ಬೆಂಗಳೂರಿನಲ್ಲಿ ಪಕ್ಕದ ಮನೆಯವನಿಂದಲೇ ಅತ್ಯಾಚಾರ
ಬೆಂಗಳೂರು, ನ. 8: ಕರ್ನಾಟಕದಲ್ಲಿನ ವಿವಿಧ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದು.
ಸಮಯ 4 ಗಂಟೆ: ಬೆಂಗಳೂರಿನ ಹೆಸರುಘಟ್ಟದ ಕುಂದಘಟ್ಟದಲ್ಲಿ ಅಪ್ರಾಪ್ತೆ ಮೇಲೆ ಪಕ್ಕದ ಮನೆಯಾತನಿಂದಲೇ ಅತ್ಯಾಚಾರ ನಡೆದಿದೆ. ಆರೋಪಿ ರಾಮಮೂರ್ತಿಯನ್ನು ಬಂಧಿಸಿದ್ದು ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮಯ 2 ಗಂಟೆ: 82 ವರ್ಷವಾದರೂ ಎಂದಿಗೂ ಹುಡುಗಾಟದ ರಾಜಕಾರಣ ಮಾಡಿಲ್ಲ. ನಾನು ಜೆಡಿಎಸ್ ಕಟ್ಟಿ ಬೆಳೆಸುವ ಬಗ್ಗೆ ಯೋಚಿಸುತ್ತಿದ್ದೇನೆ. ಪಕ್ಷ ತೊರೆದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ತೀರ್ಮಾನಗಳು ಅವರವರಿಗೆ ಬಿಟ್ಟಿದ್ದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೆಂಗಳೂರಲ್ಲಿ ಹೇಳಿದರು.[ಜೆಡಿಎಸ್ ಬಿಟ್ಟು ಹೋಗುವವರು ಸಂತೋಷದಿಂದ ಹೋಗಿ]
ಸಮಯ 11.20ಗಂಟೆ: ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿಗೆ ಉಪಲೋಕಾಯುಕ್ತ ಸುಭಾಷ್.ಬಿ. ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಮಳೆ ನೀರು ನಿರ್ವಹಣೆ ಸಂಬಂಧ ನೋಟಿಸ್ ನೀಡಿದ್ದು ಬಜೆಟ್ ನಲ್ಲಿ ಮೀಸಲಿಟ್ಟ ಹಣ ಏನಾಯಿತು? ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಹಣ ಖರ್ಚಾಗಿದೆ? ಈ ವರೆಗೆ ನಡೆದಿರುವ ಕಾಮಗಾರಿಗಳಾವವು? ಎಂಬ ವಿವರವನ್ನು ನವೆಂಬರ್ 20 ರೊಳಗೆ ನೀಡುವಂತೆ ತಿಳಿಸಿದ್ದಾರೆ.
ಸಮಯ 10 ಗಂಟೆ: 50 ರೂಪಾಯಿ ಸಿಗರೇಟ್ ಬಾಕಿ ಕೇಳಿದಕ್ಕೆ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿದ್ದಾನೆ. ತೂಮಕೂರು ಜಿಲ್ಲೆಯ ಗೋವಿಂದನಗರ ಬಳಿ ಘಟನೆ ನಡೆದಿದೆ. ಸಿಗರೇಟ್ ಬಾಕಿ 50 ರೂ. ಕೇಳಿದ ಚಿಲ್ಲರೆ ವ್ಯಾಪಾರಿ ಕುಮಾರ್(35) ಎಂಬುವರನ್ನು ಅನಿಲ್ ಎಂಬಾತ ಚಾಕುವಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಮಯ 8 ಗಂಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಲ್ಲಿ ರೌಡಿ ಶೀಟರ್ ಮದನ್ (24)ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾತ್ರಿ ಸ್ನೇಹಿತರೊಂದಿಗೆ ಮದನ್ ಪಾರ್ಟಿ ನಡೆಸಿದ್ದ. ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಆರೋಪಿಗಳು ಸುಣಾವರದ ಬಳಿ ಶವ ಎಸೆದು ಪರಾರಿಯಾಗಿದ್ದರು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಮದನ್ ವಿರೋಧಿಗಳು ಸ್ನೇಹಿತರನ್ನೇ ಎತ್ತಿ ಕಟ್ಟಿ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ. ಈತನ ಮೇಲೆ ಆನೆಕಲ್ ಠಾಣೆಯಲ್ಲಿ ಪ್ರಕರಣ ಅನೇಕ ಪ್ರಕರಣಗಳು ದಾಖಲಾಗಿದ್ದವು.
ಸಮಯ 6 ಗಂಟೆ: ಬೆಂಗಳೂರು ಎಚ್ ಎಎಲ್ ಅನ್ನಸಂದ್ರ ಪಾಳ್ಯದಲ್ಲಿ 11 ಬೈಕ್ 1 ಕಾರಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಘಟನೆಯಲ್ಲಿ ಬೈಕ್ ಮತ್ತು ಕಾರು ಸಂಪೂರ್ಣ ಸುಟ್ಟು ಕರಕಲಾಗಿವೆ. ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.