KSRTC Bus Shortage: ಬಸ್ಗಳ ತೀವ್ರ ಕೊರತೆ ಸಮಸ್ಯೆ ಎದುರಿಸುತ್ತಿರುವ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು
ಬೆಂಗಳೂರು, ಜನವರಿ 04: ರಾಜ್ಯದ ವಿವಿಧೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯ ಬಸ್ಗಳ ಕೊರತೆ ಇದೆ. ಇದರಿಂದ ರಾಜ್ಯದಾದ್ಯಂತ ಪ್ರಯಾಣಿಕರ ಜೊತೆಗೆ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಭಾಗದವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ಕೆಎಸ್ಆರ್ಟಿಸಿ ನಿಗಮದಲ್ಲಿ ಸಿಬ್ಬಂದಿ ಕೊರತೆ , ಸಾಮಾನ್ಯ ಬಸ್ಗಳ ಅಲಭ್ಯತೆ ಹಾಗೂ ಅಸಮರ್ಪಕ ಸೇವೆಯನ್ನು ಹೆಚ್ಚಾಗ ಗ್ರಾಮೀಣ ಭಾಗಗಳಲ್ಲಿ ಕಾಣಬಹುದಾಗಿದೆ. ಶಿಕ್ಷಣ ಸಂಸ್ಥೆಗಳಿರುವ ನಿಗದಿತ ಸ್ಥಳಗಳಲ್ಲಿ ಬಸ್ಗಳನ್ನು ನಿಲುಗಡೆ ಮಾಡದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಅಲ್ಲದೇ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಕೆಲವು ನಿರ್ವಾಹಕರು ಬಸ್ ಒಳಗೆ ಹತ್ತಲು ಬಿಡದಿರುವ ಪ್ರಸಂಗಗಳು ನಡೆದಿವೆ. ನಗದು ನೀಡಿ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ಸಿಬ್ಬಂದಿ ಆದ್ಯತೆ ನೀಡುತ್ತಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಿಜಿಎಸ್ ಪಾಲಿಟೆಕ್ನಿಕ್ ಮತ್ತು ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳು ಕೆಎಸ್ಆರ್ಟಿಸಿ ಬಸ್ ಕೊರತೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ನಲ್ಲಿ ಬಸ್ಗಳು ಓಡಾಡುವುದು ತೀರಾ ಕಡಿಮೆ ಎನ್ನಲಾಗಿದೆ.
ಬೇಡಿಕೆಯಷ್ಟು ರೈಲ್ವೆ ಸೇವೆ ಸಹ ಇಲ್ಲ
ಚಿಕ್ಕಬಳ್ಳಾಪುರದಿಂದ ದೇವನಹಳ್ಳಿ ಮತ್ತು ಕೋಲಾರಕ್ಕೆ ಕೆಎಸ್ಆರ್ಟಿಸಿ ಬಸ್ಗಳು ಪ್ರಮುಖವಾಗಿ ಬೆಳಗ್ಗೆ ಮತ್ತು ಸಂಜೆಯ ಪೀಕ್ ಅವರ್ನಲ್ಲಿ ಲಭ್ಯವಿಲ್ಲ. ನೈರುತ್ಯ ರೈಲ್ವೆ ಭಾರಿ ಬೇಡಿಕೆಯ ನಡುವೆಯೂ ಸಾಕಷ್ಟು ರೈಲು ಸೇವೆಗಳನ್ನು ನಡೆಸುತ್ತಿಲ್ಲ. ಇವೆಲ್ಲವುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಒಂದು ಬಸ್ ಹಿಡಿಯಲು ಸಾಕಷ್ಟು ಕಾಲ ವಿದ್ಯಾರ್ಥಿಗಳು ಕಾಯುವ ಸ್ಥಿತಿ ಇದೆ.
