ಪ್ರಧಾನಿ ಮೋದಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಕನಸಿಗೆ ಕರ್ನಾಟಕದಿಂದ 1.5 ಟ್ರಿಲಿಯನ್ ಕೊಡುಗೆ: ಸಿಎಂ
ಬೆಂಗಳೂರು, ಮಾರ್ಚ್ 15: ಸಮಗ್ರ ಆರ್ಥಿಕ ಬೆಳಣಿಗೆಯಲ್ಲಿ 2025 ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯ ವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಕರ್ನಾಟಕ ವಿಷನ್ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ 1.5 ಟ್ರಿಲಿಯನ್ ಡಾಲರ್ಗಳ ಕೊಡುಗೆ ಕರ್ನಾಟಕ ನೀಡಲಿದೆ ಎನ್ನುವ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.
ಜೆಡಿಪಿ ದುಪ್ಪಟ್ಟಾಗಿ ಬೆಳೆಯಲಿದೆ. ವಿತ್ತೀಯ ಶಿಸ್ತು ನಿರ್ವಹಣೆ, ಆರ್ಥಿಕತೆಯ ಬೆಳವಣಿಗೆ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯಗಳಲ್ಲಿ ಒಟ್ಟಾರೆ ಬೆಳವಣಿಗೆಯಾಗಲಿದೆ. ಪರಸ್ಪರ ಅವಲಂಬಿತವಾಗಿರುವ ಆರ್ಥಿಕತೆಯನ್ನು ಸಕಾರಾತ್ಮಕವಾಗಿ ಬಳಸಬೇಕು ಎಂದರು.

ಆರ್ಥಿಕ ಬೆಳವಣಿಗೆಗೆ ಒತ್ತು
ಈ ಬಾರಿಯ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆಗೆ ಮಹತ್ವ ನೀಡಲಾಗಿದೆ. ಬಜೆಟ್ ಗಾತ್ರದಲ್ಲಿ 19000 ಕೋಟಿ ಹೆಚ್ಚಳವಾಗಿದೆ. ಇದನ್ನು ತಜ್ಞರೂ ನಿರೀಕ್ಷಿಸಿರಲಿಲ್ಲ. ಚುನಾವಣಾ ವರ್ಷವಾಗಿರುವುದರಿಂದ ಉಚಿತ ಕೊಡುಗೆಗಳಿರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ರಾಜ್ಯಕ್ಕೆ ಸಹಾಯ ಮಾಡುವವರಿಗೆ ನಾವು ಸಹಾಯ ಮಾಡಿದ್ದೇವೆ. ಬಿಸಿಲಿನಲ್ಲಿ ದುಡಿಯುವವರಿಗೆ ನಾವು ಸಹಾಯ ಹಸ್ತ ಚಾಚಿದ್ದೇವೆ ಎಂದರು.

ಆರ್ಥಿಕತೆಗೆ ಶಕ್ತಿ ತುಂಬಲು ರಸ್ತೆ, ರೈಲು, ವಿಮಾನನಿಲ್ದಾಣಗಳು, ಬಂದರುಗಳು ಸೇರಿದಂತೆ ಕೈಗಾರಿಕೆಗಳಿಗೆ ಬಹುದೊಡ್ಡ ಅವಕಾಶ ನೀಡಲಾಗಿದೆ. ಧಾರವಾಡ ಮತ್ತು ತುಮಕೂರಿನಲ್ಲಿ ವಿಶೇಷ ಹೂಡಿಕೆ ಪ್ರದೇಶ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಫುಡ್ ಪಾರ್ಕ್ , ಚೈನ್ನೈ,- ಮುಂಬೈ ಕಾರಿಡಾರ್ ನಿರ್ಮಾಣ, ಬಿಜಾಪುರ, ಗುಲ್ಬರ್ಗಾ ದಲ್ಲಿ ಜವಳಿ ಪಾರ್ಕ್, ಇವುಗಳೆಲ್ಲ ಸಧೃಢ ಆರ್ಥಿಕತೆಗೆ ಭದ್ರ ಬುನಾದಿಯಾಗಲಿವೆ ಎಂದರು.
ಅಭಿವೃದ್ಧಿಯಲ್ಲಿ ಸಮಾನತೆ
ಅಭಿವೃದ್ಧಿಯಲ್ಲಿ ಸಮಾನತೆ ಇದ್ದಾಗ ಮಾತ್ರ ಆರ್ಥಿಕತೆ ಬೆಳೆಯುತ್ತದೆ. ಬೆಂಗಳೂರಿನ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗಿದೆ. ಪೆರಿಫೆರಲ್ ರಿಂಗ್ ರೋಡ್ ಗೆ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಎಲ್ಲಾ ನಗರಗಳ ರಿಂಗ್ ರೋಡ್ ಗಳಿಗೆ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಎಸ್.ಟಿ.ಆರ್.ಆರ್ ದಾಬಸ್ಪೇಟೆ ಯಿಂದ ಚೆನ್ನೈ ಹಾಗೂ ಮೈಸೂರು ರಸ್ತೆವರೆಗೆ ವಿಸ್ತರಣೆಯಾಗಲಿದೆ. ಮೆಟ್ರೋ ವಿಸ್ತರಣೆ ಯಾಗಲಿದೆ. ಸಬ್ಅರ್ಬನ್ ರೈಲ್ವೆ ಯೋಜನೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ನಮ್ಮ ಸರ್ಕಾರ ಭವಿಷ್ಯದ ಆರ್ಥಿಕತೆಗೆ ಬುನಾದಿ ಹಾಕುತ್ತಿದೆ. ಇದು ಜನಪರ ಸರ್ಕಾರವಾಗಿದೆ ಎಂದರು.
ಸಚಿವರಾದ ಡಾ ಕೆ.ಸುಧಾಕರ್, ಬಿ.ಎ. ಬಸವರಾಜ, ಎಫ್ ಕೆಸಿಸಿಐ ಅಧ್ಯಕ್ಷ ಡಾ ಐ.ಎಸ್.ಪ್ರಸಾದ್ ಉಪಸ್ಥಿತರಿದ್ದರು.












Click it and Unblock the Notifications