ಪುನೀತ್ಗೆ 'ಕರ್ನಾಟಕ ರತ್ನ'- ಶೀಘ್ರದಲ್ಲಿಯೇ ದಿನಾಂಕ ನಿಗದಿ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ.17: ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ಕೊಡುವ ಸಂಬಂಧ ಆದಷ್ಟು ಬೇಗ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪುನೀತ್ ರಾಜ್ಕುಮಾರ್ 47ನೇ ಹಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿರುವ ಬಸವರಾಜ ಬೊಮ್ಮಾಯಿ ಅವರು ಗುರುವಾರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದರು.
'ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ ಇದೆ. ಅವರು ಇದ್ದಿದ್ದರೆ ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ, ಅವರನ್ನು ಕಳೆದುಕೊಂಡ ದುಃಖದಲ್ಲಿದ್ದೇವೆ. ಆದರೆ. ಅವರು ಪ್ರೇರಣೆ ಆಗಿದ್ದಾರೆ. ಅವರ ಆದರ್ಶದ ಬದುಕು, ಸಾರ್ವಜನಿಕವಾಗಿ ನಡೆದುಕೊಂಡ ರೀತಿ, ಬಡವರಿಗೆ ಸಹಾಯ, ದಾನ ಮಾಡಿದ ರೀತಿ ಎಲ್ಲರಿಗೂ ಪ್ರೇರಣೆ. ಚಿಕ್ಕ ವಯಸ್ಸಿಗೆ ಆದರ್ಶ ಪ್ರಾಯರಾಗಿ ಬದುಕಿದರು' ಎಂದು ಹೇಳಿದರು.

ಪುನೀತ್ಗೆ ಅವರಿಗೆ ಕರ್ನಾಟಕ ರತ್ನ ಕೊಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಆದಷ್ಟು ಬೇಗ ಅವರ ಕುಟುಂಬದವರೊಂದಿಗೆ ಮಾತನಾಡಿ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಲಾಗುವುದು. ಪುನೀತ್ ಅವರಿಗೆ ಮತ್ತು ರಾಜ್ಕುಮಾರ್ ಅವರಿಗೆ ಗೌರವ ಕೊಡಲು ಯಾವ ರೀತಿಯ ಕಾರ್ಯಕ್ರಮ ಆಯೋಜಿಸಬೇಕು ಎಂಬುದರ ಕುರಿತು ಸಮಿತಿಯೊಂದನ್ನು ರಚಿಸಲಾಗುವುದು. ಆ ಮೂಲಕ ಎಲ್ಲರೂ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸಹ ಇಂದು ಬಿಡುಗಡೆ ಆಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.












Click it and Unblock the Notifications