Shakti Guarantee: ಕಾಂಗ್ರೆಸ್ ಸರ್ಕಾರದ ಶಕ್ತಿ ಗ್ಯಾರಂಟಿ ಯೋಜನೆಯಿಂದ ಹೊಸ ದಾಖಲೆ
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯಾದ್ಯಂತ ಅಪಸ್ವರ ಕೇಳಿಬರುತ್ತಿದೆ. ಗೃಹಲಕ್ಷ್ಮಿ ಹಣ ವಿಳಂಬ ಎಂದು ಮಹಿಳೆಯರು ದೂರುತ್ತಿದ್ದರೆ, ಅನ್ನಭಾಗ್ಯದ ಬಾಕಿ ಹಣ ಬಂದಿಲ್ಲ ಎಂದು ಗುರ್ ಅನ್ನುತ್ತಿದ್ದಾರೆ. ಈ ಅಸಮಾಧಾನದ ನಡುವೆಯೇ ಮತ್ತೊಂದು ಗ್ಯಾರಂಟಿ ಯೋಜನೆ ದಾಖಲೆ ನಿರ್ಮಿಸಿದೆ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಜಾರಿಗೆ ತಂದಿರುವ ಶಕ್ತಿ ಗ್ಯಾರಂಟಿ ಯೋಜನೆಯು ಹೊಸ ಇತಿಹಾಸ ಸೃಷ್ಟಿಸಿದೆ.
ಶಕ್ತಿ ಯೋಜನೆ ಜಾರಿಯಾದ ನಂತರದಿಂದ ಕರ್ನಾಟಕದ ಮಹಿಳೆಯರು ಬರೋಬ್ಬರಿ 400 ಕೋಟಿ ಬಾರಿ ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಹಿಳೆಯರು ಶಕ್ತಿ ಯೋಜನೆ ಮೂಲಕ ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ 9,803 ಕೋಟಿ ರೂಪಾಯಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯು ಕರ್ನಾಟಕದಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದೆ. ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಈ ಶಕ್ತಿ ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿರುವುದು ಯೋಜನೆಯ ಯಶಸ್ಸಿಗೆ ಹಿಡಿದಿರುವ ಕೈಗನ್ನಡಿ ಎಂದು ಬೆನ್ನುತಟ್ಟಿಕೊಂಡಿದ್ದಾರೆ. ಶಕ್ತಿ ಯೋಜನೆ ಜಾರಿ ನಂತರ ನಾಡಿನ ದೇವಾಲಯಗಳು ಭಕ್ತಾದಿಗಳಿಂದ ತುಂಬಿ ತುಳುಕುತ್ತಿವೆ. ಭಕ್ತಾದಿಗಳಿಗೆ ದೇವರ ದರ್ಶನ ಪಡೆದ ಧನ್ಯತಾಭಾವವಿದ್ದರೆ, ಭಕ್ತಾದಿಗಳನ್ನೇ ನಂಬಿದ್ದ ಸ್ಥಳೀಯ ವ್ಯಾಪಾರಿಗಳ ಬದುಕು ಹಸನಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಧರ್ಮಸ್ಥಳಕ್ಕೆ ಉಚಿತ ಬಸ್ ಪ್ರಯಾಣ ಕೈಗೊಂಡ ನನ್ನ ಅಕ್ಕತಂಗಿಯರ ಶುಭ ಹಾರೈಕೆಯಷ್ಟೇ ಸಾಕು ನನಗೆ. ಬೀದರ್ನಿಂದ ಚಾಮರಾಜನಗರದ ವರೆಗೆ ನಾಡಿನ ಪ್ರತಿ ಊರಿನ ಪ್ರತಿ ಮಹಿಳೆಯನ್ನು ನಮ್ಮ ಶಕ್ತಿ ಯೋಜನೆ ಯಶಸ್ವಿಯಾಗಿ ತಲುಪಿದೆ. ಅವರ ಬದುಕಿನ ಹಂಬಲಕ್ಕೆ ಬಲತುಂಬಿದೆ. ಶಕ್ತಿ ಈಗ ಬರೀ ಯೋಜನೆಯಾಗಿರದೆ ಕೋಟ್ಯಂತರ ಮಹಿಳೆಯರ ಬದುಕಿನ ಪಯಣದ ನಿತ್ಯ ಸಂಗಾತಿಯಾಗಿದೆ ಎಂದು ಹೇಳಿದ್ದಾರೆ. ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣದಲ್ಲಿ ಕರ್ನಾಟಕವು ಮಹತ್ವದ ಮೈಲಿಗಲ್ಲು ತಲುಪಿದ್ದು, ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಸಂತಸದಲ್ಲಿದ್ದಾರೆ.
ದೇಶಕ್ಕೇ ಮಾದರಿ ಎಂದ ಕಾಂಗ್ರೆಸ್
ಸಬಲೀಕರಣದ ದಿಟ್ಟ ಹೆಜ್ಜೆ ಶಕ್ತಿ ಯೋಜನೆಯ ಸಫಲತೆ ದೇಶಕ್ಕೆ ಮಾದರಿ ಎಂದು ಕಾಂಗ್ರೆಸ್ ಹೇಳಿದೆ. ಶಕ್ತಿ ಯೋಜನೆಯು ರಾಜ್ಯದಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಬದುಕು ರೂಪಿಸುವ ಮೂಲಕ ಸ್ವಾಭಿಮಾನದ ಜೀವನ ನಡೆಸಲು ನೆರವಾಗಿದೆ. ಮಹಿಳೆಯರು ದೇವಸ್ಥಾನ, ಪ್ರವಾಸಿತಾಣ, ಆಸ್ಪತ್ರೆ, ಉದ್ಯೋಗ ಸೇರಿದಂತೆ ಎಲ್ಲೆಡೆ ಉಚಿತವಾಗಿ ಸಂಚರಿಸುತ್ತಿದ್ದು, ರಾಜ್ಯದಲ್ಲಿನ ಆರ್ಥಿಕ ಚಟುವಟಿಕೆಗೂ ಚುರುಕು ನೀಡಿದೆ ಎಂದಿದೆ.

ಕೇಂದ್ರದ ಎನ್ಡಿಎ ಸರ್ಕಾರದ ಭಾಗವಾಗಿರುವ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಕೂಡ ಆಂಧ್ರಪ್ರದೇಶದಲ್ಲೂ ಈ ಯೋಜನೆ ಜಾರಿ ಮಾಡಲು ಮುಂದಾಗಿರುವುದು ಯೋಜನೆಯ ಸಫಲತೆಗೆ ಸಾಕ್ಷಿಯಾಗಿದೆ. ಬಿಜೆಪಿ ಇನ್ನಾದರೂ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು, ಶಕ್ತಿ ಯೋಜನೆಯನ್ನು ಮಹಿಳೆಯರನ್ನು ದಾರಿ ತಪ್ಪಿಸುವ ಯೋಜನೆಯೆಂದು ಟೀಕಿಸುವುದನ್ನು ನಿಲ್ಲಿಸಿ, ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಬಿಡಲಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.












Click it and Unblock the Notifications