ರಾಜ್ಯದಲ್ಲಿ ತೃತೀಯ ಭಾಷೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ', ಆದರೆ ಕೇಂದ್ರದಿಂದ ಕಡ್ಡಾಯದ ಹೊಸ ಆದೇಶ : ರಾಜೀವ ಹೆಗಡೆ ಬರಹ
ಶಿಕ್ಷಣ ವಲಯದಲ್ಲಿ ಭಾಷಾ ನೀತಿಯ ಕುರಿತು ಕಳೆದೊಂದು ವಾರದಲ್ಲಿ ಎರಡು ವಿಭಿನ್ನ ಆದೇಶಗಳು ಹೊರಬಿದ್ದಿವೆ. ಒಂದೆಡೆ ಕರ್ನಾಟಕ ಸರ್ಕಾರವು ತೃತೀಯ ಭಾಷೆಯನ್ನು ಕೇವಲ ಗ್ರೇಡಿಂಗ್ಗೆ ಸೀಮಿತಗೊಳಿಸಿ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬಂತೆ ಮಾಡಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರವು ಸಿಬಿಎಸ್ಇ (CBSE) ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದೆ. ಇವೆರಡರಲ್ಲಿ ಯಾವುದು ಸರಿ, ತಪ್ಪು ಎಂಬುದನ್ನು ನಾಗರಿಕರು ಹಾಗೂ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತು ಎದುರಾಗಿದೆ ಎಂದು ರಾಜೀವ ಹೆಗಡೆ ತಮ್ಮ ಬರಹದಲ್ಲಿ ತೀಕ್ಷ್ಣವಾಗಿ ವಿಶ್ಲೇಷಿಸಿದ್ದಾರೆ.
ಕರ್ನಾಟಕ ಶಿಕ್ಷಣ ಇಲಾಖೆಯನ್ನು ನಡೆಸುತ್ತಿರುವ 'ಘನತೆʼವೆತ್ತ ಸಚಿವರು ಹೊರಡಿಸಿದ ಆದೇಶದ ಪ್ರಕಾರ ರಾಜ್ಯದಲ್ಲಿನ್ನು ತೃತೀಯ ಭಾಷೆಯು 'ಆಟಕ್ಕುಂಟು ಲೆಕ್ಕಕ್ಕಿಲ್ಲʼ ಎನ್ನುವಂತಾಗಿದೆ. ಈ ಆದೇಶದಿಂದ ಒಂದಿಷ್ಟು ಗೊಂದಲಗಳು ಹಾಗೇ ಉಳಿದಿವೆ. ಉರ್ದು, ಮರಾಠಿ, ಹಿಂದಿ, ತೆಲುಗು, ತಮಿಳು ಮಾಧ್ಯಮದಲ್ಲಿ ಓದುವ ಕರ್ನಾಟಕದಲ್ಲಿನ ಮಕ್ಕಳ ದ್ವಿತೀಯ ಭಾಷೆ ಯಾವುದಾಗಲಿದೆ ಎನ್ನುವ ಗೊಂದಲವಿದೆ. ಒಂದೊಮ್ಮೆ ಇವರ ದ್ವಿತೀಯ ಭಾಷೆ ಕನ್ನಡವಾದರೆ, ಈ ಮಕ್ಕಳು ಇಂಗ್ಲಿಷ್ನಿಂದ ದೂರವಾಗುವ ಅಪಾಯವಿದೆ. ಪಾಲಕರ ಒತ್ತಡಕ್ಕೆ ಮಣಿದು ಇಂಗ್ಲಿಷ್ ಕೊಟ್ಟರೆ, ಕನ್ನಡ ಮಾಯವಾಗಬಹುದು. ಅದರ ಜೊತೆಗೆ ವಿಶೇಷವಾಗಿ ನಮ್ಮ ನಾಡಿನೊಂದಿಗೆ ನಂಟಿದ್ದು ತೃತೀಯ ಭಾಷೆಯಾಗಿರುವ ಸಂಸ್ಕೃತ, ಕೊಂಕಣಿ ಹಾಗೂ ತುಳು ಭಾಷೆಗಳು ಕೂಡ 'ಆಟಕ್ಕುಂಟು ಲೆಕ್ಕಕ್ಕಿಲ್ಲʼ ಎನ್ನುವ ಪಟ್ಟಿಗೆ ಸೇರಿದೆ. ಇದರೊಂದಿಗೆ ಕನ್ನಡ ಭಾಷೆಯ 'ಅಭಿಮಾನ'ವು ನಮ್ಮದೇ ನಾಡಿನ ಉಳಿದ ಭಾಷೆಗಳನ್ನು ಸಾಯಿಸುತ್ತಿದೆ.

