ಹೈರಿಸ್ಕ್ ದೇಶಗಳಿಂದ ಬರುವವರ ಹೋಮ್ ಕ್ವಾರಂಟೈನ್ ಆದೇಶ ಹಿಂಪಡೆದ ಸರ್ಕಾರ
ಬೆಂಗಳೂರು, ಜ. 04: ಕೊರೊನ ಪ್ರಕರಣಗಳು ಹೆಚ್ಚುತ್ತಿರುವ ಚೀನಾ, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥಾಯ್ಲೆಂಡ್ ನಂತಹ ಹೈರಿಸ್ಕ್ ದೇಶಗಳಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯಗೊಳಿಸಲಾಗಿದ್ದ ಏಳು ದಿನಗಳ ಹೋಮ್ ಕ್ವಾರಂಟೈನ್ ಆದೇಶ ಹಿಂಪಡೆಯಲಾಗಿದೆ.
ಚೀನಾ, ಹಾಂಗ್ ಕಾಂಗ್, ಜಪಾನ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಲಕ್ಷಣರಹಿತ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ಏಳು ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಿತ್ತು. ಈ ಸುತ್ತೋಲೆಯನ್ನು ಸರ್ಕಾರ ಹಿಂಪಡೆದಿದ್ದು, ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಲು ತಿಳಿಸಿದೆ.
ಹಲವು ದೇಶಗಳಲ್ಲಿ ಚೀನಾ ಪ್ರಯಾಣಿಕರಿಗೆ ನಿರ್ಬಂಧ: ಎಚ್ಚರಿಕೆ ನೀಡಿದ ಚೀನಾ
7 ದಿನಗಳವರೆಗೆ ಕಡ್ಡಾಯ ಹೋಮ್ ಕ್ವಾರಂಟೈನ್ ಆದೇಶ ವಾಪಸ್
ಹಲವಾರು ದೇಶಗಳಲ್ಲಿ ಕೊರೊನಾ ಸೋಂಕ ಉಲ್ಬಣಗೊಳ್ಳುತ್ತಿದೆ ಎಂದು ರಾಜ್ಯವು ಶನಿವಾರ ಕೋವಿಡ್ -19 ಮಾರ್ಗಸೂಚಿಗಳನ್ನು ಪರಿಷ್ಕರಿಸಿತ್ತು. ಬಳಿಕ "ಹೆಚ್ಚಿನ ಅಪಾಯದ ದೇಶಗಳಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರು ಅವರು ಆಗಮಿಸಿದ ದಿನಾಂಕದಿಂದ 7 ದಿನಗಳವರೆಗೆ ಹೋಮ್ ಕ್ವಾರಂಟೈನ್ ಇರಬೇಕಾಗುತ್ತದೆ" ಎಂದು ಸೂಚಿಸಿತ್ತು.
"ಒಮ್ಮೆ ಕೊರೊನಾ ಸೋಂಕಿಗೆ ಒಳಗಾದರೆ, ಸೋಂಕಿತ ಜನರಿಗೆ ರಾಜ್ಯ ಕೋವಿಡ್ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಮತ್ತು ನಿರ್ವಹಿಸಬೇಕು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ರಾಜ್ಯದ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿತ್ತು.
ಕೇಂದ್ರ ಸರ್ಕಾರ ಮಾರ್ಗಸೂಚಿ ಅನುಸರಿಸಲು ಸೂಚನೆ
ಆರೋಗ್ಯ ಇಲಾಖೆ ಹೊರಡಿಸಿದ್ದ ಹಿಂದಿನ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಭಾರತ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
"ಮುಂದಿನ ಆದೇಶದವರೆಗೆ ಕರ್ನಾಟಕಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಆರೋಗ್ಯ ಸಚಿವಾಲಯ ಹೊರಡಿಸಿದ ಅಂತರಾಷ್ಟ್ರೀಯ ಆಗಮನದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಈ ಹಿಂದೆ 31ನೇ ಡಿಸೆಂಬರ್ 2022 ರಂದು ಹೊರಡಿಸಲಾದ ಸಮ ಸಂಖ್ಯೆಯ ಸುತ್ತೋಲೆಯನ್ನು ಹಿಂಪಡೆಯಲಾಗಿದೆ" ಎಂದು ಹೊಸ ಸುತ್ತೋಲೆ ಹೇಳಿದೆ.
"ಬಿಬಿಎಂಪಿ ಮತ್ತು ಜಿಲ್ಲೆಗಳಲ್ಲಿ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಮೇಲೆ ತಿಳಿಸಿದ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಲು ಈ ಮೂಲಕ ಸೂಚಿಸಲಾಗಿದೆ" ಎಂದು ಸುತ್ತೋಲೆ ಸೇರಿಸಲಾಗಿದೆ.
ದೇಶವನ್ನು ಲೆಕ್ಕಿಸದೇ ಕೊರೊನಾ ಟೆಸ್ಟ್ ವರದಿ ಅಗತ್ಯ
ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್ ಮೂಲಕ ಸಾಗುವ ಪ್ರಯಾಣಿಕರಿಗೆ ಯಾವುದೇ ಭಾರತೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು, ಅವರ ಮೂಲ ದೇಶಗಳನ್ನು ಲೆಕ್ಕಿಸದೆ, ಕೊರೊನಾವೈರಸ್ ವರದಿಯು ಅತ್ಯಗತ್ಯವಾಗಿರುತ್ತದೆ.
ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಟಿ ಕೆ ಅನಿಲ್ ಕುಮಾರ್, ರಾಜ್ಯ ಆರೋಗ್ಯ ಇಲಾಖೆಯು ಭಾರತ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯುತ್ತದೆ. ಆದ್ದರಿಂದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.
72 ಗಂಟೆಗಳ ಒಳಗೆ ಕೋವಿಡ್ -19 ಪರೀಕ್ಷೆ ಮಾಡಿಸಿರಬೇಕು
ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಭಾರತಕ್ಕೆ ಪ್ರಯಾಣವನ್ನು ಕೈಗೊಂಡ 72 ಗಂಟೆಗಳ ಒಳಗೆ ಕೋವಿಡ್ -19 ಪರೀಕ್ಷೆಯನ್ನು ಮಾಡಿಸಿರಬೇಕು. ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿಯನ್ನು ಅವರು ನಿರ್ಗಮಿಸುವ ಮೊದಲು ಏರ್ ಸುವಿಧಾ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.
ಇನ್ನು, ತನ್ನ ಭೂಪ್ರದೇಶದಿಂದ ವಿದೇಶಕ್ಕೆ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಸುಮಾರು ಹನ್ನೆರಡು ದೇಶಗಳು ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವುದನ್ನು ಚೀನಾ ಖಂಡಿಸಿದೆ. ಜೊತೆಗೆ ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಎಚ್ಚರಿಕೆ ರವಾನಿಸಿದೆ.