರಿಸಿದ್ದರು.