ಕರ್ನಾಟಕದ ಶಿಕ್ಷಣ ಸಚಿವರ ಆದೇಶದ ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿನ ಸಿಬಿಎಸ್ಇ ಕಡೆಯಿಂದ ಇನ್ನೊಂದು ಸುತ್ತೋಲೆ ಬಂದಿದೆ. ಆ ಪ್ರಕಾರ ದೇಶದಲ್ಲಿನ ಎಲ್ಲ ಸಿಬಿಎಸ್ಇ ಶಾಲೆಗಳು ಕಡ್ಡಾಯವಾಗಿ ಮೂರು ಭಾಷೆಗಳನ್ನು ಹೊಂದಬೇಕಿದೆ. ಆ ಮೂರು ಭಾಷೆಗಳಲ್ಲಿ ಕಡ್ಡಾಯವಾಗಿ ಎರಡು ಭಾಷೆಗಳು ಪ್ರಾದೇಶಿಕ ಭಾಷೆಗಳೇ ಆಗಿರಬೇಕು. ಒಂದು ವಿದೇಶಿ ಭಾಷೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಇಂಗ್ಲಿಷ್ ಕೂಡ ವಿದೇಶಿ ಭಾಷೆಯ ಪಟ್ಟಿಯಲ್ಲಿದೆ. ಅಂದ್ಹಾಗೆ ಎರಡು ಪ್ರಾದೇಶಿಕ ಭಾಷೆಗಳಲ್ಲಿ ಒಂದು ಕಡ್ಡಾಯವಾಗಿ ಹಿಂದಿ ಇರಬೇಕು ಎನ್ನುವ ಯಾವುದೇ ಹೇರಿಕೆಯು ಆದೇಶದಲ್ಲಿಲ್ಲ.
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ
ಪ್ರದೇಶವಾರು ಲಭ್ಯತೆ ಮೇರೆಗೆ ಈ ಆಯ್ಕೆಯನ್ನು ಮಾಡಬಹುದು. ಉದಾಹರಣೆಗೆ ಕನ್ನಡ ಪ್ರೇಮಿ ಡಿ.ಕೆ ಶಿವಕುಮಾರ್ ಕುಟುಂಬದ ಒಡೆತನದ ಶಾಲೆಯಲ್ಲಿ ಎರಡು ಪ್ರಾದೇಶಿಕ ಭಾಷೆಯಲ್ಲಿ ಕನ್ನಡ ಹಾಗೂ ತಮಿಳು/ತೆಲುಗು/ಮಲಯಾಳಂ ಕೂಡ ಕಲಿಸಲು ಅವಕಾಶ ಕೊಡಬಹುದು. ಆದರೆ ಈ ರೀತಿಯ ಪ್ರಾದೇಶಿಕ ಭಾಷಾ ಪ್ರೇಮವನ್ನು ತೋರಿಸಲು ಆಯಾ ರಾಜ್ಯ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಶಿಕ್ಷಣ ಮಾಫಿಯಾ ನಡೆಸುತ್ತಿರುವ ರಾಜಕಾರಣಿಗಳ ಶಾಲೆಗಳು ಯಾವ ಮಟ್ಟದಲ್ಲಿ ಭಾಷಾ ಪ್ರೇಮವನ್ನು ತೋರಿಸಲಿವೆ ಎನ್ನುವುದು ಗೊತ್ತಾಗಲಿದೆ.
