Karnataka Rains: ಚಂಡಮಾರುತ ಪ್ರಸರಣ: 3 ದಿನ ರಾಜ್ಯಕ್ಕೆ ಭಾರೀ ಮಳೆ, ಆರೆಂಜ್ ಅಲರ್ಟ್! ಶಾಲೆಗಳಿಗೆ ರಜೆ ನಿರೀಕ್ಷೆ
ಬೆಂಗಳೂರು, ಜುಲೈ 15: ಭೂಮಿ ಮೇಲ್ಮೈ ಹಾಗೂ ಸಮುದ್ರ ಮೇಲ್ಮೈನಲ್ಲಿ ತೀವ್ರ ರೂಪದ ಹವಾಮಾನ ವೈಪರೀತ್ಯಗಳು ಉಂಟಾಗಿವೆ. ಈ ಕಾರಣದಿಂದಾಗಿ ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿಯಿಂದ ಧಾರಾಕಾರ ಮಳೆ ಆಗುವ ಸಾಧ್ಯತೆ. ಹೀಗಾಗಿ ಕರಾವಳಿ ಹಾಗೂ ಒಳನಾಡು ಸೇರಿ 07 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ವಿಜ್ಞಾನಿಗಳು ಮಂಗಳವಾರದ ಮುನ್ಸೂಚನೆ ವರದಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಭಾರತದ ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯದ ಎರಡು ಕಡೆಗಳಲ್ಲಿ ಭೂಮಿ ಮೇಲ್ಮೈನಲ್ಲಿ ಚಂಡಮಾರುತ ಪ್ರಸರಣ ಉಂಟಾಗಿತ್ತು. ಇದೀಗ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಭಾಗದಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಮುಂದಿನ ಮೂರು ದಿನಗಳಲ್ಲಿ ಒಳನಾಡು ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ಕೆಲವೆಡೆ 150 ಮಿಲಿ ಮೀಟರ್ಗಿಂತಲೂ ಹೆಚ್ಚಿನ ಮಳೆ ನಿರೀಕ್ಷೆ ಇದೆ.

ಜುಲೈ 16 ಮತ್ತು 17 ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಬರಲಿದ್ದು, ಎರಡು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ. ನಂತರ ಎರಡು ದಿನ (ಜುಲೈ 19ರವರೆಗೆ) ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ನಂತರ ಮತ್ತೆ ಕರಾವಳಿಯಲ್ಲಿ ಮಳೆ ಚುರುಕಾಗಲಿದ್ದು, ಎರಡು ದಿನ 'ಆರೆಂಜ್ ಅಲರ್ಟ್' ಕೊಡಲಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕರಾವಳಿಯಲ್ಲಿ ಮುಂಗಾರು ಮಳೆ ಪ್ರಭಾವ ಏರಿಳಿತದಿಂದ ಕೂಡಿರುವುದು ಈ ವರದಿಯಿಂದ ಸ್ಪಷ್ಟವಾಗುತ್ತದೆ.
ಒಳನಾಡು ಜಿಲ್ಲೆಗಳಿಗೂ ಭಾರೀ ಮಳೆ
ಕರ್ನಾಟಕದ ಒಳನಾಡು ಜಿಲ್ಲೆಗಳಾದ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜುಲೈ 18 ಮತ್ತು 19 ರಂದು ವ್ಯಾಪಕ ಮಳೆ ಆಗಲಿದೆ. ಚಂಡಮಾರುತ ಪ್ರಸರಣದ ಅಬ್ಬರ ಈ ಜಿಲ್ಲೆಗಳ ಮೇಲೂ ಆಗಲಿದ್ದು, ಎರಡು ದಿನ ಭಾರೀ ಮಳೆ ಹಿನ್ನೆಲೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಒಂದು ದಿನ ಮಾತ್ರ ಭಾರೀ ಮಳೆ ಬರಲಿದೆ.

ಬೆಂಗಳೂರಿಗೆ ಭಾರೀ ಮಳೆ 'ಯೆಲ್ಲೋ ಅಲರ್ಟ್'
ರಾಜಧಾನಿ ಬೆಂಗಳೂರಿಗೆ ಜುಲೈ 18 ಮತ್ತು 19 ರಂದು ಸಾಧಾರಣದಿಂದ ಭಾರೀ ಮಳೆ ಬರಲಿದೆ. ಇದರೊಂದಿಗೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮಂಡ್ಯ, ಮೈಸೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಹ ಭಾರೀ ಮಳೆ ನಿರೀಕ್ಷೆ ಹಿನ್ನೆಲೆ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಶಾಲೆಗಳಿಗೆ ರಜೆ ಘೋಷಣೆ ಸಾಧ್ಯತೆ
ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಆಗಾಗ ಒಳನಾಡು ಜಿಲ್ಲೆಗಳಲ್ಲಿ ಎರಡು ವಾರದಿಂದ ಬರುತ್ತಲೇ ಇದೆ. ಇನ್ನೂ ಕೆಲವು ದಿನ ಇದೇ ವಾತಾವರಣ ಮುಂದುವರಿಯಲಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮತ್ತೆ ಮುಂಗಾರು ಚುರುಕಾಗಿದೆ. ಭಾರೀ ಮಳೆ ನೋಡಿಕೊಂಡು ಜಿಲ್ಲಾಧಿಕಾರಿಗಳು ಅಗತ್ಯವಿರುವ ತಾಲೂಕುಗಳ ಗ್ರಾಮಗಳ 1-10ನೇ ತರಗತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಬಹುದು. ಇಂದು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಮೂರು ತಾಲೂಕುಗಳಿಗೆ ರಜೆ ಕೊಡಲಾಗಿತ್ತು. ಈ ರಜೆ ಆದೇಶ ಮುಂದುವರಿಯುತ್ತಾ? ಶಾಲೆಗಳು ಮತ್ತೆ ಶುರುವಾಗುತ್ತವಾ ಎಂದು ಕಾದು ನೋಡಬೇಕಿದೆ.












Click it and Unblock the Notifications