ಬಿಡಿಯಾಗಿ ಸಿಗರೇಟು, ಬೀಡಿ ಮಾರಾಟ ನಿಷೇಧ ಸದ್ಯಕ್ಕಿಲ್ಲ
ಬೆಂಗಳೂರು, ಜೂ. 04 : ರಾಜ್ಯದಲ್ಲಿ ಬೀಡಿ, ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳನ್ನು ಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧಿಸಬೇಕೇ? ಎಂಬ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ವರದಿ ತರಿಸಿಕೊಳ್ಳಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಂಜೆ ನಡೆದ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. [ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಲ್ಲ]

ಈಗಾಗಲೇ ಬೀಡಿ, ಸಿಗರೇಟು ಇತರೆ ತಂಬಾಕು ಉತ್ಪನ್ನಗಳನ್ನು ಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧಿಸಿರುವ ರಾಜ್ಯಗಳ ಜೊತೆ ಮಾತುಕತೆ ನಡೆಸಿ ವರದಿ ತರಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಅವರಿಗೆ ಸೂಚನೆ ನೀಡಿದ್ದಾರೆ. [ಸರ್ಕಾರಿ ಕಚೇರಿಯಲ್ಲಿ ಧೂಮಪಾನ ಮಾಡುವಂತಿಲ್ಲ]
ಬಿಡಿ-ಬಿಡಿಯಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುವುದರಿಂದ ಗ್ರಾಹಕನಿಗೆ ಕೈಗೆಟುಕುವ ಬೆಲೆಯಲ್ಲಿ ಬೀಡಿ-ಸಿಗರೇಟುಗಳು ದೊರೆಯುತ್ತವೆ. ಅಲ್ಲದೆ, ಒಂದು ಇಡೀ ಪ್ಯಾಕೇಟ್ ಬೀಡಿ-ಸಿಗರೇಟು ಖರೀದಿಸುವುದು ಆರ್ಥಿಕವಾಗಿ ಎಲ್ಲರಿಗೂ ಸಾಧ್ಯವಾಗುವುದಿಲ್ಲ, ಆದ್ದರಿಂದ ನಿಷೇಧ ಮಾಡಬಾರದು ಎಂಬುದು ಒಂದು ವಾದ. [ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ, ನಷ್ಟ]

ಬಿಡಿ-ಬಿಡಿ ಮಾರಾಟ ನಿಷೇಧಿಸಿದರೆ ಪ್ಯಾಕೇಟ್ ಗಟ್ಟಲೆ ಬೀಡಿ-ಸಿಗರೇಟು ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆಯೇ? ಎಂಬ ಬಗ್ಗೆಯೂ ಸರ್ಕಾರ ಪರಿಶೀಲಿಲನೆ ನಡೆಸಲಿದೆ. ಮಾರಾಟ ನಿಷೇಧಿಸಿದರೆ ಹೃದಯ ಸಂಬಂಧಿ ಸಮಸ್ಯೆಗಳು, ಶ್ವಾಸಕೋಶದ ತೊಂದರೆಗಳು ಹಾಗೂ ಕ್ಯಾನ್ಸರ್ ರೋಗಗಳ ನಿಯಂತ್ರಣಕ್ಕೆ ಎಷ್ಟು ಸಹಕಾರವಾಗಲಿದೆ ಎಂದು ಸರ್ಕಾರ ಚಿಂತನೆ ನಡೆಸಲಿದೆ.
ಬೀಡಿ, ಸಿಗರೇಟು ಬಿಡಿ ಮಾರಾಟವನ್ನು ಈಗಾಗಲೇ ನಿಷೇಧಿಸಿರುವ ಮಹಾರಾಷ್ಟ್ರ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಮಾರಾಟದ ನಂತರ ಉಂಟಾಗಿರುವ ಪರಿಣಾಮಗಳೇನು ಎಂದು ವರದಿ ತರಿಸಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ.












Click it and Unblock the Notifications