ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ!
ಕನ್ನಡ ಹಾಗೂ ಕನ್ನಡಿಗರೇ ಹಾಗೆ, ಕನ್ನಡ ಭಾಷೆ ಇತಿಹಾಸ & ಕನ್ನಡಿಗರ ಸ್ನೇಹಮಯಿ ಗುಣವನ್ನು ಇಡೀ ಜಗತ್ತು ಎಂದಿಗೂ ಮರೆಯುವುದಿಲ್ಲ. ಆದರೂ ಸ್ವಾತಂತ್ರ್ಯ ಪೂರ್ವದಲ್ಲಿ ಅಂದ್ರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಹರಿದು ಹಂಚಿ ಹೋಗಿತ್ತು ಕನ್ನಡಿಗರ ಈ ನೆಲ. ಹೀಗಿದ್ದಾಗ ಕನ್ನಡಿಗರನ್ನೆಲ್ಲ ಒಗ್ಗೂಡಿಸಿದ್ದು ಕರ್ನಾಟಕ ಏಕೀಕರಣ ಚಳುವಳಿ, ಹೀಗೆ ಕನ್ನಡಿಗರ ಏಕೀಕರಣ ಚಳುವಳಿ ನಡೆದು ಕರ್ನಾಟಕ ಸ್ಥಾಪನೆಯಾಗಿ 50 ವರ್ಷ ಕಳೆದಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರ ಕನ್ನಡಿಗರ ಈ ಸಂಭ್ರಮವನ್ನ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಿದೆ. ಒಂದು ದಿನವಲ್ಲ ಬರೋಬ್ಬರಿ ಒಂದು ವರ್ಷ ಕಾಲ ಈ ಸಂಭ್ರಮ ಕನ್ನಡ ನಾಡಿನಲ್ಲಿ ಮೇಳೈಸಲಿದೆ. ಇಂದು ಲಾಂಛನ ಬಿಡುಗಡೆ ಸಮಾರಂಭದಲ್ಲಿ ಡಿಸಿಎಂ ಕನ್ನಡಿಗರ ಇತಿಹಾಸ ನೆನೆದರು. ಅಲ್ಲದೆ, ಕನ್ನಡ ನೆಲದ ಇತಿಹಾಸದ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸಿದರು. ಈ ಮಧ್ಯೆ ಲಾಂಛನ ರೂಪಿಸಿದ ಸಾಧಕನಿಗೆ ಭರ್ಜರಿ ಬಹುಮಾನ ಕೂಡ ಘೋಷಣೆ ಮಾಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ, ಕರ್ನಾಟಕ ರಾಜ್ಯದ ಪಾಲಿಗೆ ಇಂದು ಐತಿಹಾಸಿಕ ದಿನ. ದೇವರು ನಮಗೆ 2 ಆಯ್ಕೆ ಮಾತ್ರ ನೀಡಿದ್ದಾನೆ. 1 ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಅದೇ ರೀತಿ ದೇವರಾಜ ಅರಸು ಅವರು 50 ವರ್ಷದ ಹಿಂದೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸ್ರನ್ನ ಕೊಟ್ಟಿದ್ದಾರೆ. ಅವರನ್ನ ಸ್ಮರಿಸಿ ಇಂದು ಈ ಕಾರ್ಯಕ್ರಮ ಆಚರಣೆ ಮಾಡುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು. ಅಲ್ಲದೆ ಇದೇ ವೇಳೆ ವಿಶ್ವಮಾನವ ಕುವೆಂಪು ಅವರ ಪದ್ಯದ ಸಾಲುಗಳನ್ನ ನೆನಪಿಸಿ, ಕನ್ನಡಿಗರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ರು.
ಅವಕಾಶ ಸಿಕ್ಕಿದ್ದೇ ನಮ್ಮ ಸೌಭಾಗ್ಯ!