ಅಂದ್ಹಾಗೆ ಈ ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿ ಕರ್ನಾಟಕದ ಹಾಲಿ ಸರ್ಕಾರದ ನಿಲುವಿಗೆ ವ್ಯತಿರಿಕ್ತವಾಗಿ ಎರಡು ಅಂಶಗಳಿವೆ. ಮೊದಲನೇಯದ್ದಾಗಿ, ಮೂರು ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣವಾಗದಿದ್ದರೆ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲು ಅವಕಾಶವೇ ಸಿಗುವುದಿಲ್ಲ. ಆದರೆ ಬುದ್ಧಿವಂತರ ನಾಡು ಕರ್ನಾಟಕದಲ್ಲಿ ತೃತೀಯ ಭಾಷೆಯ ಅಂಕವನ್ನೇ ಪರಿಗಣಿಸುವುದಿಲ್ಲ. ಇದರೊಟ್ಟಿಗೆ ಇನ್ನೊಂದು ದಶಕದ ಹಳೆಯ ವಾದವೊಂದಕ್ಕೆ ಕೇಂದ್ರ ಸರ್ಕಾರ ತಿಲಾಂಜಲಿ ಇರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೇ ಈ ಬಗ್ಗೆ ಸ್ಪಷ್ಟನೆಯಿದ್ದರೂ, ಅದನ್ನು ಒಪ್ಪಿಕೊಳ್ಳಲು ʼಭಾಷಾ ಅಭಿಮಾನಿಗಳುʼ ತಯಾರಿರಲಿಲ್ಲ. ಹೊಸ ಆದೇಶದ ಮೂಲಕ ಈಗ ಸ್ಪಷ್ಟನೆ ದೊರೆತಿದೆ. ತ್ರಿಭಾಷಾ ಸೂತ್ರದ ಬಗ್ಗೆ ಚರ್ಚೆ ನಡೆದಾಗಲೆಲ್ಲ, ಉತ್ತರ ಭಾರತದಲ್ಲಿ ದ್ವಿ ಭಾಷಾ ನೀತಿಯಿದೆ ಎನ್ನುವ ಸಮರ್ಥನೆ ಹಾಗೂ ಟೀಕೆಗಳು ಬರುತ್ತಿದ್ದವು. ಆದರೀಗ ಕೇಂದ್ರ ಸರ್ಕಾರವು ದೇಶದ ಎಲ್ಲ ಸಿಬಿಎಸ್ಇ ಶಾಲೆಗಳಿಗೆ ಈ ನಿಯಮ ಕಡ್ಡಾಯ ಮಾಡಿದೆ. ಹೀಗಾಗಿ ಇನ್ನು ಎಡಚರರ ಹಳಸಲು ವಾದಕ್ಕೆ ಬೆಲೆ ಇರಲಾರದು.
ಎಲ್ಲರೂ ಮರೆತ ವಿಚಾರಕ್ಕೆ ಬರೋಣ!
ಭಾಷೆ ರಕ್ಷಣೆ ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ, ನಾವು ಜನಸಾಮಾನ್ಯರು ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿ, ಕಾಂಗ್ರೆಸ್ಗೆ ಬೈದುಕೊಂಡಿರೋಣ ಎನ್ನುವ ಲೆಕ್ಕಾಚಾರದಲ್ಲಿರುತ್ತೇವೆ. ಆದರೆ ಭಾಷಾ ಪ್ರೇಮಿಗಳು ಸೊಲ್ಲೆತ್ತದ ಕನ್ನಡ ಪರವಾದ ಸುತ್ತೋಲೆಯೊಂದಕ್ಕೆ ಧೂಳು ಹಿಡಿದಿದೆ. ಯಾವುದೇ ಭಾಷಾಭಿಮಾನಿಗಳು ಆ ಸುತ್ತೋಲೆ ಇರಿಸಿಕೊಂಡು ಪ್ರತಿಭಟನೆ ನಡೆಸಿದ್ದು ಕಾಣಿಸಲಿಲ್ಲ. ಆ ಸುತ್ತೋಲೆಯ ಪ್ರಕಾರ ಐದನೇ ತರಗತಿವರೆಗೆ ಕಡ್ಡಾಯವಾಗಿ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಕಲಿಕಾ ಮಾಧ್ಯಮವಿರಬೇಕು. ಅಂದರೆ ಡಿಕೆಶಿ ಕುಟುಂಬದ ಸಿಬಿಎಸ್ಇ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಐದನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿಸಬೇಕು. ಹಾಗೆಯೇ ಐದನೇ ತರಗತಿವರೆಗೆ ತೃತೀಯ ಭಾಷೆ ಕೂಡ ಇರುವುದಿಲ್ಲ.