ಖಾಸಗಿ ವಾಹನಗಳ ಅವಲಂಬನೆ ಹೆಚ್ಚು
ಚಿಕ್ಕಬಳ್ಳಾಪುರಕ್ಕೆ ಬರುವ ಒಂದಷ್ಟು ಬಸ್ಗಳೇ ದಿನವೂ ತುಂಬಿ ತುಳುಕುತ್ತಿರುತ್ತವೆ. ವಿದ್ಯಾರ್ಥಿಗಳು ಫುಟ್ಬೋರ್ಡ್ನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು. ಕನಕಪುರ ರಸ್ತೆಯಲ್ಲಿ, ದಯಾನಂದ ಸಾಗರ್ ಅಕಾಡೆಮಿ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ಮತ್ತು ಜೈನ್ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳ ಬಳಿ ಕೆಎಸ್ಆರ್ಟಿಸಿ ಬಸ್ಗಳು ನಿಲ್ಲುವುದಿಲ್ಲ. ಇದರಿಂದಾಗಿ ಹೆಚ್ಚು ಸಮಯ ಕಾಯಲು ಅಥವಾ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಚಳ್ಳಕೆರೆ ಮತ್ತು ಚಿತ್ರದುರ್ಗ, ಕುಣಿಗಲ್ ಮತ್ತು ತುಮಕೂರು, ರಾಮನಗರ ಮತ್ತು ಬಿಡದಿ, ಅರಸೀಕೆರೆ ಮತ್ತು ಭದ್ರಾವತಿ, ತುರುವೇಕೆರೆ ಮತ್ತು ತಿಪಟೂರು, ಮೈಸೂರು ಮೂಲಕ ನಂಜನಗೂಡಿನಿಂದ ಗುಂಡ್ಲುಪೇಟೆ, ಮೈಸೂರು ಮತ್ತು ಚಾಮರಾಜನಗರ, ಮೈಸೂರು ಮತ್ತು ಮಳವಳ್ಳಿ ಮತ್ತು ಮಂಗಳೂರು ಮತ್ತು ಪುತ್ತೂರು ನಡುವೆ ಸಂಚಾರಕ್ಕೆ ಕೆಎಸ್ಆರ್ಟಿಸಿ ಬಸ್ಗಳಿಗೆ ಭಾರಿ ಬೇಡಿಕೆ ಇದೆ.
ತುರುವೇಕರೆ, ತಿಪಟೂರು ಕಡೆ ಬಸ್ ಇಲ್ಲ
ಚಾಮರಾಜನಗರದ ಹನೂರಿನಲ್ಲಿ ಇತ್ತೀಚೆಗಷ್ಟೆ ವಿದ್ಯಾರ್ಥಿಗಳು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ತುಮಕೂರಿನ ನಿವಾಸಿ ಸುನೀಲ್ ಎಂಬುವವರು, ಬೆಳಿಗ್ಗೆ ತುರುವೇಕೆರೆಯಿಂದ ತಿಪಟೂರು ಕಡೆಗೆ ಬಸ್ಸುಗಳಿಲ್ಲ, ಇದರಿಂದ ಹಲವಾರು ವಿದ್ಯಾರ್ಥಿಗಳು ಮತ್ತು ಕಚೇರಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತುಮಕೂರಿನ ವಿಶ್ವವಿದ್ಯಾನಿಲಯದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್ಸು ಹತ್ತಲು ಹರಸಾಹಸ ಪಡುತ್ತಿದ್ದಾರೆ ಎಂದು ಸಮಸ್ಯೆ ಕುರಿತು ಮಾಹಿತಿ ನೀಡಿದರು.
4 ವರ್ಷದಿಂದ ಕೆಎಸ್ಆರ್ಟಿಸಿಗೆ ನೇಮಕಾತಿ ಆಗಿಲ್ಲ
ಬಸ್ಗಳ ಕೊರತೆ ಕುರಿತು ಪ್ರತಿಕ್ರಿಯಿಸಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ಹೊಸದಾಗಿ ನೇಮಕಾತಿ ಆಗಲಿ, ಎಸಿ ಅಲ್ಲದ ಸಾಮಾನ್ಯ ಬಸ್ಗಳ ಸಂಖ್ಯೆ ಹೆಚ್ಚಿಸಲಾಗಿಲ್ಲ. ಸಿಬ್ಬಂದಿ ನೇಮಕಾತಿಗೆ ಸರ್ಕಾರ ಅನುಮತಿ ನೀಡಬೇಕು. ಸಾರಿಗೆ ಮುಷ್ಕರದ ನಂತರ ಅನೇಕ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. ಅವರಲ್ಲಿ ಕೆಲವರು ಕೋವಿಡ್ -19 ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ. ನಮಗೆ ಹೆಚ್ಚಿನ ನಾನ್-ಎಸಿ ಬಸ್ಗಳು ಸಹ ಬೇಕು ಎಂದು ಅವರು ಹೇಳಿದರು.