ಅಮ್ಮ ಕೊಟ್ಟಿರುವುದು ಜನ್ಮ, ದೇವರು ಕೊಟ್ಟಿದ್ದು ಬುದ್ಧಿ, ಗುರುಗಳು ಕೊಟ್ಟಿರುವುದು ವಿದ್ಯೆ ಯಾರು ಕೊಡದೆ ನಮಗೆ ಸಿಕ್ಕಿರುವುದು ಕನ್ನಡ ನಾಡು. ಈ ನಾಡಲ್ಲಿ ನಾವು ಉಸಿರಾಡುತ್ತಿದ್ದೇವೆ ಎಂದರು ಡಿಸಿಎಂ. ಅಲ್ಲದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 'ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ' ಎಂದು ಹೇಳಿದ್ದಾರೆ. ಇಂದು ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ, ಸಚಿವ ಶಿವರಾಜ ತಂಗಡಗಿ ಅವರ ನೇತತ್ವದಲ್ಲಿ ಈ ಸಂಭ್ರಮಾ ಆಚರಣೆ ಮಾಡುವ ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು ಡಿಸಿಎಂ ಡಿ.ಕೆ. ಶಿವಕುಮಾರ್.

ಕರ್ನಾಟಕ ಎಂಬುದು ಬರೀ ಹೆಸರೇ ಮಣ್ಣಿಗೆ
ಮಂತ್ರ ಕಣಾ, ಶಕ್ತಿ ಕಣಾ
ತಾಯಿ ಕಣಾ, ದೇವಿ ಕಣಾ
ಬೆಂಕಿ ಕಣಾ, ಸಿಡಿಲು ಕಣಾ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು!
ಕನ್ನಡಕ್ಕಾಗಿ ಕೈ ಎತ್ತು
ನಿನ್ನ ಕೈ ಕಲ್ಪವೃಕ್ಷವಾಗುವುದು
ಕನ್ನಡಕ್ಕಾಗಿ ಕೊರಳೆತ್ತು
ಪಾಂಚಜನ್ಯ ಮೊಳಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ
ಅದೇ ಗೋವರ್ದನ ಗಿರಿಯಾಗುತ್ತದೆ.
ಹಳ್ಳಿ ಹಳ್ಳಿಯಲ್ಲೂ ಮೊಳಗಲಿ ಕನ್ನಡ
ಎಂದು ವಿಶ್ವಮಾನವ ಕುವೆಂಪು ಅವರು ನಮಗೆ ಮಹತ್ವದ ಸಂದೇಶ ನೀಡಿದ್ದಾರೆ. ಇಡೀ ವರ್ಷ ಈ ಸಂಭ್ರಮಾಚರಣೆ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇದು ಸರ್ಕಾರದ ಕಾರ್ಯಕ್ರಮದ ಜತೆ ಜನರ ಕಾರ್ಯಕ್ರಮ ಆಗಬೇಕು. ಬೆಳಗಾವಿಯಿಂದ ಚಾಮರಾಜನಗರ ತನಕ ರಾಜ್ಯದಲ್ಲಿ ಪ್ರತಿ ಹಳ್ಳಿಯಲ್ಲೂ ಯುವ ಪೀಳಿಗೆ ಈ ಸಂಭ್ರಮ ಆಚರಿಸಬೇಕು. ಅಲ್ಲದೆ ನವೆಂಬರ್ 1ರಿಂದ ಈ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಲಾಗಿದ್ದು, ನಾವೆಲ್ಲರೂ ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿದ್ದೇವೆ.
1 ಲಕ್ಷ ರೂಪಾಯಿ ಬಹುಮಾನ!
ಇನ್ನು, ವಿಶೇಷ ಲಾಂಛನ ರೂಪಿಸಿದ ಹುಡುಗನಿಗೆ ಸಚಿವರು 25 ಸಾವಿರ ಬಹುಮಾನ ಮೊತ್ತ ಘೋಷಿಸಿದ್ದಾರೆ. ಆದರೆ 25 ಸಾವಿರದ ಕಾಲ ಹೋಯಿತು. ಹೀಗಾಗಿಯೇ ಪಾಲಿಕೆ ವತಿಯಿಂದ ನಾವು 1 ಲಕ್ಷವನ್ನ ಬಹುಮಾನವಾಗಿ ನೀಡ್ತೇವೆ. ಯುವಕರಿಗೆ ನಾವು ಪ್ರೋತ್ಸಾಹ ನೀಡಬೇಕು. ಈ ವರ್ಷ ರಾಜ್ಯಕ್ಕೆ ಉತ್ತಮವಾಗಿ ಮಳೆ ಬೆಳೆ ಆಗಿ, ಎಲ್ಲರೂ ನೆಮ್ಮದಿಯಾಗಿ ಬದುಕುವಂತಾಗಲಿ ಎಂದು ನಾನು ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ ಎಂದು ಡಿಸಿಎಂ ತಿಳಿಸಿದರು.












Click it and Unblock the Notifications