ಕನ್ನಡ ರಕ್ಷಣೆಯ ಗುತ್ತಿಗೆ ಪಡೆದವರ ವಾದಕ್ಕೆ ಸರಿ ಹೊಂದಬೇಕಿದ್ದ ಪ್ರಕರಣವಿದು. ಆದರೆ ಇಲ್ಲಿ ಇರಬೇಕಿದ್ದ ಭಾಷಾ ಪ್ರೇಮವು ಮಾಯವಾಗಿತ್ತು. ಕರ್ನಾಟಕದಲ್ಲಿ ಪಕ್ಷಾತೀತವಾಗಿ ಹಲವಾರು ರಾಜಕಾರಣಿಗಳ ಕುಟುಂಬವು ಸಿಬಿಎಸ್ಇ ಶಾಲೆಗಳನ್ನು ನಡೆಸುತ್ತಿದೆ. ನಿಜವಾಗಿಯೂ ಭಾಷೆಯ ಮೇಲೆ ಕಾಳಜಿಯಿದ್ದರೆ, ʼಕನ್ನಡ, ಕನ್ನಡʼ ಎಂದು ವಸೂಲಿ ಮಾಡುವವರೆಲ್ಲ ಹೋಗಿ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಧ್ವನಿಯೆತ್ತಲಿ ನೋಡೋಣ. ಅಷ್ಟೇಕೆ ನಮ್ಮ ʼಬುದ್ಧಿವಂತʼ ಶಿಕ್ಷಣ ಸಚಿವರು ಈ ಬಗ್ಗೆ ಚಕಾರ ಎತ್ತಿದರೆ ಅವರನ್ನು ʼಅಯೋಗ್ಯʼ ಸಚಿವರಲ್ಲ ಎಂದು ನಾವೆಲ್ಲ ನಂಬಬಹುದು. ಹಾಗೆಯೇ ಕನ್ನಡ ಓದಲು ಬಾರದಿದ್ದರೆ ಏನಾಯಿತು, ಓದಲು ಕಲಿಸುವ ಆಸಕ್ತಿಯಿದೆ ಎನ್ನುವುದು ಸಾಬೀತಾಗುತ್ತಿತ್ತು.
ಕೊನೆಯದಾಗಿ: ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ ಎಂದು ಪಠ್ಯವನ್ನು ಸುಲಭ ಮಾಡಲಾಯಿತು. ಉತ್ತೀರ್ಣರಾಗುವವರ ಸಂಖ್ಯೆ ಹೆಚ್ಚಿಸಲು ಪರೀಕ್ಷೆ ಸರಳವಾಗಿಸಲಾಯಿತು. ಯಾವುದೋ ಒಂದು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲಾಗಲಿಲ್ಲ ಎನ್ನುವ ನೆಪ ಆಧರಿಸಿ, ವರ್ಷಕ್ಕೆ ಮೂರು ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು. ಈಗ ಮಕ್ಕಳಿಗೆ ಕಷ್ಟವಾಗುತ್ತಿದೆ ಎನ್ನುವ ಕಾರಣ ನೀಡಿ ಒಂದು ಭಾಷೆಯನ್ನು ʼಆಟಕ್ಕುಂಟು ಲೆಕ್ಕಕ್ಕಿಲ್ಲʼ ಎನ್ನುವ ಪಟ್ಟಿಗೆ ಸೇರಿಸಲಾಯಿತು. ಗಣಿತ, ವಿಜ್ಞಾನವು ಅರ್ಧಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದೆ ಎನ್ನುವುದನ್ನು ಶಿಕ್ಷಣ ಸಚಿವರ ಕಿವಿಗೆ ಯಾವುದೇ ವಿದ್ಯಾರ್ಥಿಗಳ ಹಿತ ರಕ್ಷಣಾ ಸಮಿತಿಯವರು ಹಾಕಿಲ್ಲ ಎನಿಸುತ್ತದೆ. ಸ್ವಂತ ಅನುಭವವೂ ಇರುವುದರಿಂದ ಈ ರೀತಿಯ ಅರ್ಜಿಗಳು ಬಂದರೆ ಖಂಡಿತ ಕ್ರಮವಹಿಸಬಹುದು. ಇಂತಹ ಅಪಘಾತಗಳಿಂದ ಸಚಿವರನ್ನು ಕಾಪಾಡಲು ಒಂದು ಎನ್ಎಸ್ಜಿ ಪಡೆಯನ್ನು ಕಟ್ಟುವ ತುರ್ತು ಅನಿವಾರ್ಯತೆಯಿದೆ.
-
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
ಏಪ್ರಿಲ್ 8ಕ್ಕೆ ದ್ವಿತೀಯ PUC ಫಲಿತಾಂಶ? ಶಿಕ್ಷಣ ಇಲಾಖೆಯ ಮಹತ್ವದ ಅಪ್ಡೇಟ್ ಇಲ್ಲಿದೆ -
SSLC ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್: ಸರ್ಕಾರದ ದಿಢೀರ್ ನಿರ್ಧಾರಕ್ಕೆ ಖಾಸಗಿ ಶಾಲೆಗಳ ತೀವ್ರ ವಿರೋಧ -
ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ: NCERTಗೆ 'ಡೀಮ್ಡ್ ಯೂನಿವರ್ಸಿಟಿ' ಸ್ಥಾನಮಾನ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications