Karnataka Rain: ಗುಡುಗು ಮಿಂಚು ಸಹಿತ ಮಳೆ ಎಚ್ಚರಿಕೆ: ಯಾವ ಜಿಲ್ಲೆಗಳಿಗೆ ತಿಳಿಯಿರಿ
ರಾಜ್ಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಮಳೆ ಮುಂದುವರೆಯಲಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಮಲೆನಾಡು-ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.

ಆಗಸ್ಟ್ 3ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೊಡು ಎನ್ನುವಲ್ಲಿ 81.5 ಮಿಮೀ ಮಳೆಯಾಗಿದ್ದು ಅತ್ಯಧಿಕ ಮಳೆ ಬಿದ್ದ ಪ್ರದೇಶ ಎನಿಸಿಕೊಂಡಿದೆ. ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಉಡುಪಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊನ್ನೆತಾಳು, ಬಿದರಗೂಡು, ನೆರತೂರು, ಹೊಸಹಳ್ಳಿ, ಅರೆಹಳ್ಳಿ, ಅಗ್ರಹಾರ, ದ್ಯಾವನಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಉಂಬಳಮನೆ, ಕೊಡಕಣಿ, ದೊಡ್ಮನೆ, ಬಿಳ್ಗಿ, ಸಾಲ್ಕಣಿ, ಶಿವಳ್ಳಿ, ಅಂಕೋಲಾದಲ್ಲಿ ಉತ್ತಮ ಮಳೆಬಿದ್ದಿದೆ.
ಇನ್ನು ಬೆಳಗಾವಿ ಜಿಲ್ಲೆಯ ಅಮಾಟೆ, ಕಿನಾಯೆ, ಬೈಲೂರು, ಬೆಳಗುಂಡಿ, ಮಾಂಡೋಲಿ, ತುರುಮುರಿಯಲ್ಲಿ ಉತ್ತಮ ಮಳೆ ಸುರಿದಿದೆ. ಉಡುಪಿ ಜಿಲ್ಲೆಯ ಯೆಡಮೊಗೆ, ಹಳ್ಳಿಹೊಳೆ, ಗೋಲಿಹೊಳೆ, ಮಡಮಕ್ಕಿ, ಮೊಲಹಳ್ಳಿ, ಕುಚ್ಚೂರು, ಅಂಪಾರು, ಹೆಂಗವಳ್ಳಿ, ಹಟ್ಟಿಯಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಜಿಲ್ಲಾವಾರು ಮಳೆ ಮುನ್ಸೂಚನೆ
ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಉತ್ತಮ ಮಳೆಯಾಗಲಿದೆ. ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೂಡ ಚದುರಿದಂತೆ ಮಳೆ ಸುರಿಯಲಿದೆ. ಬೆಳಗಾವಿ, ಚಿಕ್ಕಮಗಳೂರು, ಹಾಸನ, ವಿಜಯಪುರ, ಬೀದರ್, ಬಳ್ಳಾರಿ, ವಿಜಯನಗರ, ಕಲಬುರಗಿ, ಚಿತ್ರದುರ್ಗ, ಕೊಡಗು, ಹಾವೇರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗಲಿದೆ.
ಯಾದಗಿರಿ, ಧಾರವಾಡ, ಗದಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಮಂಡ್ಯ, ಚಾಮರಾಜನಗರ, ಕೊಪ್ಪಳ, ತುಮಕೂರು, ಮೈಸೂರು, ಬಾಗಲಕೋಟೆ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಜಲಾಶಯಗಳಿಗೆ ಒಳಹರಿವು ಕೂಡ ಕಡಿಮೆಯಾಗಿದೆ. ಕೃಷ್ಣರಾಜಸಾಗರ ಜಲಾಶಯದ ಒಳಹರಿವು 4117 ಕ್ಯೂಸೆಕ್ಗೆ ಇಳಿದಿದೆ, ತುಂಗಭದ್ರಾ ಜಲಾಶಯದ ಒಳಹರಿವು 21492 ಕ್ಯೂಸೆಕ್ನಷ್ಟಿದೆ. ಆಲಮಟ್ಟಿ ಜಲಾಶಯಕ್ಕೆ 96054 ಕ್ಯೂಸೆಕ್ ನೀರು ಹರಿದುಬರುತ್ತಿದ್ದು 113.27 ಟಿಎಂಸಿ ನೀರು ಸಂಗ್ರಹವಾಗಿದೆ.












Click it and Unblock the Notifications