ಜಾತಿ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿಗೆ 'ಡಿಜಿಟಲ್ ಟಚ್'
ಬೆಂಗಳೂರು, ನವೆಂಬರ್ 17: ಆಧಾರ್ ಮೂಲಕ ಇಲಾಖೆಗಳ ಸೇವೆಗಳನ್ನು ಜನರಿಗೆ ನೀಡಲು ಕರ್ನಾಟಕ ಸರಕಾರ ಮುಂದಾಗಿದೆ. ಈ ಸಂಬಂಧ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಜತೆಗೆ 12 ಅಂಕಿಗಳ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲು ನಿಯಮವನ್ನೂ ರೂಪಿಸುತ್ತಿದೆ.
ಈ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಪ್ರಮಾಣ ಪತ್ರ ಮತ್ತು ದಾಖಲೆ ಪತ್ರಗಳನ್ನು ಡಿಜಿಲಾಕರ್ ಮೂಲಕವೇ ನೀಡಲಾಗುತ್ತದೆ. ರಾಜ್ಯದಲ್ಲಿ 6.18 ಕೋಟಿ ಜನ ಆಧಾರ್ ಹೊಂದಿದ್ದು, 1.41 ಲಕ್ಷ ಡಿಜಿಲಾಕರ್ ಖಾತೆಗಳಿವೆ. ಇದರಲ್ಲಿ ಜನನ ಪ್ರಮಾಣ ಪತ್ರದಿಂದ ಹಿಡಿದು ಎಲ್ಲ ವೈಯಕ್ತಿಕ ದಾಖಲೆ ಪತ್ರಗಳನ್ನೂ ಸಂಗ್ರಹಿಸಿಟ್ಟುಕೊಳ್ಳಬಹುದು.

ಜತೆಗೆ ಆಧಾರ್ ಸಂಖ್ಯೆಗಳ ಆಧಾರದ ಮೇಲೆ ಇ-ಸೈನ್ ವ್ಯವಸ್ಥೆಯನ್ನೂ ಅನುಷ್ಠಾನಗೊಳಿಸಲೂ ಕರ್ನಾಟಕ ಸರಕಾರ ಮುಂದಾಗಿದೆ. ಇದರಿಂದ ದಾಖಲೆ ಪಡೆಯಲು ಖುದ್ದಾಗಿ ಹಾಜರಾಗಿ ಸಹಿ ಹಾಕುವ ಅಗತ್ಯ ಇರುವುದಿಲ್ಲ.
ಇದನ್ನು ಪ್ರಯೋಗಾರ್ಥ ಎರಡು ಇಲಾಖೆಗಳಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸದ್ಯ ಕಂದಾಯ ಇಲಾಖೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸಲು ಹಾಗೂ ಆಹಾರ ಇಲಾಖೆಯಲ್ಲಿ ಪಡಿತರ ಚೀಟಿ ಹಂಚಲು ಡಿಜಿಲಾಕರ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ.
ಸರ್ಕಾರವೇ ಸಾರ್ವಜನಿಕರಿಗೆ ಡಿಜಿಲಾಕರ್ ಖಾತೆಯನ್ನು ತೆರೆದುಕೊಡಲಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿಯಾಗಲಿದೆ. ಸಾರ್ವಜನಿಕರು ದಾಖಲೆ ಪತ್ರ ಪಡೆಯಲು ಸೇವಾ ಕೇಂದ್ರಕ್ಕೆ ಹೋಗಿ, ಆನ್ಲೈನ್ ಬೆರಳಚ್ಚು ಒತ್ತಿ, ವಿದ್ಯುನ್ಮಾನ ಸಹಿ ದೃಢೀಕರಿಸಿದರೆ ಸಾಕು, ಪ್ರಮಾಣ ಪತ್ರ ಅದೇ ಕ್ಷಣದಲ್ಲಿ ಸಿಗಲಿದೆ.
ಪ್ರತಿ ವಿದ್ಯುನ್ಮಾನ ಸಹಿಗೆ 5 ರೂಪಾಯಿ ಶುಲ್ಕವಿದ್ದು, ಸರ್ಕಾರವೇ ಈ ವೆಚ್ಚವನ್ನು ಭರಿಸಲಿದೆ.












Click it and Unblock the Notifications